ಸಂಡೂರು: ಜು: 07: ತಾಲೂಕಿನ ಎಲ್ಲಾ ಶಾಲೆಗಳನ್ನೂ ಸಹ ಮಾದರಿ ಶಾಲೆಗಳನ್ನಾಗಿ ಮಾಡಲು ಎಲ್ಲಾ ರೀತಿಯ ಯೋಜನೆ ಮಾಡಲಾಗಿದ್ದು ಅದಕ್ಕೆ ಅಧಿಕಾರಿಗಳು ಕ್ರಿಯಾ ಯೋಜನೆ ಮತ್ತು ಸಭೆಯಲ್ಲಿ ತಿಳಿಸುವ ಮೂಲಕ ಕಾರ್ಯಗತ ಮಾಡಬೇಕು ಎಂದು ಶಾಸಕ ಈ.ತುಕರಾಂ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಬಾಲಕೀಯರ ಪ್ರೌಢಶಾಲಾ ಅವರಣದಲ್ಲಿ 3 ಕೋಟಿ ವೆಚ್ಚದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿ ಸಂಡೂರು ಮಾದರಿ ತಾಲೂಕನ್ನಾಗಿಸಲು ಶಿಕ್ಷಣಕ್ಕೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು, ಕಡ್ಡಾಯವಾಗಿ ತಾಲೂಕಿಗೆ ಶಿಕ್ಷಕರ ಕೊರತೆ ಇಲ್ಲದಂತೆ, ವಿದ್ಯಾರ್ಥಿಗಳಿಗೆ ಬೇಕಾದ ಅಧುನಿಕ ಶಿಕ್ಷಣಕ್ಕೆ ಅನ್ ಲೈನ್ ತರಬೇತಿ, ಸ್ಮಾರ್ಟ ಕ್ಲಾಸ್ಗಳ ನಿರ್ಮಾಣ ಮಾಡಲಾಗುವುದು, ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಅಧುನಿಕ ಕಚೇರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮೆಟ್ರಿಕ್ ಪೂರ್ವ ಬಾಲಕೀಯರ ವಸತಿ ನಿಲಯ ನಿರ್ಮಾಣಕ್ಕೆ 3 ಕೋಟಿ ಡಿ.ಎಂ.ಎಫ್. ನಿಧಿಯಡಿಯಲ್ಲಿ ನಿರ್ಮಿಸಲು ಭೂಮಿಪೂಜೆಯನ್ನು ನೆರವೇರಿಸಿದರು, ಮಕ್ಕಳು ಅದರಲ್ಲೂ ಬಾಲಕಿಯರು ಪ್ರೌಢಶಿಕ್ಷಣ ಮುಗಿಸಿ ಅರ್ಧಕ್ಕೆ ನಿಲ್ಲಬಾರದು ಎನ್ನುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿನಿಯರಿಗೆ ವಸತಿ ನಿಲಯವನ್ನು ಸ್ಥಾಪಿಸಲಾಗುವುದು, ಇದನ್ನು ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ತಾಲೂಕು ಕ್ರೀಡಾಂಗಣದ ಅವರಣದಲ್ಲಿ ನೂತನ ಜಿಮ್ ಹಾಗೂ ಇಂಡೋರ್ ಸ್ಟೇಡಿಯಂ ನಿರ್ಮಾಣಕ್ಕೆ 70 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಅದರ ಭೂಮಿ ಪೂಜೆಯನ್ನು ನೆರವೇರಿಸಿದ್ದು ಶೀಘ್ರದಲ್ಲಿಯೇ ಅದನ್ನು ಪೂರ್ಣ ಗೊಳಿಸಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಒಟ್ಟಾರೆಯಾಗಿ ತಾಲೂಕಿನಾದ್ಯಂತ ಶಿಕ್ಷಣಕ್ಕೆ ಯಾವುದೇ ರೀತಿಯ ಕೊರತೆ ಉಂಟಾಗದಂತೆ ತಡೆಯುವ ಮಹತ್ತರ ಕಾರ್ಯವನ್ನು ಮಾಡಲಾಗುತ್ತಿದೆ, ಒಂದು ವೇಳೆ ಬೇರೆ ಕಾಮಗಾರಿ ನಿಂತರೂ ಪರವಾಗಿಲ್ಲ ಶಿಕ್ಷಣಕ್ಕೆ ಹಣಕಾಸಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು, ಕಾರಣ ನಾವು ಈ ಹಿಂದೆ ಅತಿ ಕಷ್ಟದಿಂದ ಶಿಕ್ಷಣ ಪಡೆದುಕೊಂಡಿದ್ದು ಸಂಡೂರು ತಾಲೂಕಿನ ವಿದ್ಯಾರ್ಥಿಗಳು ಜಗತ್ತಿನ 190 ರಾಷ್ಟ್ರಗಳಲ್ಲಿಯೂ ಸಹ ಒಂದಲ್ಲ ಒಂದು ಹುದ್ದೆಯನ್ನು ಪಡೆದುಕೊಂಡಿದ್ದಾರೆ, ಅದರೆ ರೀತಿ ಮುಂದಿನ ಪೀಳಿಗೆಯೂ ಸಹ ಸಾಗಬೇಕು ಎನ್ನುವ ಕನಸ್ಸನ್ನು ಹೊಂದಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪನಿರ್ದೇಶಕರು (ಡಿಡಿಪಿಐ) ಅಂದಾನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್, ಡಾ.ಐ.ಅರ್. ಅಕ್ಕಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಿತ್ರಿಕಿ ಸತೀಶ್, ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಪುರಸಭೆಯ ಮುಖ್ಯಾಧಿಕಾರಿ ಖಾಜಾಸಾಹೇಬ್, ಗಡಂಬ್ಲಿ ಚನ್ನಪ್ಪ, ತಾಜ್ ಫಕೃದ್ದೀನ್, ಪುರಸಭೆಯ ಅಧ್ಯಕ್ಷೆ ಅನಿತಾ ವಸಂತಕುಮಾರ್, ರೋಷನ್ ಜಮೀರ್, ಉಪಾಧ್ಯಕ್ಷ ಈರೇಶ್ ಸಿಂಧೆ, ಎಲ್.ಹೆಚ್. ಶಿವಕುಮಾರ್,ಕೆ.ವಿ. ಸುರೇಶ್, ಪುರಸಭೆಯ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.