ಡಿಕೆಶಿಗೆ ದಿಲ್ಲಿ ಕನಸು ಬೀಳುತ್ತಿದೆ

0
213

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದಿಲ್ಲಿಯ ಕನಸು ಬೀಳುತ್ತಿದೆಯಂತೆ.
ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಅವರಿಗೆ ತಕ್ಷಣವೇ ಮುಖ್ಯಮಂತ್ರಿಯಾಗುವ ಆಸೆ ಇತ್ತು.
ಈ ಕಾರಣದಿಂದ ಅವರು ದಿಲ್ಲಿಯಲ್ಲಿ ಕುಳಿತು ಐದು ದಿನ ಕಸರತ್ತು ನಡೆಸಿದರೂ ಅದು ಫಲ ನೀಡಲಿಲ್ಲ.
ಹೀಗಾಗಿ ಸೋನಿಯಾಗಾಂಧಿ ಅವರ ಮಾತಿಗೆ ಬಗ್ಗಿದ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಂಡು ಕರ್ನಾಟಕಕ್ಕೆ ಮರಳಿದರು.
ಹೀಗೆ ಮರಳಿದ ಅವರು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಡಿಸಿಎಂ ಆಗಿ ಕುಳಿತಿದ್ದಾರಾದರೂ ಸಿಎಂ ಹುದ್ದೆಯ ಮೇಲಿರುವ ಅವರ ಕನಸು ದಷ್ಟಪುಷ್ಟವಾಗಿಯೇ ಉಳಿದಿದೆ.
ಆದರೆ ಅದು ಮುಂದಿನ ದಿನಗಳಲ್ಲಿ ಈಡೇರಬೇಕಿರುವ ಮಾತು.ಹೀಗಾಗಿ ರಾಜ್ಯದಲ್ಲಿ ಯಾರು ಏನೇ ಮಾತನಾಡಿದರೂ ಡಿ.ಕೆ.ಶಿವಕುಮಾರ್ ಮೌನ ವಹಿಸುತ್ತಾರೆ.ಮುಂಚೆಲ್ಲ ಒಂದು ಮಾತು ಬಂದರೆ ಸಟ್ಟಂತ ಪ್ರತಿಕ್ರಿಯಿಸುತ್ತಿದ್ದ ಅವರು ಈಗ ಪ್ರತಿಕ್ರಿಯಿಸಲು ಸಮಯ ತೆಗೆದುಕೊಳ್ಳುತ್ತಾರೆ.ಅವರು ಪಕ್ವ ನಾಯಕರಾಗುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.
ತೀರಾ ಇತ್ತೀಚೆಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು,ಕರ್ನಾಟಕದಲ್ಲಿ ಮುಂದಿನ ಐದು ವರ್ಷಗಳ ಕಾಲ ನಾಯಕತ್ವ ಬದಲಾವಣೆಯಿಲ್ಲ ಎಂಬರ್ಥದಲ್ಲಿ ಮಾತನಾಡಿದರು.
ಅವರ ಈ ಮಾತಿನಿಂದ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಕೆರಳಿದ್ದರು.ಆದರೆ ಡಿಕೆಶಿ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯಿಸಲು ಹೋಗಲಿಲ್ಲ.ಯಾಕೆ ಅಂತ ಎಲ್ಲರೂ ಅಚ್ಚರಿಪಡುತ್ತಿರುವಾಗಲೇ ಬೆಂಗಳೂರಿನ ಸದಾಶಿವನಗರದಲ್ಲಿ ನೆಲೆಯಾಗಿರುವ ಮಾಜಿ ಮುಖ್ಯಮಂತ್ರಿಯೊಬ್ಬರ ಮಧ್ಯಸ್ಥಿಕೆಯಲ್ಲಿ ಡಿಕೆಶಿ ಮತ್ತು ಎಂ.ಬಿ.ಪಾಟೀಲರ ಡಿನ್ನರಿಗೆ ಡೇಟು ಫಿಕ್ಸಾಗಿದೆ ಎಂಬ ವರ್ತಮಾನ ಹರಿದಾಡುತ್ತಿದೆ.
ಅರ್ಥಾತ್,ತಮಗೆ ಯಾವ ಮೂಲಗಳಿಂದ ವಿರೋಧ ವ್ಯಕ್ತವಾಗಬಹುದು ಎಂಬುದನ್ನು ಗಮನಿಸುತ್ತಿರುವ ಡಿಕೆಶಿ ಸೈಲೆಂಟಾಗಿ ಅದನ್ನು ಸರಿಮಾಡಿಕೊಳ್ಳುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುವ ತಮ್ಮ ಕನಸಿಗೆ ಯಾವ ಅಡ್ಡಿಗಳು ಎದುರಾಗಬಾರದು ಎಂಬುದು ಡಿಕೆಶಿ ಯೋಚನೆ.ಅದೇ ಕಾಲಕ್ಕೆ ಅವರಿಗೆ ಒಂದಿಲ್ಲೊಂದು ದಿನ ರಾಷ್ಟ್ರ ರಾಜಕಾರಣಕ್ಕೇಕೆ ಹೋಗಬಾರದು ಎಂಬ ಯೋಚನೆ ಮೊಳೆತಿದೆಯಂತೆ.ಅಂದ ಹಾಗೆ ಮುಖ್ಯಮಂತ್ರಿಯಾಗುವುದು ಒಂದು ಗುರಿ.ಆದರೆ ಗುರಿ ಇಷ್ಟಕ್ಕೆ ಸೀಮಿತವಾಗಬಾರದಲ್ಲ?ಹೀಗಾಗಿ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟೇ ದಿಲ್ಲಿಯ ಮೇಲೂ ಅವರು ಕಣ್ಣು ಹಾಯಿಸುತ್ತಿದ್ದಾರೆ.
ಆದರೆ ಕಣ್ಣು ಹಾಯಿಸಬೇಕೆಂದರೆ ಅದಕ್ಕೆ ಒಂದು ಶಕ್ತಿಯಾದರೂ ಇರಬೇಕಲ್ಲ?ಹೀಗಾಗಿ ಅವರು ತಮ್ಮ ಕನಸಿನ ಬೆಂಗಳೂರು ಬ್ರಾಂಡ್ ಅನ್ನು ದೊಡ್ಡ ಮಟ್ಟದಲ್ಲಿ ಎಮರ್ಜ್ ಮಾಡಿ ಅರ್ಥವ್ಯವಸ್ಥೆಯ ಹೀರೋ ಅನ್ನಿಸಿಕೊಳ್ಳಲು,ಆ ಮೂಲಕ ದೇಶದ ಗಮನ ಸೆಳೆಯಲು ಬಯಸಿದ್ದಾರೆ.
ಆ ದೃಷ್ಟಿಯಿಂದ ಈಗವರ ಗಮನ ತೆಲಂಗಾಣದ ಮಂತ್ರಿ ಕೆ.ಟಿ.ಆರ್ ಮೇಲೆ ಬಿದ್ದಿದೆ.
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರ ಪುತ್ರ ಕಲ್ವಕುಂಟ್ಲ ತಾರಕ ರಾಮರಾವ್ ಅವರೇ ಈ ಕೆ.ಟಿ.ಆರ್.
ಇವತ್ತು ಭಾರತದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿರುವ ಉದ್ಯಮಿಗಳಿಗೆ ತಾರಕರಾಮರಾವ್ ಅಚ್ಚುಮೆಚ್ಚಿನ ವ್ಯಕ್ತಿ.ಅವರು ರೂಪಿಸುತ್ತಿರುವ ನೀತಿಗಳು ಅಮೆಜಾನ್ ಸೇರಿದಂತೆ ಜಾಗತಿಕ ಮಟ್ಟದ ದೊಡ್ಡ ದೊಡ್ಡ ಕಂಪನಿಗಳಿಗೆ ಪ್ರಿಯವಾಗಿವೆಯಷ್ಟೇ ಅಲ್ಲ.ದೊಡ್ಡ ಪ್ರಮಾಣದ ಬಂಡವಾಳ ತೆಲಂಗಾಣದತ್ತ ಹರಿದು ಬರುವಂತೆ ಮಾಡುತ್ತಿದೆ.
ಸಹಜವಾಗಿಯೇ ಇದು ಡಿ.ಕೆ.ಶಿವಕುಮಾರ್ ಅವರ ಕಣ್ಣರಳುವಂತೆ ಮಾಡಿದೆ.ಮುಂದಿನ ದಿನಗಳಲ್ಲಿ ಕೆ.ಟಿ.ಆರ್ ತರ ಕರ್ನಾಟಕಕ್ಕೆ ಬಂಡವಾಳ ಹರಿದು ಬರುವಂತೆ ಮಾಡಿದರೆ ತಮ್ಮ ಇಮೇಜೇ ಚೇಂಜ್ ಆಗಿಬಿಡುತ್ತದೆ ಎಂಬುದು ಡಿಕೆಶಿ ಲೆಕ್ಕಾಚಾರ.
ಇವತ್ತು ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿ ಇದೇ ಕೆಲಸ ಮಾಡಿ ಗುಜರಾತ್ ಮಾಡೆಲ್ ಅನ್ನು ಸೃಷ್ಟಿಸಿದರು.ಮತ್ತಿದರ ಪರಿಣಾಮವಾಗಿಯೇ ಅಹಮದಾಬಾದ್ ಟು ದಿಲ್ಲಿ ವಿಮಾನ ಹತ್ತಿದರು.
ಎಷ್ಟೇ ಆದರೂ ಮೋದಿ-ಅಮಿತ್ ಷಾ ಜೋಡಿ ತಮಗೆ ತಿಹಾರ್ ಜೈಲು ತೋರಿಸಿತ್ತಲ್ಲವೇ?ನಾಳೆ ಈ ಜೋಡಿಯ ಕಣ್ಣ‌ ಮುಂದೆಯೇ ರಾಷ್ಟ್ರ ರಾಜಕಾರಣದಲ್ಲಿ ತಲೆ ಎತ್ತಿ ನಿಲ್ಲಬೇಕು ಎಂಬುದು ಡಿಕೆಶಿ ಕನಸು.
ಇಂತಹ ಕನಸು ಕಾಣುತ್ತಿರುವ ಅವರಿಗೆ ಬೆಂಗಳೂರು ಬ್ರಾಂಡ್ ನ ಕನಸು ಮಾತ್ರವಲ್ಲ,ರಾಷ್ಟ್ರದಲ್ಲಿ ಕಾಂಗ್ರೆಸ್ ತೊರೆದಿರುವ ನಾಯಕರನ್ನು ಮರಳಿ ಕೈ ಪಾಳಯಕ್ಕೆ ಸೆಳೆಯುವ ಕನಸೂ ಬಿದ್ದಿದೆ.
ಹೀಗಾಗಿ ಸೀಮಾಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ,ತೆಲಂಗಾಣದಲ್ಲಿ ಬೀದಿ ಕಾಳಗ ನಡೆಸುತ್ತಿರುವ ಶರ್ಮಿಳಾರೆಡ್ಡಿ ಸೇರಿದಂತೆ ಹಲವರ ಜತೆ ಸಂಪರ್ಕದಲ್ಲಿರುವ ಡಿಕೆಶಿ,’ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿತ್ರ ಬದಲಾಗಲಿದೆ.ಇಂತಹ ಟೈಮಿನಲ್ಲಿ ನೀವು ಕಾಂಗ್ರೆಸ್ ನಲ್ಲಿರುವುದು ಒಳ್ಳೆಯದು’ ಅಂತ ಹೇಳಿದ್ದಾರೆ.
ಅವರ ಈ ಪ್ರಯತ್ನಗಳು ಎಷ್ಟರ ಮಟ್ಟಿಗೆ ಈಡೇರುತ್ತವೆ ಎಂಬುದು ಬೇರೆ ವಿಷಯ.ಆದರೆ ಅವರ ಇಂತಹ ಪ್ರಯತ್ನಗಳು ನಿಶ್ಚಿತವಾಗಿ ಅವರ ಇಮೇಜ್ ಅನ್ನು ಹೆಚ್ಚಿಸಲಿವೆ.

ಇವರಿಗೀಗ ಡಿಕೆಶಿ ರೋಲ್ ಮಾಡೆಲ್

ಹೀಗೆ ಕರ್ನಾಟಕದಿಂದ ಹಿಡಿದು ದಿಲ್ಲಿಯವರೆಗೆ ತಮ್ಮ ಪವರ್ ಹೆಚ್ಚಬೇಕು ಅಂತ ಡಿಕೆಶಿ ಬಯಸುತ್ತಿದ್ದರೆ,ಅವರನ್ನು ರೋಲ್ ಮಾಡೆಲ್ ಅಂತ ಭಾವಿಸುತ್ತಿರುವ ಒಂದು ಟೀಮು ದೇಶದಲ್ಲಿ ಕಾಣಿಸಿಕೊಂಡಿದೆ.
ಇದರಲ್ಲಿ ಅಮ್ ಆದ್ಮಿ ಪಕ್ಷದ ಮನಿಶ್ ಸಿಸೋಡಿಯಾ ಅವರಿಂದ ಹಿಡಿದು ತಮಿಳ್ನಾಡಿನ ಸಚಿವರಾಗಿದ್ದ ಸೆಂಥಿಲ್ ತನಕ ನಾಯಕರ ಒಂದು ದಂಡೇ ಇದೆ.
ಇಂತಹ ಬಹುತೇಕ ನಾಯಕರಿಗೀಗ ಡಿ.ಕೆ.ಶಿವಕುಮಾರ್ ಅವರೇ ಆದರ್ಶ ನಾಯಕ.
ಆಂಧ್ರದ ಖ್ಯಾತ ರಾಜಕೀಯ ವಿಶ್ಲೇಷಕ ಫ್ರೊ.ನಾಗೇಶ್ವರ್ ಅವರ ಪ್ರಕಾರ:ಇಂತಹ ಬೆಳವಣಿಗೆಗೆ ಡಿ.ಕೆ.ಶಿವಕುಮಾರ್ ಅವರು ಐಟಿ,ಇಡಿ,ಸಿಬಿಐ ಅನ್ನು ಎದುರಿಸಿದ ರೀತಿಯೇ ಕಾರಣ.
ಮಹಾರಾಷ್ಟ್ರದ ಎನ್.ಸಿ.ಪಿ ನಾಯಕ ಶರದ್ ಪವಾರ್ ಅವರು ತಮ್ಮ ಪುಸ್ತಕದಲ್ಲಿ ಒಂದು ಮಾತು ಬರೆಯುತ್ತಾರೆ.ದೇಶದಲ್ಲಿ ಇವತ್ತು ಪ್ರತಿಪಕ್ಷಗಳಲ್ಲಿರುವ ನಾಯಕರಿಗೆ ದಪ್ಪ ಚರ್ಮ ಮತ್ತು ತಾಳ್ಮೆ ಇರಬೇಕು ಎಂಬುದು ಈ ಮಾತು.ಅವರ ಈ ಮಾತನ್ನು ಉದಾಹರಿಸುವ ಫ್ರೊ.ನಾಗೇಶ್ವರ್,ದೇಶದಲ್ಲಿ ಇದಕ್ಕೆ ಸೂಕ್ತ ಉದಾಹರಣೆ ಅಂತಿದ್ದರೆ ಅದು ಡಿ.ಕೆ.ಶಿವಕುಮಾರ್ ಎನ್ನುತ್ತಾರೆ.
ಇವತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತನ್ನ ಹಿಡಿತದಲ್ಲಿರುವ ತನಿಖಾ ಸಂಸ್ಥೆಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿಕೊಳ್ಳುತ್ತಿದೆ.ಮತ್ತು ಇದೇ ಕಾರಣಕ್ಕಾಗಿ ಈ ತನಿಖಾ ಸಂಸ್ಥೆಗಳ ಶಕ್ತಿ ಕಡಿಮೆಯಾಗುತ್ತಿದೆ.
ಕಾರಣ?ಇಂತಹ ತನಿಖಾ ಸಂಸ್ಥೆಗಳ ಹೊಡೆತ ಅತಿಯಾದರೆ ಅದನ್ನು ಎದುರಿಸುವ ಶಕ್ತಿಯೂ ನಾಯಕರಲ್ಲಿ ಹೆಚ್ಚುತ್ತದೆ.
ಹೀಗೆ ದಿನ ಕಳೆದಂತೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ಡಿ.ಕೆ.ಶಿವಕುಮಾರ್ ಹೆಚ್ಚೆಚ್ಚು ಪರಿಣಾಮಕಾರಿಯಾಗಿ ಎದುರಿಸುತ್ತಾ ಬಂದಿದ್ದಾರೆ.
ಹಾಗೆ ನೋಡಿದರೆ ಈ ತನಿಖಾ ಸಂಸ್ಥೆಗಳನ್ನು ಎದುರಿಸುವ ವಿಷಯದಲ್ಲಿ ಅವರಿರುವ ಕಾಂಗ್ರೆಸ್ ಪಕ್ಷ ಹೆಚ್ಚಿನ ನೆರವು ನೀಡುವ ಸ್ಥಿತಿಯಲ್ಲಿಲ್ಲ.
ಇಂತಹ ಸಂದರ್ಭದಲ್ಲಿ ತಮಗೆ ಬಂದ ಆಮಿಷಗಳನ್ನು ಡಿಕೆಶಿ ಒಪ್ಪಿಕೊಂಡಿದ್ದರೆ ಅವರು ತುಂಬ ದಿನಗಳ ಹಿಂದೆಯೇ ದೊಡ್ಡ ದೊಡ್ಡ ಲಾಭ ಪಡೆಯಬಹುದಿತ್ತು.ಆದರೆ ಅದ್ಯಾವುದನ್ನೂ ಲೆಕ್ಕಿಸದೆ ಅವರು ಕೇಂದ್ರದ ತನಿಖಾ ಸಂಸ್ಥೆಗಳನ್ನು ಎದುರಿಸಿದರು.ಜೈಲಿಗೂ ಹೋಗಿ ಬಂದರು.
ಆದರೆ ಹೀಗೆ ಹೋಗಿ ಬಂದ ಡಿಕೆಶಿ, ನಂತರ ಕರ್ನಾಟಕದ ರಾಜಕೀಯ ನಕಾಶೆ ಬದಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಹೀಗಾಗಿ ಡಿಕೆಶಿ ಇದನ್ನು ಹೇಗೆ ಸಾಧಿಸಿದರು?ಕೇಂದ್ರದ ತನಿಖಾ ಸಂಸ್ಥೆಗಳನ್ನು ಅವರು ಎದುರಿಸಿದ್ದು ಹೇಗೆ?ದೊಡ್ಡ ಉದ್ಯಮಿಯಾಗಿರುವ ಅವರನ್ನು ಒಂದಿಲ್ಲೊಂದು ಕಾರಣಕ್ಕೆ ಖೆಡ್ಡಾಗೆ ಕೆಡವಬಹುದಾಗಿದ್ದರೂ ಕೇಂದ್ರ ಸರ್ಕಾರವೇ ಯಾಕೆ ತಣ್ಣಗೆ ಕುಳಿತಿದೆ?ಎಂಬುದೆಲ್ಲ ಐಟಿ,ಇಡಿ ರೈಡಿಗೊಳಗಾದವರಿಗೆ ಪಾಠದಂತೆ ಕಾಣಿಸತೊಡಗಿದೆ ಎಂಬುದು ಫ್ರೊ.ನಾಗೇಶ್ವರ್ ಅವರ ಮಾತು.
ಅಷ್ಟೇ ಅಲ್ಲ, ಮಳೆ-ಗಾಳಿ ಬಂದರೆ ಧೈರ್ಯಕ್ಕಾಗಿ ಅರ್ಜುನ,ಅರ್ಜುನ,ಅರ್ಜುನ ಅಂತ ನಾಮಸ್ಮರಣೆ ಮಾಡುವ ಒಂದು ರೂಢಿ ಇದೆ.
ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ,ಇವತ್ತು ಐಟಿ,ಇಡಿ ರೈಡಿಗೊಳಗಾದವರು ತಮಗೆ ಪ್ರೇರಣೆ,ಧೈರ್ಯ ಸಿಗಬೇಕು ಎಂದರೆ ಶಿವಕುಮಾರ,ಶಿವಕುಮಾರ,ಶಿವಕುಮಾರ ಎಂದು ನಾಮಸ್ಮರಣೆ ಮಾಡುವ ಪರಿಸ್ಥಿತಿ ಇದೆ ಅಂತ ಅವರು ಹೇಳುತ್ತಾರೆ.
ಅರ್ಥಾತ್,ದಿನ ಕಳೆದಂತೆ ಡಿಕೆಶಿಯ ಇಮೇಜ್ ದೇಶದ ಇತರ ಭಾಗಗಳಲ್ಲೂ ಬೆಳೆಯತೊಡಗಿದೆ.ಆದರೆ ಅಧಿಕಾರ ರಾಜಕಾರಣದಲ್ಲಿ ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತದೋ ಕಾದು ನೋಡಬೇಕು.

ಡಿಕೆ ಸಾಮ್ರಾಜ್ಯದ ವಿರುದ್ಧ ಹೆಚ್.ಡಿ.ಕೆ?

ಈ ಮಧ್ಯೆ ಬೆಳೆದು ನಿಂತಿರುವ ಡಿಕೆಶಿ ಸಾಮ್ರಾಜ್ಯದ ವಿರುದ್ಧ ಹೊಸ ಮೈತ್ರಿಯೊಂದು ಎದ್ದು ನಿಲ್ಲಲಿದೆ.
ಮಾಜಿ ಮುಖ್ಯಮಂತ್ರಿ,ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮತ್ತು ಈಗ ಬಿಜೆಪಿಯಲ್ಲಿರುವ ಸಿ.ಪಿ.ಯೋಗೀಶ್ವರ್ ಅವರ ಜೋಡಿಯದೇ ಈ ಮೈತ್ರಿ.
ಅಂದ ಹಾಗೆ ತಾವು ಪರಸ್ಪರ ವಿರೋಧಿಗಳಾಗಿದ್ದರೆ ಡಿಕೆಶಿಗೆ ಲಾಭ ಎಂಬುದು ಕುಮಾರಸ್ವಾಮಿ,ಯೋಗೀಶ್ವರ್ ಅವ ರಿಬ್ಬರಿಗೂ ಅರ್ಥವಾಗಿದೆ.
ಈ ಮಧ್ಯೆ ರಾಜಕಾರಣದ ಅನಿವಾರ್ಯತೆಗಳು ಹೇಗೆ ಎಮರ್ಜ್ ಆಗುತ್ತಿವೆ ಎಂದರೆ ಕುಮಾರಸ್ವಾಮಿ ಅವರೀಗ ಬಿಜೆಪಿ ನೇತೃತ್ವದ ಎನ್.ಡಿ.ಎ ಜತೆ ಕೈ ಜೋಡಿಸುವ ಮನ:ಸ್ಥಿತಿಯಲ್ಲಿದ್ದಾರೆ.
ಹೀಗೆ ಅವರು ಕೈ ಜೋಡಿಸಿದರೆ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಹೊಸ ರಾಜಕೀಯ ಸಮೀಕರಣವೊಂದು ರೂಪುಗೊಳ್ಳುತ್ತದೆ.
ಹಾಗಾದಾಗ ಕುಮಾರಸ್ವಾಮಿ ಅವರು ರಾಜ್ಯಸಭೆಗೆ ಇಲ್ಲವೇ ಲೋಕಸಭೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಲಿದ್ದಾರೆ
ಈ ಸಂದರ್ಭದಲ್ಲಿ ರಾಜ್ಯಸಭೆಗಿಂತ ಲೋಕಸಭೆಗೆ ಸ್ಪರ್ಧಿಸುವುದು,ಅದರಲ್ಲೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಸೂಕ್ತ ಎಂಬುದು ಯೋಗೀಶ್ವರ್ ಲೆಕ್ಕಾಚಾರ.
ಅಂದ ಹಾಗೆ ಇವತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಡಿಕೆಶಿ ಸಹೋದರ,ಕಾಂಗ್ರೆಸ್ ನ ಡಿ.ಕೆ.ಸುರೇಶ್ ಪ್ರತಿನಿಧಿಸುತ್ತಿದ್ದಾರೆ.
ಹೀಗಾಗಿ ಅವರ ವಿರುದ್ಧ ಕುಮಾರಸ್ವಾಮಿ ಸ್ಪರ್ಧಿಸಿದರೆ ನಿಶ್ಚಿತವಾಗಿಯೂ ಆಟ ಹಾಕಬಹುದು ಎಂಬುದು ಯೋಗಿ ಲೆಕ್ಕಾಚಾರ.
ಗಮನಿಸಬೇಕಾದ ಸಂಗತಿ ಎಂದರೆ ಕುಮಾರಸ್ವಾಮಿ ಅವರಿಗೆ ಇನ್ನೂ ಅರಗಿಸಿಕೊಳ್ಳಲಾಗದ ವಿಷಯವೆಂದರೆ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಅನುಭವಿಸಿದ ಸೋಲು.
ಪುತ್ರನ ಈ ಸೋಲಿನ ಹಿಂದೆ ಡಿ.ಕೆ.ಸುರೇಶ್ ಕರಾಮತ್ತು ಇದೆ ಎಂಬುದು ಕುಮಾರಸ್ವಾಮಿ ಅವರ ಅನುಮಾನ.ಹೀಗಾಗಿ ಮಗನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಡಿ.ಕೆ.ಸುರೇಶ್ ವಿರುದ್ದ ಕಣಕ್ಕಿಳಿಯುವ ಯೋಚನೆ ಅವರಲ್ಲೂ‌ ಇದೆ.
ಒಂದು ವೇಳೆ ಇದು ಸಾಧ್ಯವಾದರೆ ಡಿಕೆಶಿ ಸಾಮ್ರಾಜ್ಯ ಅಲುಗಾಡುವುದು ನಿಶ್ಚಿತ.ಅದೇ ರೀತಿ ಕುಮಾರಸ್ವಾಮಿ ದಿಲ್ಲಿಗೆ ಹೋದರೆ ಚನ್ನಪಟ್ಟಣದಿಂದ ತಾವು ವಿಧಾನಸಭೆಗೆ ಆರಿಸಿ ಬರಬಹುದು ಎಂಬುದು ಯೋಗಿ ಲೆಕ್ಕಾಚಾರ.
ಕುತೂಹಲದ ಸಂಗತಿ ಎಂದರೆ ಯೋಗೀಶ್ವರ್ ಇಂತಹ ಲೆಕ್ಕಾಚಾರ ಹಾಕುತ್ತಿರುವ ಕಾಲದಲ್ಲೇ ಡಿ.ಕೆ.ಸುರೇಶ್,’ನಂಗಿನ್ನು ಚುನಾವಣೆ ಬೇಡ’ ಅಂತ ವೈರಾಗ್ಯದ ಮಾತನಾಡುತ್ತಿದ್ದಾರೆ.
ಅವರ ವೈರಾಗ್ಯಕ್ಕೂ,ಯೋಗಿ ಲೆಕ್ಕಾಚಾರ ಹರಳುಗಟ್ಟುತ್ತಿರುವುದಕ್ಕೂ ಸಂಬಂಧ ಇದೆಯೇ?ಎಂಬುದು ಸಧ್ಯದ ಕುತೂಹಲ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here