ಕೊಟ್ಟೂರು:ಜೂನ್:01:- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಟ್ಟೂರು ತಾಲ್ಲೂಕು, ವಿಜಯನಗರ ಜಿಲ್ಲೆಯ ರೈತ ಸಂಘದ ಸದಸ್ಯರು, ತಹಶೀಲ್ದಾರರಿಗೆ ರಾಷ್ಟ್ರೀಯ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್, ಕವಿತಾ ಕುರುಕುಂಟೆಯವರ ಮೇಲೆ ಪತ್ರಿಕಾ ಗೋಷ್ಠಿ ನಡೆಯುವ ಸಮಯಕ್ಕೆ ದುಷ್ಕರ್ಮಿಗಳು ಮೈಕ್ನಿಂದ ಹಲ್ಲೆ ನಡೆಸಿ, ಮಸಿ ಬಳಿದಿರುವುದು ಅಕ್ಷಮ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ರೈತ ಸಂಘದ ರಾಷ್ಟ್ರೀಯ ಮುಖಂಡರಾದ ಮತ್ತು ರಾಜ್ಯದ ಅನೇಕ ರೈತ ಮುಖಂಡರು ಸೇರಿ ಪತ್ರಿಕಾ ಗೋಷ್ಠಿ ಮಾಡುತ್ತಿದ್ದ ಸಮಯದಲ್ಲಿ, ಐದು-ಆರು ಜನ ಗೂಂಡಾಗಳ ಗುಂಪು ಏಕಾಏಕಿ ಮೋದಿಯ ಒಂದು ಪೋಟೋ ಹಿಡಿದುಕೊಂಡು ಮೋದಿ ಮೋದಿ ಎಂದು ಕೂಗಾಡುತ್ತಾ ಅದರಲ್ಲಿ ಒಬ್ಬ ಮಾಧ್ಯಮದ ಮೈಕ್ ಹಿಡಿದು ರಾಕೇಶ್ ಟಿಕಾಯತ್ ರವರ ಮೇಲೆ ಹಲ್ಲೆ ಮಾಡಿರುತ್ತಾರೆ, ಮತ್ತೋರ್ವ ಅಲ್ಲೇ ಇದ್ದ ಮುಖಂಡರ ಮೇಲೆ ಮಸಿ ಹಾಕಿ ಗೂಂಡಾಗಳ ರೀತಿ ದೌರ್ಜನ್ಯವೆಸಗಿರುತ್ತಾರೆ. ಈ ರೀತಿಯ ಅನ್ನ ಕೊಡುವ ರೈತರ ಮೇಲೆ ಈ ರೀತಿಯ ದಾಳಿಗಳನ್ನು ರಾಜ್ಯ ರೈತ ಸಂಘ ಖಂಡಿಸುತ್ತದೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ, ಗೂಂಡಾ ವರ್ತನೆ ತೋರಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಎನ್.ಭರಮಪ್ಪ, ಸೋಮಣ್ಣ, ಎಂ.ಕೊಟ್ರೇಶಪ್ಪ, ಬಸವರಾಜ ಕೋಗಳಿ, ಟಿ.ಹನುಮಂತಪ್ಪ, ಜಿ.ಮರುಳಸಿದ್ದಪ್ಪ, ಎನ್.ನಾಗರಾಜ ಇನ್ನು ಮುಂತಾದ ರೈತ ಮುಖಂಡರು ಹಾಜರಿದ್ದರು.
ವರದಿ: ಶಿವರಾಜ್ ಕನ್ನಡಿಗ