ದಾವಣಗೆರೆ, ಮಾ.18 -ಯಾವುದಾದರೂ ಕ್ರೀಡೆಯಲ್ಲಿ ನಿಮ್ಮನ್ನು ತೊಡಗಿಸಿಕೊಂಡಾಗ ನಿಮ್ಮ ಆರೋಗ್ಯ ಸುಧಾರಿಸಿ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಮಹಾನಗರಪಾಲಿಕೆಯ ಮಹಾಪೌರರಾದ ಎಸ್.ಟಿ ವೀರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ದಾವಣಗೆರೆ ಹಾಗೂ ದಾವಣಗೆರೆ ವಿಶ್ವವುದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಾ.16 ರಂದು ನಡೆದ ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ದಾವಣಗೆರೆ ವಲಯ ಮತ್ತು ಅಂತರ ವಲಯದ ಬಾಲ್ ಬ್ಯಾಡ್ಮಿಂಟನ್ ಪುರುಷರ ಮತ್ತು ಮಹಿಳೆಯರ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಮೊಬೈಲ್ ಸಂಸ್ಕøತಿಗೆ ಒಳಗಾಗಿದ್ದಾರೆ. ತಮ್ಮ ಜವಬ್ದಾರಿಗಳ ಬಗ್ಗೆ ಅರಿವಿರದೆ ಸಮಯ ವ್ಯರ್ಥ ಮಾಡುತಿದ್ದಾರೆ. ಈ ಮೊಬೈಲ್ ವ್ಯಸನವನ್ನು ಮುಂದುವರೆಸದೆ ಯಾವುದಾದರೂ ಕ್ರೀಡೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿರಿ. ಕ್ರೀಡೆಯಿಂದ ನಿಮ್ಮ ಆರೋಗ್ಯ ಸುಧಾರಿಸುವುದಲ್ಲದೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಇದರಿಂದ ನಿಮ್ಮ ಗುರಿಯನ್ನು ತಲುಪುವುದು ಸರಳವಾಗುತ್ತದೆ. ನಾನು ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯನಾಗಿದ್ದು, ನನ್ನನ್ನು ಗುರುತಿಸಿ ಈ ದೊಡ್ಡ ಹುದ್ದೆಯನ್ನು ನೀಡಿದ್ದಾರೆ. ಹಾಗಾಗಿ ಏನೇ ಮಾಡಿದರೂ ನಮ್ಮಲ್ಲಿ ಧೃಢ ಸಂಕಲ್ಪ ಇರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ.ವೀರೇಶ್ ವಹಿಸಿದ್ದರು, ರಂಗಸ್ವಾಮಿ ಸ್ವಾಗತಿಸಿದರು. ಪ್ರೊ.ಭೀಮಣ್ಣ ಸುಣಗಾರ್ ನಿರೂಪಿಸಿದರು. ಡಾ. ಮಹೇಶ್ ಪಾಟೀಲ್ ವಂದಿಸಿದರು. ವೀರೇಂದ್ರ, ಸದಾಶಿವ, ಡಾ.ವೆಂಕಟೇಶ್, ತಿಪ್ಪೇಸ್ವಾಮಿ, ಬಸವರಾಜ್ ದಮ್ಮಳ್ಳಿ ಮುಂತಾದವರು ಉಪಸ್ಥಿತರಿದ್ದರು.