ವಿಜಯನಗರ/ಕೊಟ್ಟೂರು:ಮೇ:20:- ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೊನ್ನಿಹಳ್ಳಿ, ಕೆ.ಕೋಡಿಹಳ್ಳಿ ಹಾಗೂ ಮಲ್ಲನಾಯಕನಹಳ್ಳಿಯಲ್ಲಿ ತಲಾ ಒಂದೊಂದು ಮನೆಗಳು ಬಿದ್ದಿರುತ್ತವೆ. ಬೆಳೆ ಹಾನಿಯ ಬಗ್ಗೆ ವರದಿಯಾಗಿರುವುದಿಲ್ಲ. ಬೆಳೆ ಹಾನಿಗಳು ಸಂಭವಿಸಿದಲ್ಲಿ ತೋಟಗಾರಿಕೆ/ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿಯಾಗಿ ಸ್ಥಳ ಪರಿಶೀಲಿಸಿ ನಷ್ಟದ ವರದಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ. ಯಾವುದೇ ಜೀವ/ಪ್ರಾಣ ಹಾನಿಯಾಗಿರುವುದಿಲ್ಲ. ವಾಯುಭಾರ ಕುಸಿತದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಯಾವುದೇ ರೀತಿಯ ಹಾನಿಯಾದಲ್ಲಿ ತಕ್ಷಣವೇ ಕಛೇರಿಗೆ ಹಾಗೂ ತಹಶೀಲ್ದಾರರ ಮೊಬೈಲ್ ಗೆ ಮಾಹಿತಿ ಹಾಕುವಂತೆ ಹಾಗೂ ಕೇಂದ್ರಸ್ಥಾನದಲ್ಲಿ ಕಡ್ಡಾಯವಾಗಿ ಹಾಜರಿದ್ದು ಮಾಹಿತಿ ನೀಡುವಂತೆ ತಾಲೂಕಿನ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಲಾಗಿರುತ್ತದೆ ಎಂದು ತಹಶೀಲ್ದಾರರಾದ ಎಂ. ಕುಮಾರಸ್ವಾಮಿಯವರು ತಿಳಿಸಿದರು.
ಇಂದು ತಾಲೂಕಿನಲ್ಲಿ ಸಂಚರಿಸಿ ಮಳೆಯಿಂದ ಹಾನಿಯಾದ ಮನೆಗಳ ವೀಕ್ಷಣೆ ಮಾಡಿದರು. ಈ ಸಮಯದಲ್ಲಿ ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ, ಗ್ರಾಮ ಲೆಕ್ಕಿಗರು ಇದ್ದರು.
ವರದಿ: ಶಿವರಾಜ್ ಕನ್ನಡಿಗ