ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಉತ್ತರ ವಲಯ ಅರಣ್ಯ ಅಧಿಕಾರಿಯಾಗಿ ಸೈಯದ್ ದಾದಾ ಕಲಂದರ್ ಕಾರ್ಯನಿರ್ವಹಿಸುತ್ತಿದ್ದರು ಈಗ ಅವರು ವರ್ಗಾವಣೆಗೊಂಡಿದ್ದು ಅವರ ಜಾಗಕ್ಕೆ ಜಗದೀಶ್ ಮೇದಾ ಎನ್ನುವವರು ಬರುವ ನಿರೀಕ್ಷೆ ಇದೆ.
ಈ ವಿಷಯವಾಗಿ ಪರಿಸರ ಪ್ರೇಮಿಗಳು ಕೆಲವು ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದು,ಕಳಂಕಿತರು ಬರುವುದು ಬೇಡ ಎಂದು ಸಂಜಯ್ ಮೋಹನ್ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಂಗಳೂರು ಇವರಿಗೆ
ಪತ್ರ ಬರೆದಿರುವುದಾಗಿ ಸಮಾಜ ಪರಿವರ್ತನಾ ಸಮುದಾಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕರ್ನಾಟಕ ಲೋಕಾಯುಕ್ತರಾಗಿದ್ದ ಜಸ್ಟಿಸ್ ಸಂತೋಷ್ ಹೆಗಡೆಯವರ ಅಕ್ರಮ ಗಣಿಗಾರಿಕೆ ವರದಿಯಲ್ಲಿ ಖಾರಪುಡಿ ಮಹೇಶ ಇವರ ಮನೆಯ ಮೇಲೆ ಕಾರ್ಯಾಚರಣೆ ಮಾಡಿದಾಗ ಹಲವು ದಾಖಲೆ ಸೇರಿದಂತೆ Pendrive ಗಳನ್ನ ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಗಂಗಾವತಿ ಭಾಗದಲ್ಲಿ ಫಾರೆಸ್ಟರ್ ಆಗಿ ಸೇವೆಯಲ್ಲಿದ್ದ ಜಗದೀಶ್ ಮೇದಾ ಅವರು ಸಂಡೂರು ಭಾಗದ ಅರಣ್ಯದಲ್ಲಿನ ಅದಿರನ್ನ ಅಕ್ರಮವಾಗಿ ಸಾಗಾಣಿಕೆಗೆ ಅನುವು ಮಾಡಿಕೊಡಲು ಅಕ್ರಮ ಸಂಭಾವನೆ ಪಡೆದಿದ್ದಾರೆಂದು ಲೋಕಾಯುಕ್ತ ವರದಿಯಲ್ಲಿ ದಾಖಲಾಗಿದೆ.
ಒಂದು ವೇಳೆ ಅರಣ್ಯಾಧಿಕಾರಿ ಹುದ್ದೆಗೆ ಬಂದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಸಾಕ್ಷಿಗಳನ್ನು ನಾಶ ಮಾಡುವುದರ ಜೊತೆಗೆ ದಾಖಲೆಗಳನ್ನ ತಿರುಚುವ ಸಾಧ್ಯತೆ ಇರುತ್ತದೆ ಎಂಬುದಾಗಿ ಆರೋಪಿಸುತ್ತಾರೆ ಸಮಾಜ ಪರಿವರ್ತನಾ ಸಮುದಾಯದ ಶ್ರೀಶೈಲ ಆಲದಹಳ್ಳಿ.
ಅಕ್ರಮ ಗಣಿಗಾರಿಕೆಯಿಂದ ಸಂಡೂರು ಭಾಗದ ಅರಣ್ಯವು ಈಗೀಗ ಪುನಶ್ಚೇತನವಾಗುತ್ತಿದೆ ಇಂತಹ ಸಮಯದಲ್ಲಿ ಲೋಕಾಯುಕ್ತ ವರದಿಯಲ್ಲಿ ಹೆಸರಿರುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರಚೋದನೆಯ ಜೊತೆಗೆ ಭ್ರಷ್ಟಾಚಾರದ ಬಗ್ಗೆ ತನಿಖೆಯ ಪಟ್ಟಿಯಲ್ಲಿರುವ ಜಗದೀಶ್ ಮೇದಾ ಇವರನ್ನ ಈ ನಮ್ಮ ಮೇಲಿನ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸಂಡೂರು ಅರಣ್ಯ ಇಲಾಖೆಯ ಉತ್ತರ ವಲಯದ ಅರಣ್ಯಾಧಿಕಾರಿಯಾಗಿ ವರ್ಗಾವಣೆ ಮಾಡಿರುವುದನ್ನ ಮರು ಪರಿಶೀಲಿಸಿ ಬೇರೊಬ್ಬ ಅಧಿಕಾರಿಯನ್ನ ವರ್ಗಾವಣೆ ಮಾಡಬೇಕೆಂದು ಸಮಾಜ ಪರಿವರ್ತನಾ ಸಮುದಾಯ ಒತ್ತಾಯಿಸಿದೆ.