ಸಂಡೂರು:ಜುಲೈ:23:-ತಾಲೂಕಿನ ದೋಣಿಮಲೈನಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಮಗದಲ್ಲಿ ಇತ್ತೀಚೆಗೆ ಉದ್ಯೋಗಕ್ಕಾಗಿ ಆಹ್ವಾನಿಸಿದ ಪರೀಕ್ಷೆಗಳಲ್ಲಿ ಸ್ಥಳೀಯರನ್ನು ನಿರ್ಲಕ್ಷ್ಯಮಾಡಿ ಹೊರ ರಾಜ್ಯದವರನ್ನು ಆಯ್ಕೆ ಮಾಡಿದ್ದಾರೆ, ಇದು ಅನ್ಯಾಯ ಎಂದು ಶಾಸಕ ಈ.ತುಕಾರಾಮ್ ನೇತೃತ್ವದಲ್ಲಿ ಹಲವರು ಪಟ್ಟಣದ ಸರಕಾರಿ ಪ್ರವಾಸಿ ಮಂದಿರದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ನನಗೆ ಜಾತಿ ವ್ಯವಸ್ಥೆ-ರಾಜಕೀಯ ಎಂಬುದು ಬೇಕಾಗಿಲ್ಲ ನಾವೆಲ್ಲರೂ ಒಂದೇ ನನ್ನ ಕ್ಷೇತ್ರದ ಜನತೆಗೆ ಎಲ್ಲಿ ಅನ್ಯಾಯವಾಗುತ್ತದೆಯೋ ಅಲ್ಲಿ ನಾನು ಅವರ ಜೊತೆಗಿರುತ್ತೇನೆ, ದೀಪ ತಾನು ಸುಟ್ಟು ಇನ್ನೊಬ್ಬರಿಗೆ ಬೆಳಕು ನೀಡುತ್ತದೆ. ಹಾಗೇ ನಾವು ಸುಡ್ತೀವಿ ನಮ್ಮವರಿಗೆ ಒಳ್ಳೆಯದಾಗಲಿ ಬೆಳಕಾಗಲಿ ಎಂಬುದೇ ನನ್ನ ಗುರಿಯನ್ನಿಕೊಂಡು ಅಂತಹ ರಾಜಕೀಯವನ್ನು ಸಂಡೂರಲ್ಲಿ ಮಾಡಿದ್ದೀವಿ ನನ್ನಲ್ಲಿ ವಿಶ್ವಾಸವಿಡಿ ಎಂದರು.
ನನ್ನ ಈ ಹೋರಾಟ ಗುರಿಮುಟ್ಟಿ ನ್ಯಾಯ ಸಿಗೋವರೆಗೂ,ನನ್ನ ಪ್ರಾಣ ಹೋದ್ರೂ ಚಿಂತೆ ಇಲ್ಲ ನಿಮ್ಮ ಜೊತೆ ಇರುತ್ತೇನೆ. ಈಗ ನೇಮಕಗೊಂಡಿರೋ ಅಭ್ಯರ್ಥಿಗಳನ್ನು ಬೇರೇಕಡೆ ನೇಮಕ ಮಾಡಿಕೊಳ್ಳಿ ಖಾಲಿ ಇರೋ ಜಾಗಗಳಿಗೆ ಮತ್ತೊಮ್ಮೆ ಅರ್ಜಿ ಅಹ್ವಾನಿಸಿ ನೇಮಕಮಾಡಿಕೊಳ್ಳಬೇಕು.
ಅನರ್ಹರಾಗಿದ್ದರು ಬೇರೆ ರಾಜ್ಯದವರನ್ನು ನೇಮಕಮಾಡಿಕೊಳ್ಳುವಾಗ,ನಮ್ಮ ಮುಗ್ದತೆಯನ್ನು, ತಾಳ್ಮೆಯನ್ನೇ ದೌರ್ಬಲ್ಯ ಅಂತಾ ನೀವು ತಿಳ್ಕೊಂಡಿದ್ರೆ ತಪ್ಪು ಸ್ಥಳೀಯರಾದ ನಾವು ಸಹ ಸಿಂಹಗಳು ಅಂತ ತೋರಿಸೋಣ ನೀವೆಲ್ಲರೂ ಸೇರಿ ಒಂದು “ಸಿಂಹದಮರಿ ಸೈನ್ಯ” ವನ್ನು ಕಟ್ಟಿ ಸಂತೋಷ್ ಲಾಡ್, ಹಾಗೂ ನಾನು ನಿಮ್ಮ ಸೈನ್ಯದ ಜೊತೆಯಿರುತ್ತೇವೆ ಎಂದರು.
ಎನ್ಎಂಡಿಸಿಯ ವಿವಿಧ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಸಂಡೂರು ಎನ್ಎಂಡಿಸಿಯಲ್ಲಿ ಉದ್ಯೋಗ ನೀಡುವಲ್ಲಿ ಅನ್ಯಾಯವಾಗಿದೆ ಎಂದು ಸ್ಥಳೀಯರ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಅನ್ಯರಾಜ್ಯದ ಅಭ್ಯರ್ಥಿಗಳಿಗೆ ಶೇ.75 ರಷ್ಟು ನೀಡಿ, ಸ್ಥಳೀಯ ಅಭ್ಯರ್ಥಿಗಳಿಗೆ ಬೆರಳೆಣಿಕೆಯಷ್ಟು ಮಾತ್ರ ನೇಮಕಾತಿ ಮಾಡಿಕೊಳ್ಳುತ್ತಿರುವುದು ಕಂಪನಿಯು ಸ್ಥಳೀಯ ವಿದ್ಯಾವಂತ ಯುವ ಜನಾಂಗಕ್ಕೆ ಮಾಡಿದ ಮೋಸ ಎಂದು ಶಾಸಕ ತುಕಾರಾಮ್ ಕಿಡಿಕಾರಿದರು.
ಎನ್ ಎಂಡಿಸಿ ಕಂಪನಿಯು ವರ್ಷಕ್ಕೆ ಸುಮಾರು 1.40 ಕೋಟಿ ಟನ್ ಅದಿರು ಉತ್ಪಾದನೆ ಮಾಡುತ್ತದೆ. ಎಂಎಂಡಿಆರ್ ಕಾಯಿದೆ ಪ್ರಕಾರ ಸ್ಥಳೀಯ ಜನತೆಗೆ ಉದ್ಯೋಗ ನೀಡಬೇಕು. ಸಿ ಅಂಡ್ ಆರ್ ಪ್ರಕಾರ ಶೇ.70 ರಷ್ಟು ಉದ್ಯೋಗಾವಕಾಶ ಸ್ಥಳೀಯವಾಗಿ ನೀಡಬೇಕು. ಅಕ್ರಮವಾಗಿ ನೇಮಕ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ನ್ಯಾಯ ಒದಗಿಸಿಕೊಡಲಾಗುವುದು. ಒಂದು ವೇಳೆ ನಮಗೆ ನ್ಯಾಯ ಸಿಗದಿದ್ದಲ್ಲಿ ಕಂಪನಿಗೆ ಮುತ್ತಿಗೆ ಹಾಕುವ ಮೂಲಕ ಕಂಪನಿಯನ್ನು ‘ಬಂದ್ ‘ ಮಾಡಲಾಗುವುದು.ಈ ವಿಚಾರದಲ್ಲಿ ನಾನು ಹಿಂಜರಿಯುವುದಿಲ್ಲ ಎಂದರು.
ನರಸಿಂಗಪುರ, ನವಿಲುಹಟ್ಟಿ ನಾರಾಯಣಪುರ, ಭುಜಂಗನಗರ ಮತ್ತಿತರ ಗ್ರಾಮಗಳ ಅನೇಕ ಮುಖಂಡರು, ರೈತ ಸಂಘ,ದಸಂಸ,ಗ್ರಾ.ಪಂ.ಸದಸ್ಯರು, ಉದ್ಯೋಗ ವಂಚಿತ ಯುವಕರು ಇದ್ದರು. ಜಿಲ್ಲಾಧಿಕಾರಿಗಳನ್ನು ಭೇಟಿಯಾದ ನಂತರ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ನಿರ್ಧಾರ ಮಾಡುವ ಬಗ್ಗೆ ನಿರ್ಧರಿಸಲಾಯಿತು. ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಅಕ್ರಮಗಳ ಬಗ್ಗೆ ಅಭ್ಯರ್ಥಿಗಳು ಶಾಸಕರಿಗೆ ಮಾಹಿತಿ ನೀಡಿ ಮನವರಿಕೆ ಮಾಡಿಕೊಟ್ಟರು.