ಫೆ.8 ಮತ್ತು 9 ರಂದು ವಾಲ್ಮೀಕಿ ಜಾತ್ರೆ ಮೂರನೇ ವರ್ಷದ ಜಾತ್ರೆ ಅದ್ದೂರಿಯಾಗಿ ನಡೆಯಲಿದೆ: ಎಸ್.ವಿ.ರಾಮಚಂದ್ರ

0
95

ದಾವಣಗೆರೆ ಫೆ. 01 : ವಾಲ್ಮೀಕಿ ಜಯಂತಿಯ ಅಂಗವಾಗಿ ಹಮ್ಮಿಕೊಂಡಿರುವ ಜಾತ್ರಾ ಮಹೋತ್ಸವಕ್ಕೆ ಸರ್ಕಾರ ರೂ.1.99 ಕೋಟಿ ಹಣ ಬಿಡುಗಡೆ ಮಾಡಿದೆ ಹಾಗೂ ಸುಮಾರು ರೂ. 10 ಕೋಟಿ ಹಣವನ್ನು ಮಠದ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ್ದು ಈ ಹಣದಲ್ಲಿ ರಾಮಾಯಣ ಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯ ನಿರ್ಮಾಣ ಮಾಡಲಾಗುವುದು ಎಂದು ಜಗಳೂರು ಶಾಸPರು ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಎಸ್. ವಿ. ರಾಮಚಂದ್ರ್ಪ ತಿಳಿಸಿದರು

ಜಿಲ್ಲಾಡಳಿತದ ಸಹಯೋಗದೊಂದಿಗೆ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ನಡೆದ 2021ನೇ ಸಾಲಿನ ಮಹರ್ಷಿ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷದಂತೆ ಈ ಬಾರಿಯೂ ವಾಲ್ಮೀಕಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಆದರೆ ಕಳೆದ ವರ್ಷಕ್ಕಿಂತ ಈ ವರ್ಷದ ಪರಿಸ್ಥಿತಿ ಭಿನ್ನವಾಗಿದ್ದು ಕೊರೋನ ಮಹಾಮಾರಿ ನಮ್ಮೆಲ್ಲರ ನಡುವೆ ಇದೆ, ಹಾಗಾಗಿ ನಾವುಗಳೆಲ್ಲ ಅತ್ಯಂತ ಜಾಗರೂಕರಾಗಿ ಎಚ್ಚರಿಕೆಯಿಂದ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಹಾಗೂ ರಾಮಾಯಣ ಸಂಶೋಧನಾ ಕೇಂದ್ರ ಸಂಶೋಧನಾ ಆಸಕ್ತರಿಗೆ ಮತ್ತು ರಾಮಾಯಣದ ಬಗ್ಗೆ ಅಧ್ಯಯನ ನಡೆಸುವವರಿಗೆ ಉತ್ತಮ ಕೇಂದ್ರ ಆಗಲಿದೆ ಎಂದರು.

ಈ ಜಾತ್ರೆಯು ಕೇವಲ ಒಂದು ಜಾತಿಗೆ ಸೀಮಿತವಾಗದೆ ಎಲ್ಲರಿಗೆ ಸೇರಿದ್ದಾಗಿದೆ. ಹಾಗೂ ಹಿಂದುಳಿದ ಪರಿಶಿಷ್ಠ ಜನಾಂಗದ ಕಲೆ ಮತ್ತು ಸಂಸ್ಕøತಿಯ ಪ್ರದರ್ಶನಕ್ಕೆ ಒಂದು ಉತ್ತಮ ವೇದಿಕೆಯಾಗಲಿದೆ. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸೂಕ್ತ ನೀರಿನ ವ್ಯವಸ್ಥೆ ಸೇರಿದಂತೆ ಉತ್ತಮ ಮೂಲ ಸೌಕರ್ಯವನ್ನು ಒದಗಿಸಲಾಗುವುದು. ಹಾಗೂ ಸಹಜವಾಗಿ ಕೇಂದ್ರ ಸರ್ಕಾರದ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುವುದು. ಹಿಂದಿನ ವರ್ಷದ ಜಾತ್ರೆಯ ಅನುಭವಗಳೊಂದಿಗೆ ಈ ವರ್ಷ ಯಾವುದೇ ತೊಂದರೆಯಾಗದಂತೆ ಜನತೆಯ ಸಹಕಾರದೊಂದಿಗೆ ಯಶಸ್ವಿಗೊಳಿಸಲಾಗುವುದು ಎಂದರು.
ಮಠವು ನಮ್ಮನ್ನು ಬೆಳೆಸಿದೆ. ನಮ್ಮ ಸಮಾಜದ ಬೆಳವಣಿಗೆಗೆ ಶ್ರೀಗಳು ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಅದರಲ್ಲಿ ಮೀಸಲಾತಿ ಹೋರಾಟವೂ ಒಂದು. ನಮ್ಮ ಸಮಾಜ 17 ಶಾಸಕರನ್ನು ಕೊಟ್ಟಿದೆ, ನಾವೆಲ್ಲರೂ ಸೇರಿ ಮೀಸಲಾತಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಹೋರಾಟದ ಫಲ ದೊರೆಯಲಿದೆ ಎಂದರು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಯಂತಿ ಒಂದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ. ಭಾರತೀಯ ಸಂಸ್ಕøತಿಗೆ ರಾಮಾಯಣದಂತಹ ಮಹಾನ್ ಕೃತಿಯನ್ನು ನೀಡಿದ ಮಹರ್ಷಿ ವಾಲ್ಮೀಕಿಯವರ ಜಯಂತಿಗೆ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಎಲ್ಲ ಇಲಾಖೆಗಳು ಪ್ರತಿ ವರ್ಷ ಸಂಪೂರ್ಣ ಸಹಕಾರ ನೀಡುತ್ತಿದ್ದು ಇವರೆಲ್ಲರಿಗೂ ಗುರುಪೀಠದಿಂದ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಈ ವರ್ಷ ಜಗತ್ತಿಗೇ ವ್ಯಾಪಿಸಿರುವ ಕೊರೊನಾ ಆತಂಕ ತಂದೊಡ್ಡಿದ್ದರೂ ಎಲ್ಲರೂ ತಮ್ಮ ಆರೋಗ್ಯದ ಕಡೆ ಗಮನ ನೀಡಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಜಾತ್ರೆಯನ್ನು ಆಚರಿಸೋಣ. ಜಾತ್ರೆಗಳೆಂದರೆ ಭಾರತೀಯರಿಗೆ ಭಾವೈಕ್ಯತೆ ಬೆಸೆಯುವ ಉತ್ಸವಗಳಾಗಿದ್ದು ತಮ್ಮೆಲ್ಲರ ಸಹಕಾರದಿಂದ ಈ ಬಾರಿಯ ಜಾತ್ರಾ ಮಹೋತ್ಸವ ಯಶಸ್ವಿಯಾಗಲಿ ಎಂದು ಆಶಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲಾಡಳಿತ ಹಾಗೂ ವಾಲ್ಮೀಕಿ ಗುರು ಪೀಠದಿಂದ ಆಯೋಜಿಸಲಾಗುತ್ತಿರುವ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಅಗತ್ಯ ಸಿದ್ದತೆಗಳನ್ನು ಚುರುಕುಗೊಳಿಸಬೇಕು. ಈ ಹಿಂದಿನ ಎರಡು ವರ್ಷಗಳ ಜಾತ್ರಾ ಮಹೋತ್ಸವಗಳು ವಿಜೃಂಭಣೆ ಹಾಗೂ ಯಶಸ್ವಿಯಾಗಿ ಮುಗಿದಿದ್ದು, ಈ ಬಾರಿ ಮೂರನೇ ವರ್ಷದ ಜಾತ್ರಾ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ವಯ ಸರ್ಕಾರ ಹೊರಡಿಸಿರುವ ನಿಯಮಗಳಾದ ಮಾಸ್ಕ್, ಸ್ಯಾನಿಟೈಸರ್ ಬಳಕೆ, ದೈಹಿಕ ಅಂತರ ಕಾಪಾಡುವುದನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಜಾತ್ರೆ ಆಚರಿಸಬೇಕೆಂದರು.
ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ಸುಮಾರು 8 ರಿಂದ 10 ಕಡೆಗಳಲ್ಲಿ ಕೋವಿಡ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಿದ್ದು, ಸಾರ್ವಜನಿಕರು ಸ್ಕ್ರೀನಿಂಗ್ ಇಲ್ಲದೇ ಆವರಣದೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಜಾತ್ರಾ ಕಾರ್ಯಕ್ರಮ ನಡೆಯುವ ಎರಡೂ ದಿನ ಈ ಕೆಲಸವನ್ನು ಸಂಬಂಧಿಸಿದವರು ಮಾಡಬೇಕೆಂದರು.
ಹೊರ ರಾಜ್ಯಗಳಿಂದ ಬರುವ ಕಲಾವಿದರು ತಮ್ಮ ರಾಜ್ಯಗಳ ಕಲಾಪ್ರಕಾರಗಳನ್ನು ಪರಿಚಯಿಸಲಿದ್ದು, ಸುಮಾರು 200 ಕಲಾವಿದರು ಭಾಗವಹಿಸುತ್ತಿದ್ದು, ಅವರುಗಳಿಗೆ ಸಿದ್ದೇಶ್ವರ ಪ್ಯಾಲೇಸ್‍ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು ಆ ಕಲಾವಿದರುಗಳಿಗೆ ಆರ್‍ಟಿಪಿಸಿಆರ್ ಟೆಸ್ಟ್ ಮಾಡಿ ಒಂದೇ ದಿನದಲ್ಲಿ ವರದಿ ಪಡೆಯಲಾಗುವುದು ಎಂದರು.

ಜಾತ್ರಾ ಮಹೋತ್ಸವದಲ್ಲಿ ವಿವಿಧ ಇಲಾಖೆಗಳು ಮಳಿಗೆ ಹಾಕುವ ಮೂಲಕ ತಮ್ಮ ತಮ್ಮ ಇಲಾಖೆಗಳ ಪ್ರಗತಿ ಯೋಜನೆಗಳು, ಕಾರ್ಯಕ್ರಮಗಳು ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳನ್ನು ಜಾತ್ರೆಯಲ್ಲಿ ಸೇರಿರುವ ಜನಸಮುದಾಯಕ್ಕೆ ಪರಿಚಯಿಸುವ ಕಾರ್ಯ ಮಾಡಬೇಕಾಗಿದ್ದು ಈಗಿನಿಂದಲೇ ಅದಕ್ಕೆ ಪೂರಕ ಸಿದ್ದತೆ ಮಾಡಿಕೊಂಡು ಫೆಬ್ರವರಿ 7 ರೊಳಗಾಗಿ ಮಳಿಗೆ ನಿರ್ಮಾಣ ಆಗಬೇಕು ಎಂದರು.
ಕಾರ್ಯಕ್ರಮಕ್ಕೆ ಸಾಕಷ್ಟು ಜನ ಸೇರುವುದರಿಂದ ಪ್ರಸಾದ ವ್ಯವಸ್ಥೆ ಮಾಡಲಾಗುವ ಅಡುಗೆ ಕೋಣೆ, ಕುಡಿಯುವ ನೀರು, ಊಟ ಬಡಿಸುವವರು ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಆಹಾರ ಸುರಕ್ಷತೆಯನ್ನು ಪರೀಕ್ಷಿಸಬೇಕೆಂದರು.

ಹರಿಹರ ಕ್ಷೇತ್ರದ ಶಾಸಕರಾದ ರಾಮಪ್ಪ ಮಾತನಾಡಿ, ಜಾತ್ರಾ ಕಾರ್ಯಕ್ರಮಕ್ಕೆ ಸಹಸ್ರ ಸಂಖ್ಯೆಯಲ್ಲಿ ಜನ ಬರುವುದರಿಂದ ಎಲ್ಲ ಇಲಾಖೆಗಳ ಜವಾಬ್ದಾರಿ ಇರುತ್ತದೆ. ಪ್ರಮುಖವಾಗಿ ಬೆಸ್ಕಾಂನವರು ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ರಾಜ್ಯದ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನ ಬರುವುದರಿಂದ ಸ್ವಯಂ ಸೇವಕರು, ಪೊಲೀಸ್ ಸಿಬ್ಬಂದಿ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಹಿಂದಿನ ವರ್ಷದಂತೆ ವಾಹನ ಪಾರ್ಕಿಂಗ್‍ಗಾಗಿ ವ್ಯವಸ್ಥೆ ಮಾಡಲಾಗಿದ್ದು, ವಿಐಪಿ ಪಾರ್ಕಿಂಗ್‍ಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಗಣ್ಯರು, ಚಲನಚಿತ್ರ ನಟರು ಕಾರ್ಯಕ್ರಮಕ್ಕೆ ಬರುವುದರಿಂದ ಸಮರ್ಪಕವಾಗಿ ಬ್ಯಾರಿಕೇಡ್ ವ್ಯವಸ್ಥೆ, ಪ್ರಸಾದ ಪೂರೈಸುವ ಸ್ಥಳದಲ್ಲಿ ಜನಜಂಗುಳಿ ತಡೆಯಲು ಸಾಕಷ್ಟು ಬ್ಯಾಕಿಕೇಡ್ ಹಾಕಿ ನಿಯಂತ್ರಿಸಲಾಗುವುದು ಎಂದರು.

ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ವಾಲ್ಮೀಕಿ ಜಯಂತಿ ಜಾತ್ಯಾತೀತವಾಗಿದ್ದು, ದೇಶದಾದ್ಯಂತ ಪ್ರಸಾರವಾಗಬೇಕಿದೆ. ಈ ಸಂಬಂಧ ವಾರ್ತಾ ಇಲಾಖೆಯವರು ಹೆಚ್ಚಿನ ಪ್ರಚಾರ ನೀಡುವ ಮೂಲಕ ಸಹಕರಿಸಬೇಕೆಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪದ್ಮಾ ಬಸವಂತಪ್ಪ, ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಸಮಾಜದ ಮುಖಂಡರಾದ ಉಪನ್ಯಾಸಕರಾದ ರಾಮಚಂದ್ರಪ್ಪ, ವಕೀಲರಾದ ನಾಗೇಂದ್ರಪ್ಪ, ಟಿ.ಓಬಳಪ್ಪ, ಹೊದಿಗೆರೆ ರಮೇಶ್, ಈಶ್ವರ್, ಪಾಲಯ್ಯ, ಜಿ.ಪಂ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ, ಜಿ.ಪಂ ಉಪಕಾರ್ಯದರ್ಶಿ ಆನಂದ್, ಡಿಹೆಚ್‍ಓ ಡಾ.ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಡಿಡಿ ವಿಜಯಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಪ್ಪ, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಮಂಜಾನಾಯ್ಕ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here