ಇಂಟೆನ್ಸಿಫೈಡ್ ಮಿಷನ್ 3.0, ಫೆಬ್ರವರಿ ಮತ್ತು ಮಾರ್ಚ್ ಮಾಹೆಯಲ್ಲಿ ಬಿಟ್ಟು ಹೋದ ಮಕ್ಕಳು-ಮಹಿಳೆಯರಿಗೆ ಲಸಿಕೆ ಅಭಿಯಾನ.

0
123

ದಾವಣಗೆರೆ, ಫೆ.04 : ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಲ್ಲಿ ಬಿಟ್ಟು ಹೋದ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಲಸಿಕೆ ಹಾಕಿಸುವ ತೀವ್ರಗೊಂಡ ಇಂದ್ರಧನುಷ್ ಲಸಿಕಾ ಅಭಿಯಾನವನ್ನು ಫೆಬ್ರವರಿ ಮತ್ತು ಮಾರ್ಚ್ ಮಾಹೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಲಸಿಕಾ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ ಪದ್ಮಾ ಬಸವಂತಪ್ಪ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ತೀವ್ರಗೊಂಡ ಇಂದ್ರಧನುಷ್ ಲಸಿಕಾ ಅಭಿಯಾನ 3.0(ಇಂಟೆನ್ಸಿಫೈಡ್ ಮಿಷನ್ 3.0) ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾವಣಗೆರೆ ಮತ್ತು ಹರಿಹರ ನಗರ ಪ್ರದೇಶದಲ್ಲಿ ಮುಖ್ಯವಾಗಿ ವಲಸೆ ಪ್ರದೇಶಗಳು, ಕೊಳಚೆ ಪ್ರದೇಶಗಳಲ್ಲಿ ಸಾರ್ವತ್ರಿಕ ಲಸಿಕೆಯಿಂದ ಬಿಟ್ಟು ಹೋದ 02 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಈಗಾಗಲೇ ಕ್ರಿಯಾ ಯೋಜನೆ ಸಿದ್ದವಾಗಿದ್ದು, ಈ ಕಾರ್ಯಕ್ರಮವನ್ನು ನಿಗದಿತ ಗುರಿ ಸಾಧಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ರಾಜ್ಯದಲ್ಲಿ ಇಂಟೆನ್ಸಿಫೈಡ್ ಮಿಷನ್ 3.0 ಕಾರ್ಯಕ್ರಮದಲ್ಲಿ ರಾಜ್ಯದ 13 ಜಿಲ್ಲೆಗಳ ಪೈಕಿ ದಾವಣಗೆರೆಯೂ ಒಂದಾಗಿದೆ. ಈ ಕಾರ್ಯಕ್ರಮದಲ್ಲಿ ಲಸಿಕೆಗಳಾದ ಡಿಟಿಪಿ, ಮೀಸಲ್ಸ್, ಟಿಟಿ, ಬಿಸಿಜಿ, ರುಬೇಲ್ಲಾ ಸೇರಿದಂತೆ ಸಾರ್ವತ್ರಿಕೆ ಲಸಿಕೆಗಳನ್ನು ಹಾಕಿಸಿಕೊಳ್ಳುವಲ್ಲಿ ಬಿಟ್ಟುಹೋದ 2 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯನ್ನು ಗುರುತಿಸಿ ಈ ಲಸಿಕೆಗಳನ್ನು ನೀಡಲಾಗುವುದು.
ಈ ಲಸಿಕಾ ಕಾರ್ಯಕ್ರಮವನ್ನು ಫೆಬ್ರವರಿ ಮತ್ತು ಮಾರ್ಚ್ ಮಾಹೆಗಳ 8, 9, 10 ಮತ್ತು 12 ನೇ ದಿನಾಂಕಗಳಂದು ದಾವಣಗೆರೆ ಮತ್ತು ಹರಿಹರ ನಗರಗಳ ಈಗಾಗಲೇ ಗುರುತಿಸಲಾದ ಸ್ಥಳಗಳಲ್ಲಿ ನಡೆಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಸಿಕಾಕರಣದಲ್ಲಿ ಶೇ.26 ಇಳಿಕೆ ಕಂಡು ಬಂದಿದ್ದು, ಇದನ್ನು ಸರಿದೂಗಿಸಲು ಮತ್ತು ಲಸಿಕಾಕರಣದಲ್ಲಿ ಶೇ.90 ಗುರಿ ಸಾಧಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಾವಣಗೆರೆ ಮತ್ತು ಹರಿಹರ ನಗರಗಳ ವಲಸೆ ಪ್ರದೇಶ, ಕೊಳಚೆ ಪ್ರದೇಶಗಳಲ್ಲಿ ಲಸಿಕೆ ಬಿಟ್ಟು ಹೋದ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಮೈಕ್ರೊ ಯೋಜನೆ ತಯಾರಿಸಿದ್ದು ಈ ಪ್ರಕಾರ ಲಸಿಕೆಗಳನ್ನು ನೀಡಲಾಗುವುದು ಎಂದರು.
ಈ ಕಾರ್ಯಕ್ರಮದ ಉಪಯೋಗವನ್ನು ಮಕ್ಕಳು ಮತ್ತು ಮಹಿಳೆಯರು ಪಡೆದುಕೊಂಡು ಲಸಿಕೆಯಿಂದ ತಡೆಯಬಹುದಾದ ರೋಗಗಳನ್ನು ತಡೆದು ಸುಧಾರಣೆ ತರಬಹುದಾಗಿದೆ. ಆದ ಕಾರಣ ಗುರುತಿಸಲಾದ ಗುಂಪಿನನವರು ಈ ತಿಂಗಳ ಮತ್ತು ಮಾರ್ಚ್ ಮಾಹೆಯ 8,9,10 ಮತ್ತು 12 ರಂದು ಲಸಿಕೆ ಪಡೆಯಬೇಕು. ಹಾಗೂ ಶೇ.90 ಲಸಿಕಾಕರಣಕ್ಕೆ ಸಹಕರಿಸಬೇಕೆಂದರು.
ಸಾರ್ವತ್ರಿಕ ಲಸಿಕಾಕರಣದ ಕುರಿತು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ನಗರಾಭಿವೃದ್ದಿ ಕೋಶ, ಯುವಜನ ಸಬಲೀಕರಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಮಕ್ಕಳು ಮತ್ತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಲಸಿಕಾಕರಣದ ಯಶಸ್ಸಿಗೆ ಸಹಕರಿಸಬೇಕೆಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಚಿಗಟೇರಿ ಜಿಲ್ಲಾಸ್ಪತ್ರೆಯ ಅಧೀಕ್ಷಕ ಜಯಪ್ರಕಾಶ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನಟರಾಜ್, ದಾವಣಗೆರೆ ಮತ್ತು ಹರಿಹರ ತಾಲ್ಲೂಕು ವೈದ್ಯಾಧಿಕಾರಿಗಳು, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here