ರಾಜಕೀಯಕ್ಕೆ ಬರುವ ಸೂಚನೆ ಕೊಟ್ಟ ಅಂಬರೀಶ್ ಪುತ್ರ ಅಭಿಷೇಕ್

0
180

ರೆಬೆಲ್ ಸ್ಟಾರ್ ಅಂಬರೀಶ್ ನಟ ಮಾತ್ರ ಅಲ್ಲ.. ಜನಪ್ರಿಯ ರಾಜಕಾರಣಿ ಕೂಡ ಹೌದು. ‘ಮಂಡ್ಯದ ಗಂಡು’ ಎಂದೇ ಖ್ಯಾತಿ ಪಡೆದಿದ್ದ ಅಂಬರೀಶ್ ಮಂಡ್ಯದಿಂದಲೇ ಮೂರು ಬಾರಿ ಸಂಸದರಾಗಿ ಆಯ್ಕೆ ಆಗಿದ್ದರು. ಅಂಬರೀಶ್ ನಿಧನದ ಬಳಿಕ ಪತ್ನಿ ಸುಮಲತಾ ಅಂಬರೀಶ್ ರಾಜಕೀಯ ಪ್ರವೇಶ ಮಾಡಿದರು. ಸ್ವಾಭಿಮಾನಿಯಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ಸುಮಲತಾ ಅಂಬರೀಶ್ ಇದೀಗ ಮಂಡ್ಯದ ಸಂಸದೆಯಾಗಿದ್ದಾರೆ.

ಈಗ ಅಂಬರೀಶ್ ಪುತ್ರ ನಟ ಅಭಿಷೇಕ್ ಕೂಡ ರಾಜಕೀಯಕ್ಕೆ ಧುಮುಕುವ ಇಂಗಿತ ವ್ಯಕ್ತಪಡಿಸಿದ್ದಾರೆ. ”ಜನ ಬಯಸಿದರೆ ಎಲೆಕ್ಷನ್‌ಗೆ ನಿಲ್ತೀನಿ. ಜನ ಬಯಸಿದರೆ ರಾಜಕೀಯಕ್ಕೆ ಬರ್ತೀನಿ” ಅಂತ ಹೇಳುವ ಮೂಲಕ ಭವಿಷ್ಯದಲ್ಲಿ ರಾಜಕಾರಣಕ್ಕೆ ಪದಾರ್ಪಣೆ ಮಾಡುವ ಸೂಚನೆಯನ್ನು ಅಭಿಷೇಕ್ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಳುಗನಹಳ್ಳಿಗೆ ತೆರಳಿದ್ದ ಅಭಿಷೇಕ್, ”ಭವಿಷ್ಯದಲ್ಲಿ ಏನೇನು ಬದಲಾವಣೆ ಆಗುತ್ತದೋ ಯಾರಿಗೆ ಗೊತ್ತು? ಜನ ಬಯಸಿದ್ದೇ ಆದರೆ ನಾನು ರಾಜಕೀಯಕ್ಕೆ ಬರ್ತೀನಿ. ಮಂಡ್ಯ ಜಿಲ್ಲೆಯ ಏಳೂ ಕ್ಷೇತ್ರಗಳಿಗೂ ಉತ್ತಮ ಶಾಸಕರು ಸಿಗಬೇಕು. ಒಳ್ಳೆಯ ಜನಪ್ರತಿನಿಧಿಗಳು ಸಿಗಬೇಕು” ಎಂದು ಮಾಧ್ಯಮಗಳ ಮುಂದೆ ಹೇಳಿದರು.

ತಂದೆ ಅಂಬರೀಶ್ ನಿಧನದ ಬಳಿಕ ತಾಯಿ ಸುಮಲತಾ ಅಂಬರೀಶ್ ಚುನಾವಣೆಗೆ ಸ್ಪರ್ಧಿಸಿದಾಗ, ಅಭಿಷೇಕ್ ಕೂಡ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಚಲನಚಿತ್ರ ನಟರ ಜೊತೆ ಮುಂದೆ ನಿಂತು ತಾಯಿಯ ಗೆಲುವಿಗಾಗಿ ಶ್ರಮಿಸಿದ್ದರು.

ಅಂದ್ಹಾಗೆ, ‘ಅಮರ್’ ಚಿತ್ರದ ಬಳಿಕ ಅಭಿಷೇಕ್ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ಅಭಿಷೇಕ್ ಜೊತೆಗೆ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

LEAVE A REPLY

Please enter your comment!
Please enter your name here