ಕೋವಿಡ್-19 ನಿಯಂತ್ರಣ ನೋಡಲ್ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ; ಡಿಸಿ

0
101

ಮಡಿಕೇರಿ :-ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 5 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್-19ರ ಸೋಂಕು ನಿಯಂತ್ರಣ ಮತ್ತು ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತು ವೈದ್ಯರು ಮತ್ತು ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಆರೈಕೆ ಕೇಂದ್ರಗಳಲ್ಲಿನ ರೋಗಿಗಳಿಗೆ ಊಟ, ಬಿಸಿ ನೀರು, ಅಗತ್ಯ ಮೂಲ ಸೌಕರ್ಯದ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಅವರು ಸಮಯ ಕಳೆಯಲು ಪುಸ್ತಕಗಳು, ದಿನಪತ್ರಿಕೆಗಳು ಹಾಗೂ ಒಳಾಂಗಣ ಆಟದ ಸಾಮಾಗ್ರಿಗಳನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಸುಚಿತ್ವವನ್ನು ಕಾಪಾಡಬೇಕು. ಹಾಗೂ ವ್ಯವಸ್ಥಿತವಾಗಿ ಸ್ಯಾನಿಟೈಸರ್ ಮಾಡಬೇಕು. ಮತ್ತು ಯಾವುದೇ ರೀತಿಯ ದೂರುಗಳು ಬರದಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕಂಟೈನ್‍ಮೆಂಟ್ ವಲಯಗಳ ನಿರ್ವಹಣೆ ಉತ್ತಮವಾಗಿದ್ದು, ಹೆಚ್ಚಿನ ಗಮನಹರಿಸಬೇಕು. ಕೋವಿಡ್ ಸಂಬಂಧದ ಅಂಕಿ ಅಂಶಗಳ ನಿಖರವಾದ ಮಾಹಿತಿ ದೊರಕುವಂತಾಗಬೇಕು. ಹಾಗೂ ಅಂಕಿ ಅಂಶಗಳಲ್ಲಿ ಯಾವುದೇ ಅಸಂಗತತೆ ಕಂಡುಬರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಕೆಲವೊಂದು ಕಂಟೈನ್‍ಮೆಂಟ್ ವಲಯಗಳಲ್ಲಿ ಸರಿಯಾಗಿ ಪೋಸ್ಟ್‍ರ್ ಅಂಟಿಸದಿರುವುದು ಗಮನಕ್ಕೆ ಬಂದಿದ್ದು, ಕಂಟೈನ್‍ಮೆಂಟ್ ವಲಯಗಳಲ್ಲಿ ಕಡ್ಡಾಯವಾಗಿ ಪೋಸ್ಟ್‍ರ್ ಅಂಟಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ತ್ವರಿತವಾಗಿ ಪತ್ತೆಹಚ್ಚುವ ಕಾರ್ಯವಾಗಬೇಕು. 30 ಜನರಿಗೆ ಒಬ್ಬರಂತೆ ಸಂಪರ್ಕ ಪತ್ತೆಹಚ್ಚುವ ಕಾರ್ಯ ನಡೆಸಬೇಕು. ಸರ್ಕಾರದ ಮಾರ್ಗಸೂಚಿಯನ್ವಯ ಕೋವಿಡ್ ಪರೀಕ್ಷೆಗಳ ಗುರಿಯನ್ನು ಸಾಧಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಕೋವಿಡ್ ಆರೈಕೆ ಕೇಂದ್ರದಲ್ಲಿರುವ ಬೆಡ್‍ಗಳ ಲಭ್ಯತೆ ಹಾಗೂ ಎಷ್ಟು ಬೆಡ್‍ಗಳು ಭರ್ತಿಯಾಗಿವೆ ಮತ್ತು ಎಷ್ಟು ಬೆಡ್‍ಗಳು ಖಾಲಿ ಇವೆ ಎಂಬುದರ ಬಗ್ಗೆ ಪ್ರತಿದಿನ ಮಾಹಿತಿ ಒದಗಿಸಬೇಕು ಎಂದು ನೋಡಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವರಿಗೆ ಹಾಗೂ ಕೋವಿಡ್ ಆರೈಕೆ ಕೇಂದ್ರದಲ್ಲಿರುವವರಿಗೆ ಕಾಲ ಕಾಲಕ್ಕೆ ವೈದ್ಯರು ತಪಾಸಣೆ ನಡೆಸಬೇಕು. ಮತ್ತು ಹೋಂ ಐಸೋಲೇಷನ್‍ನಲ್ಲಿ ಇರುವವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಸೂಚಿಸಿದರು.
ಆಮ್ಲಜನಕ ಅವಶ್ಯವಾಗಿರುವುದರಿಂದ ಆಮ್ಲಜನಕ ಶೇಖರಣೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಆಮ್ಲಜನಕದ ಕೊರತೆಯಾಗದಂತೆ ಎಚ್ಚರವಹಿಸಬೇಕು. ಆಮ್ಲಜನಕ ಪೂರೈಕೆ ನೋಡಲ್ ಅಧಿಕಾರಿಯನ್ನಾಗಿ ಔಷಧ ನಿಯಂತ್ರಣ ಅಧಿಕಾರಿಯನ್ನು ನೇಮಿಸಲಾಗಿದ್ದು, ಅವರು ಇದರ ಮೇಲ್ವಿಚಾರಣೆ ನಡೆಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಮಾತನಾಡಿ ಸಹಾಯವಾಣಿ ಕೇಂದ್ರಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳನ್ನು ನೇಮಿಸಲಾಗಿದ್ದು, ಸಹಾಯವಾಣಿ ಮೂಲಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಜನರ ಆರೋಗ್ಯದ ಕುರಿತು ವಿಚಾರಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ರೆಮ್‍ಡಿಸಿವಿರ್ ಲಭ್ಯವಿದೆ ಹಾಗೂ ಆಮ್ಲಜನಕದ ಲಭ್ಯತೆ ಇದ್ದು ಈಗಾಗಲೇ ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕುಗಳಿಗೆ 24 ಜಂಬೂ ಜೆಟ್ ಸಿಲಿಂಡರ್‍ಗಳನ್ನು ನೀಡಲಾಗಿದೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ(ಪ್ರಭಾರ) ಶ್ರೀನಿವಾಸ ಅವರು ಮಾತನಾಡಿ ಕಂಟೈನ್‍ಮೆಂಟ್ ವಲಯಗಳ ಮೇಲೆ ನಿಗಾ ವಹಿಸಲಾಗಿದೆ. ಹಾಗೂ ಶಾಲಾ ಶಿಕ್ಷಕರನ್ನು ಕೋವಿಡ್ ಕೆಲಸಗಳಿಗೆ ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಈಗಾಗಲೇ ಅವರಿಗೆ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಮಾತನಾಡಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಪಾಸಿಟಿವ್ ಸೋಂಕಿತರಿಗೆ ಹೋಂ ಐಸೊಲೇಷ್‍ನ ಅಗತ್ಯ ಇದ್ದವರನ್ನು ಹೋಂ ಐಸೊಲೇಷ್‍ನ್‍ಗೆ ಹಾಗೂ ಇಲ್ಲದವರನ್ನು ವಾರ್ಡ್‍ಗಳಿಗೆ ಕಳುಹಿಸಲು ಕ್ರಮವಹಿಸುವಂತೆ ಸೂಚಿಸಿದರು.
ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಕೊಡಗು ವೈದ್ಯಕೀಯ ಕಾಲೇಜಿನ ಅಧೀಕ್ಷಕರಾದ ಡಾ.ಲೋಕೇಶ್, ಸಮುದಾಯ ಆರೋಗ್ಯಾಧಿಕಾರಿ ಡಾ.ಮಹೇಶ್, ಸ್ಥಾನೀಯ ವೈದ್ಯಾಧಿಕಾರಿ ಡಾ.ರೂಪೇಶ್, ಡಾ.ಆನಂದ ಅವರು ಹಲವು ಮಾಹಿತಿ ನೀಡಿದರು.
ಜಿ.ಪಂ.ಸಿಇಓ ಭನ್ವರ್ ಸಿಂಗ್ ಮೀನಾ, ನೋಡಲ್ ಅಧಿಕಾರಿಗಳಾದ ಜಿ.ಪಂ.ಕಾರ್ಯದರ್ಶಿ ಲಕ್ಷ್ಮಿ, ಐಟಿಡಿಪಿ ಅಧಿಕಾರಿ ಶಿವಕುಮಾರ, ಸಮಾಜ ಕಲ್ಯಾಣಾಧಿಕಾರಿ ಶೇಖರ್, ಕೃಷಿ ಇಲಾಖೆ ಉಪ ನಿರ್ದೇಶಕರಾದ ರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಿಂಗರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಚ್ಚಾಡೋ, ಕೂಡಿಗೆ ಡಯಟ್‍ನ ಪ್ರಾಂಶುಪಾಲರಾದ ಶ್ರೀಕಂಠಯ್ಯ ಇತರರು ಇದ್ದರು.

LEAVE A REPLY

Please enter your comment!
Please enter your name here