ಶಾಮನೂರು ಹಾಕಿದ ಬಾಂಬು ಢಂ ಎನ್ನಲಿಲ್ಲ

0
75

ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಕಿದ ಸ್ಮೆಲ್ ಬಾಂಬು ಕೊನೆಗೂ ಸಿಡಿಯದೆ ತಣ್ಣಗಾಗಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ.ಅವರಿಗೆ ಸರಿಯಾದ ಪೋಸ್ಟಿಂಗು ಸಿಗುತ್ತಿಲ್ಲ ಅಂತ ಅವರು ಹಾಕಿದ ಬಾಂಬು ಡೆಡ್ಲಿಯಾಗಿ ಕಾಣಿಸಿದ್ದೇನೋ ನಿಜ.

ಆದರೆ ಅದು ನಿರೀಕ್ಷೆಯಂತೆ ಸ್ಪೋಟಿಸದೆ ಇರಲು ಅದು ಗಟ್ಟಿ ನೆಲದ ಮೇಲೆ ಅಪ್ಪಳಿಸುವುದಕ್ಕಿಂತ,ಮಿದು ನೆಲದ ಮೇಲೆ ಬಿದ್ದಿದ್ದು ಮುಖ್ಯ ಕಾರಣ.ಅರ್ಥಾತ್,ಸರ್ಕಾರಿ ನೌಕರರ ಪೋಸ್ಟಿಂಗುಗಳ ವಿಷಯದಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎನ್ನಲು ದೊಡ್ಡ ಮಟ್ಟದ ಎವಿಡೆನ್ಸುಗಳು ಇದುವರೆಗೆ ಸಿಗುತ್ತಿಲ್ಲ.

ಮೇಲು ಹಂತದ ಉದಾಹರಣೆ ನೋಡುವುದಾದರೆ,ವಿವಿಧ ಇಲಾಖೆಗಳಡಿ ಬರುವ ಇಪ್ಪತ್ತೆಂಟು ಮುಖ್ಯ ಎಂಜಿನಿಯರುಗಳ ಪೈಕಿ ಒಂಭತ್ತು ಮಂದಿ ಲಿಂಗಾಯತರು.ಇದೇ ರೀತಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು ಮತ್ತು ಬೆಂಗಳೂರಿನ ಡಿಸಿಪಿಗಳ ಪಟ್ಟಿ ತೆಗೆದರೆ ಅದರಲ್ಲಿ ಏಳು ಮಂದಿ ಲಿಂಗಾಯತರು.

ಇನ್ನು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಪಟ್ಟಿ ತೆಗೆದರೆ ಅದರಲ್ಲಿ ನಾಲ್ಕು ಮಂದಿ ಲಿಂಗಾಯತರು ಕಣ್ಣಿಗೆ ಕಾಣಿಸುತ್ತಾರೆ.

ರಾಜ್ಯದ ಅಸಿಸ್ಟೆಂಟ್ ಕಮೀಷನರುಗಳ ಪಟ್ಟಿಯನ್ನು ಓಪನ್ ಮಾಡಿಟ್ಟುಕೊಂಡರೆ ಅದರಲ್ಲಿ ಒಂಭತ್ತು ಮಂದಿ ಲಿಂಗಾಯತ ಅಧಿಕಾರಿಗಳಿದ್ದರೆ,ಜಿಲ್ಲಾಧಿಕಾರಿಗಳ ಪೈಕಿ ಮೂರು ಮಂದಿ ಲಿಂಗಾಯತ ಅಧಿಕಾರಿಗಳಿದ್ದಾರೆ.

ರಾಜ್ಯದ ನಲವತ್ತೊಂದು ವಿಶ್ವವಿದ್ಯಾನಿಲಯಗಳ ಪೈಕಿ ಹದಿಮೂರು ವಿವಿಗಳಲ್ಲಿ ಲಿಂಗಾಯತರು ಉಪಕುಲಪತಿಗಳಾಗಿದ್ದರೆ,ಎಂಟು ಮಂದಿ ಒಕ್ಕಲಿಗರು,ಎಂಟು ಮಂದಿ ಬ್ರಾಹ್ಮಣರು,ಐದು ಮಂದಿ ಪರಿಶಿಷ್ಟ ಜಾತಿಯವರು,ಆರು ಮಂದಿ ಹಿಂದುಳಿದ ವರ್ಗದವರು ಮತ್ತು ಪರಿಶಿಷ್ಟ ಪಂಗಡದ ಒಬ್ಬರು ಉಪಕುಲಪತಿಗಳಾಗಿದ್ದಾರೆ.

ಹಾಗೆಯೇ ಶಾಮನೂರು ಶಿವಶಂಕರಪ್ಪ ಅವರ ಭದ್ರಕೋಟೆಯಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ,ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ,ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ,ಧೂಢಾ ಕಮೀಷನರ್,ಆಹಾರ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್,ತಹಸೀಲ್ದಾರ್,ಜಿಲ್ಲಾ ಸರ್ಜನ್ ಸೇರಿದಂತೆ ಬಹುತೇಕ ಆಯಕಟ್ಟಿನ ಹುದ್ದೆಗಳಲ್ಲಿ ಲಿಂಗಾಯತ ಅಧಿಕಾರಿಗಳು ಕುಳಿತಿದ್ದಾರೆ.

ಹೀಗೆ ಸರ್ಕಾರದ ಆಯಕಟ್ಟಿನ ಹುದ್ದೆಗಳಲ್ಲಿ ಲಿಂಗಾಯತರಿಗೆ ಸಿಕ್ಕಿರುವ ಪ್ರಾಮಿನೆನ್ಸು ಕಣ್ಣಿಗೆ ಢಾಳಾಗಿ ರಾಚುತ್ತಿರುವುದರಿಂದಲೇ ಶಾಮನೂರು ಶಿವಶಂಕರಪ್ಪ ಅವರ ಅರೋಪಕ್ಕೆ ಫೋರ್ಸು ಸಿಗುತ್ತಿಲ್ಲ.

ಇಷ್ಟಾದರೂ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಅಂತ ಅವರು ಹಾಕಿದ ಕೂಗು ಶುರುವಿನಲ್ಲಿ ಕಾಂಗ್ರೆಸ್ ಪಾಳಯವನ್ನು ಕಂಗಾಲು ಮಾಡಿದ್ದು ನಿಜ.ಯಾಕೆಂದರೆ ಮೂವತ್ತು ವರ್ಷಗಳ ಹಿಂದೆ ಕೈ ಪಾಳಯದಿಂದ ವಲಸೆ ಹೋಗಿದ್ದ ಲಿಂಗಾಯತರು ಇತ್ತೀಚೆಗಷ್ಟೇ ಕಾಂಗ್ರೆಸ್ ಕಡೆ ಬರುತ್ತಿದ್ದಾರೆ.ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಆದ ಅವಮಾನವೇ ಇದಕ್ಕೆ ಮುಖ್ಯ ಕಾರಣ.

ಶತಾಯ ಗತಾಯ ಹೋರಾಡಿ 2019 ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು 2021 ರಲ್ಲಿ ಮೋದಿ-ಅಮಿತ್ ಷಾ ಜೋಡಿ ಬಲವಂತವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿತು.ಇದೇ ರೀತಿ ವಿಧಾನಸಭಾ ಚುನಾವಣೆಗಳು ಹತ್ತಿರ ಬಂದಾಗ ಬಿಜೆಪಿಯಲ್ಲಿ ಸೆಟ್ಲಾದ ನಾಯಕರೊಬ್ಬರು:ನಮಗೆ ಲಿಂಗಾಯತರ ವೋಟು ಅನಿವಾರ್ಯವಲ್ಲ ಎಂದು ಬಿಟ್ಟರು.

ಪರಿಣಾಮ?ಈ ಬೆಳವಣಿಗೆಗಳು ಪ್ರಬಲ ಲಿಂಗಾಯತ ಸಮುದಾಯ ಸಿಡಿದು ನಿಲ್ಲುವಂತೆ ಮಾಡಿದ್ದಷ್ಟೇ ಅಲ್ಲ,ಕಾಂಗ್ರೆಸ್ ಕಡೆ ವಲಸೆ ಹೋಗಿ ಬಿಜೆಪಿಗೆ ಷಾಕ್ ಟ್ರೀಟ್ ಮೆಂಟ್ ಕೊಡುವಂತೆ ಮಾಡಿತು.

ವಸ್ತುಸ್ಥಿತಿ ಎಂದರೆ 1969 ವರೆಗೆ ಕಾಂಗ್ರೆಸ್ ಜತೆ ಇದ್ದ ಕರ್ನಾಟಕದ ಲಿಂಗಾಯತರು,ಕಾಂಗ್ರೆಸ್ ವಿಭಜನೆಯಿಂದ ಬೇಸತ್ತು ಜನತಾ ಪರಿವಾರದ ಕಡೆ ಹೊರಳಿದರು.1989 ರವರೆಗೂ ಅಲ್ಲೇ ಇದ್ದ ಈ ಸಮುದಾಯದ ಗಣನೀಯ ಮತಗಳು ವೀರೇಂದ್ರಪಾಟೀಲರ ಕಾರಣದಿಂದಾಗಿ 1989 ರಲ್ಲಿ ಕಾಂಗ್ರೆಸ್ ಜತೆ ನಿಂತವು.1994 ರಲ್ಲಿ ಜನತಾದಳದ ಕಡೆ ಹೋದ ಸಮುದಾಯ ರಾಮಕೃಷ್ಣ ಹೆಗಡೆ ಅವರ ಉಚ್ಚಾಟನೆಯ ನಂತರ ಜನತಾದಳ ತೊರೆದು ಲೋಕಶಕ್ತಿಯ ಜತೆ,ಆ ಮೂಲಕ ಬಿಜೆಪಿಯ ಕಡೆ ಹೊರಳಿಕೊಂಡಿತು.

ಹೀಗೆ ಅದು ಬಿಜೆಪಿಯ ಕಡೆ ಹೊರಳಲು ಎರಡು ಕಾರಣಗಳಿದ್ದವು.ಮೊದಲನೆಯದಾಗ ತಮ್ಮ ನೆಚ್ಚಿನ ನಾಯಕ ರಾಮಕೃಷ್ಣ ಹೆಗಡೆ ಅವರು ತೀರಿಕೊಂಡ ನಂತರ ಲಿಂಗಾಯತ ಸಮುದಾಯದಕ್ಕೆ ಪರ್ಯಾಯ ವೇದಿಕೆ ಬೇಕಿತ್ತು.ಈ ಸಂದರ್ಭದಲ್ಲಿ ಅದಕ್ಕೆ ಭರವಸೆಯಂತೆ ಕಾಣಿಸಿದವರು ಬಿಜೆಪಿಯಲ್ಲಿದ್ದ ಬಿ.ಎಸ್.ಯಡಿಯೂರಪ್ಪ.

ಹೀಗೆ ಕಮಲ ಪಾಳಯದ ಕಡೆ ಬಂದ ಲಿಂಗಾಯತ ಸಮುದಾಯ ಸುಧೀರ್ಘ ಕಾಲ ಅಲ್ಲೇ ಉಳಿಯುವಂತೆ ನೋಡಿಕೊಂಡ ಯಡಿಯೂರಪ್ಪ,ಕರ್ನಾಟಕದ ನೆಲೆಯಲ್ಲಿ ಬಿಜೆಪಿ ಪದೇ ಪದೇ ಅಧಿಕಾರ ಹಿಡಿಯುವಂತೆ ನೋಡಿಕೊಂಡರು.ಆದರೆ ಯಾವಾಗ ಅವರನ್ನು ಬಲವಂತವಾಗಿ ಕೆಳಗಿಳಿಸಲಾಯಿತೋ?ಇದಾದ ನಂತರ ಲಿಂಗಾಯತ ಸಮುದಾಯ ಮೆಲ್ಲಗೆ ಕಾಂಗ್ರೆಸ್ ಕಡೆ ಕಣ್ಣು ಹಾಯಿಸಿತು.

ಅಂತಹ ಲಿಂಗಾಯತ ವರ್ಗ ಇನ್ನೂ ಕಾಂಗ್ರೆಸ್ ನಲ್ಲಿ ಸೆಟ್ಲಾಗುವ ಮುನ್ನವೇ ಶಾಮನೂರು ಶಿವಶಂಕರಪ್ಪ ಬಾಂಬು ಎಸೆದರಲ್ಲ?ಆಗ ಸಹಜವಾಗಿಯೇ ಕಾಂಗ್ರೆಸ್ ಪಾಳಯ ಕಂಗಾಲಾಯಿತು.ಎಷ್ಟೇ ಆದರೂ ಪಾರ್ಲಿಮೆಂಟ್ ಚುನಾವಣೆ ಹತ್ತಿರದಲ್ಲೇ ಇದೆ.ಇಂತಹ ಟೈಮಿನಲ್ಲಿ ತಮ್ಮ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಮೆಸೇಜು ಲಿಂಗಾಯತ ಸಮುದಾಯಕ್ಕೆ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯಾಗಬಹುದು ಎಂಬುದು ಅದರ ಆತಂಕ.

ಶಾಮನೂರು ಏಕೆ ಸಿಟ್ಟಿಗೆದ್ದರು

ಅಂದ ಹಾಗೆ ಇತ್ತೀಚಿನವರೆಗೂ ಸುಮ್ಮನಿದ್ದ ಶಾಮನೂರು ಶಿವಶಂಕರಪ್ಪ ಇದ್ದಕ್ಕಿದ್ದಂತೆ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಕೂಗು ಹಾಕಲು ಏನು ಕಾರಣ?ಹಾಗೆಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕೈ ಪಾಳಯಕ್ಕೆ ನುಗ್ಗಿದರೆ ಇಂಟರೆಸ್ಟಿಂಗ್ ವಿಷಯಗಳು ಕೇಳಿ ಬರುತ್ತವೆ.

ಅದರ ಪ್ರಕಾರ,ದಾವಣಗೆರೆ ಧಣಿ ಬಿರುದಾಂಕಿತ ಶಾಮನೂರು ಶಿವಶಂಕರಪ್ಪನವರಿಗೆ ಇಂಧನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಾಂತೇಶ್ ಎಂಬ ಅಧಿಕಾರಿಯನ್ನು ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ತಂದುಕೊಳ್ಳುವ ಇಚ್ಚೆ ಇತ್ತಂತೆ.ಹಾಗಂತಲೇ ಈ ಕುರಿತು ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮೆಸೇಜು ಮುಟ್ಟಿಸಿದ್ದಾರೆ.ಆದರೆ ಅದು ವರ್ಕ್ ಔಟ್ ಆಗಿಲ್ಲ.

ಇದೇ ರೀತಿ ಕುವೆಂಪು ವಿಶ್ವವಿದ್ಯಾನಿಲಯ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯಗಳಿಗೆ ತಾವು ಹೇಳಿದವರನ್ನು ಉಪಕುಲಪತಿಗಳನ್ನಾಗಿ ನೇಮಕ ಮಾಡಬೇಕು ಅಂತ ಶಾಮನೂರು ಹೇಳಿದ್ದರಂತೆ.ಆದರೆ ಅದು ಕೂಡಾ ಇಂಪ್ಲಿಮೆಂಟ್ ಆಗಿಲ್ಲ.

ಯಾವಾಗ ತಾವು ಹೇಳಿದ್ದರಲ್ಲಿ ಈ ಮೂರು ಕೆಲಸಗಳು ಆಗಲಿಲ್ಲವೋ?ಆಗ ಸಹಜವಾಗಿಯೇ ಶಾಮನೂರು ಶಿವಶಂಕರಪ್ಪನವರ ಕೋಪ ನೆತ್ತಿಗೇರಿದೆ.ಹಾಗಂತಲೇ ಸಿಡಿದು ಬಿದ್ದು,ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಅಂತ ಬಾಂಬು ಎಸೆದಿದ್ದಾರೆ.

ಗಮನಿಸಬೇಕಾದ ಸಂಗತಿ ಎಂದರೆ,ಒಂದು ಸರ್ಕಾರ ಹೊಸತಾಗಿ ಅಸ್ತಿತ್ವಕ್ಕೆ ಬಂದಾಗ ಮುಖ್ಯಮಂತ್ರಿಗಳಾದವರು ಆಡಳಿತ ಯಂತ್ರ ತಮಗೆ ಅನುಕೂಲವಾಗುವಂತೆ ಸಾಫ್ ಮಾಡಿಟ್ಟುಕೊಳ್ಳುತ್ತಾರೆ.ಈ ಪರಿಪಾಠಕ್ಕೆ ಸಿದ್ಧರಾಮಯ್ಯ ಹೊರತೇನಲ್ಲ.

ಕಾರಣ?ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ನಾಯಕರು,ಸರ್ಕಾರದ ಆಯಕಟ್ಟಿನ ಹುದ್ದೆಗಳಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ತಂದು ಕೂರಿಸಿದ್ದರು.ಅದು ಅನಿವಾರ್ಯ ಕೂಡಾ.ಯಾಕೆಂದರೆ ಅವರಿಗಿಂತ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್, ತನ್ನ ಅನುಕೂಲಕ್ಕೆ ತಕ್ಕಂತಹ ಅಧಿಕಾರಿಗಳನ್ನು ತಂದು ಆಯಕಟ್ಟಿನ ಹುದ್ದೆಗಳಲ್ಲಿ ಕೂರಿಸಿತ್ತು.ಯಥಾ ಪ್ರಕಾರ ಈಗ ಕಾಂಗ್ರೆಸ್ ಸರದಿ.

ಅದರೆ,ಬಿಜೆಪಿ ಅವಧಿಯಲ್ಲಿ ಈ ರೀತಿ ಆಯಕಟ್ಟಿನ ಜಾಗಗಳಿಗೆ ಬಂದು ಕುಳಿತ ಅಧಿಕಾರಿಗಳನ್ನು ಸಿದ್ಧರಾಮಯ್ಯ ಅವರು ಅಲ್ಲೇ ಮುಂದುವರಿಸಬೇಕು,ಆಡಳಿತ ನಡೆಸಬೇಕು ಎಂಬುದು ತಪ್ಪು.ಯಾಕೆಂದರೆ ಈ ಹಿಂದಿದ್ದ ಬಿಜೆಪಿ ಸರ್ಕಾರ ಕೂಡಾ ಆಯಕಟ್ಟಿನ ಜಾಗಗಗಳಲ್ಲಿ ಕುಳಿತಿದ್ದವರನ್ನು ಎತ್ತಂಗಡಿ ಮಾಡಿಯೇ ತನಗೆ ಬೇಕಾದ ಆಡಳಿತ ಯಂತ್ರವನ್ನು ರೆಡಿ ಮಾಡಿಕೊಂಡಿತ್ತಲ್ಲ?ಇವತ್ತು ಸಿದ್ಧರಾಮಯ್ಯ ಕೂಡಾ ಇದನ್ನು ಮಾಡುತ್ತಿದ್ದಾರೆ.ಈ ಪ್ರೊಸೆಸ್ಸಿನಲ್ಲಿ ಕೆಲ ಲಿಂಗಾಯತ ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆಗಳು ತಪ್ಪಬಹುದು.ಅದರರ್ಥ,ಹೋಲ್ ಸೇಲಾಗಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಿದೆ ಅಂತಲ್ಲ.

ವಸ್ತುಸ್ಥಿತಿ ಎಂದರೆ ಬಿಜೆಪಿ ಸರ್ಕಾರ ಕೆಳಗಿಳಿದು ತಾವು ಮುಖ್ಯಮಂತ್ರಿ ಹುದ್ದೆಗೇರುವ ಘಳಿಗೆ ಹತ್ತಿರವಾಗುತ್ತಿದ್ದಂತೆಯೇ ಸರ್ಕಾರದ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ ಮೆಂಟಿನಲ್ಲಿ ಸೆಟ್ಲಾಗಿದ್ದ ಲಿಂಗಾಯತ ಅಧಿಕಾರಿಗಳ ಸಂಖ್ಯೆಯನ್ನು ನೋಡಿದ ಸಿದ್ಧರಾಮಯ್ಯ ಹೌಹಾರಿದ್ದರಂತೆ.ಇದಕ್ಕೆ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕಾರಣ ಎಂಬುದು ರಹಸ್ಯವೇನಲ್ಲ.

ಈಗ ಅಸ್ತಿತ್ವಕ್ಕೆ ಬಂದಿರುವ ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಅಹಿಂದ ಸಮುದಾಯಗಳಿಗೆ ಸೇರಿದ ಅಧಿಕಾರಿಗಳಿಗೆ ಆದ್ಯತೆ ಸಿಗತೊಡಗಿದ್ದರೆ ಅದು ಸಹಜವೇ.ಗಮನಿಸಬೇಕಾದ ಸಂಗತಿ ಎಂದರೆ ಹೀಗೆ ಅಹಿಂದ ವರ್ಗಗಳಿಗೆ ಒಂದಷ್ಟು ಪ್ರಾಮಿನೆನ್ಸು ನೀಡಲಾಗುತ್ತಿದೆ ಎಂದರೂ,ಒಟ್ಟಾರೆಯಾಗಿ ನೋಡಿದರೆ ಅಲ್ಲಿ ಪ್ರಬಲ ವರ್ಗಗಳ ಪಾಲು ಗಣನೀಯವಾಗಿಯೇ ಇದೆ.

ಯಾಕೆಂದರೆ,ಈ ಹಿಂದೆ ಅಧಿಕಾರಕ್ಕೆ ಬಂದು ಕುಳಿತಿದ್ದ ನಾಯಕರು ತಮ್ಮ ತಮ್ಮ ವರ್ಗಗಳಿಗೆ ದೊಡ್ಡ ಮಟ್ಟದ ಪ್ರಾಮಿನೆನ್ಸು ನೀಡಿದ್ದಾರೆ.ಸರ್ಕಾರದ ಆಯಕಟ್ಟಿನ ಹುದ್ದೆಗಳಲ್ಲಿ ಕುಳಿತವರ ಪಟ್ಟಿ ನೋಡಿದರೆ ಇದು ಸ್ಪಷ್ಟವಾಗುತ್ತದೆ.ತಕರಾರೇನಿದ್ದರೂ ಈ ವರ್ಗಗಳ ತಳದಲ್ಲಿರುವವರಿಂದ ಬರಬೇಕು ಅಷ್ಟೇ.

ಯಡಿಯೂರಪ್ಪ ಬೇಸ್ತು ಬಿದ್ದಿದ್ದರು

ಅಂದ ಹಾಗೆ ಅಧಿಕಾರ ಹಿಡಿದಾಗ ತಮಗೆ ಬೇಕಾದಂತೆ ಆಡಳಿತ ಯಂತ್ರವನ್ನು ಸಜ್ಜು ಮಾಡಿಕೊಳ್ಳದೆ ಇದ್ದ ಕಾರಣದಿಂದ ಬೇಸ್ತು ಬಿದ್ದವರು ಯಡಿಯೂರಪ್ಪ ಮಾತ್ರ.

2008 ರಲ್ಲಿ ಅವರು ಮುಖ್ಯಮಂತ್ರಿಯಾದಾಗ ಅವರ ಆಪ್ತರು ಐಎಎಸ್,ಐಪಿಎಸ್,ಕೆಎಎಸ್ ಸೇರಿದಂತೆ ಹಲವು ಅಧಿಕಾರಿಗಳ ಹೆಸರುಗಳಿದ್ದ ಒಂದು ಪಟ್ಟಿಯನ್ನು ತಂದು ಮುಂದಿಟ್ಟಿದ್ದರಂತೆ.

ಹೀಗೆ ತಮ್ಮ ಮುಂದೆ ಬಂದ ಪಟ್ಟಿಯನ್ನು ನೋಡಿದ ಯಡಿಯೂರಪ್ಪನವರು ಇದೇನು ಅಂತ ಕೇಳಿದರೆ,ಇವರೆಲ್ಲ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದವರಿಗೆ ಹತ್ತಿರದವರು.ಇವರೆಲ್ಲ ಸರ್ಕಾರದ ಆಯಕಟ್ಟಿನ ಹುದ್ದೆಗಳಲ್ಲಿದ್ದಾರೆ.ಹೀಗಾಗಿ ಅವರನ್ನು ಎತ್ತಂಗಡಿ ಮಾಡಿ ಅಲ್ಲಿ ನಮಗೆ ನಿಷ್ಟರಾದವರನ್ನು ತಂದು ಕೂರಿಸಿಕೊಳ್ಳಬೇಕು ಎಂದರಂತೆ.

ಆದರೆ ತಮ್ಮ ಆಪ್ತರು ಹೇಳಿದ ಮಾತನ್ನು ಕೇಳಿಸಿಕೊಂಡ ಯಡಿಯೂರಪ್ಪ,ಯೇ ಅವರೆಲ್ಲ ಏನು ಮಾಡುತ್ತಾರೆ?ಎಷ್ಟೇ ಆದರೂ ಅವರು ಸರ್ಕಾರದ ಅಧಿಕಾರಿಗಳು.ಅವರಿದ್ದಾಗ ಅವರಿಗೆ ಬೇಕಾದಂತೆ ಕೆಲಸ ಮಾಡುತ್ತಾರೆ.ನಾವಿದ್ದಾಗ ನಮಗೆ ಬೇಕಾದಂತೆ ಕೆಲಸ ಮಾಡುತ್ತಾರೆ.ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಬಿಟ್ಟರು.

ಮುಂದೆ ಕೆಲವೇ ಕಾಲದಲ್ಲಿ ತಮ್ಮ ಸರ್ಕಾರದ ವಿರುದ್ದ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಮುಗಿಬೀಳುತ್ತಿದ್ದ ರೀತಿಯನ್ನು ನೋಡಿ ಯಡಿಯೂರಪ್ಪ ಕಂಗಾಲಾದರಂತೆ.ಯಾಕೆಂದರೆ ಸರ್ಕಾರದ ಮಟ್ಟದಲ್ಲಿ ಯಾವುದೇ ತೀರ್ಮಾನಗಳಾದರೂ ಅದರ ವಿವರ ಕುಮಾರಸ್ವಾಮಿ ಅವರ ಕೈಲಿರುತ್ತಿತ್ತು.

ಈ ವಿಸ್ಮಯದ ಕುರಿತು ಯಡಿಯೂರಪ್ಪ ತಮ್ಮ ಆಪ್ತರನ್ನು ಪ್ರಶ್ನಿಸಿದಾಗ:ಸಾರ್,ಈ ವಿಷಯದ ಬಗ್ಗೆ ಹಿಂದೆಯೇ ನಿಮ್ಮ ಗಮನ ಸೆಳೆದಿದ್ದೆವು.ಆದರೆ ನೀವು ಅದು ದೊಡ್ಡ ವಿಷಯವಲ್ಲ ಎಂದಿರಿ.ಆದರೆ ಇವತ್ತು ನೀವು ಕೈಗೊಳ್ಳುವ ಯಾವುದೇ ತೀರ್ಮಾನ ಸರ್ಕಾರದ ಅಧಿಕೃತ ಆದೇಶವಾಗಿ ಪ್ರಕಟವಾದರೆ,ಅದು ಮುದ್ರಿತವಾಗುತ್ತಿದ್ದಂತೆಯೇ ಒಂದು ಪ್ರತಿ ದೇವೇಗೌಡರ ಕುಟುಂಬದವರಿಗೆ ತಲುಪುತ್ತದೆ ಎಂದರಂತೆ.

ಯಾವಾಗ ಆಪ್ತರು ಈ ಮಾತು ಹೇಳಿದರೋ?ಇದಾದ ನಂತರ ಯಡಿಯೂರಪ್ಪ ಅವರು ಆಡಳಿತ ಯಂತ್ರಕ್ಕೆ ಸರ್ಜರಿ ಶುರು ಮಾಡಿದರು.

ಹೀಗಾಗಿ ಆಡಳಿತ ನಡೆಸುವವರು ತಮಗೆ ಬೇಕಾದವರು ಯಾರು ಅಂತ ನಿರ್ಧರಿಸಿ ಆಯಕಟ್ಟಿನ ಹುದ್ದೆಗಳಲ್ಲಿ ತಂದು ಕೂರಿಸಿರುತ್ತಾರೋ?ಅವರಲ್ಲಿ ಬಹುತೇಕರು ಹೊಸ ಸರ್ಕಾರ ಬಂದಾಗ ಬೇರೆ ಕಡೆ ವರ್ಗವಾಗಿ ಹೋಗುತ್ತಾರೆ.ಈಗ ಆಗುತ್ತಿರುವುದು ಕೂಡಾ ಅದೇ.

ಶಾಮನೂರು ಶಿವಶಂಕರಪ್ಪ ಅವರು ಎಸೆದ ಬಾಂಬು ಢಂ ಅನ್ನದೇ ಇದ್ದರೆ ಅದಕ್ಕೆ ಇದೇ ಮುಖ್ಯ ಕಾರಣ.ಹಾಗಂತ ಅದು ಆರಿ ಹೋಗಿದೆ ಅಂತಲೂ ಅಲ್ಲ.ಒಂದು ವೇಳೆ ಅದು ಆರದೇ ಹೋದರೆ ಅರಸರ ಕಾಲದಲ್ಲಾದ ಜಾತಿ ಸಂಘರ್ಷ ಪುನರಾವರ್ತನೆಯಾಗುವುದು ನಿಶ್ಚಿತ.

—-ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here