ಬಳ್ಳಾರಿ,ಸೆ.09: ದೇಶ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಅನಕ್ಷರತೆ ಮೂಲ ಕಾರಣವಾಗಿದ್ದು, ಶಿಕ್ಷಣ ಹೊರತಾದ ಜೀವನ ಇಂದಿನ ದಿನಗಳಲ್ಲಿ ಅತ್ಯಂತ ದಯನೀಯವಾಗಿದೆ ಎಂದು ಬಳ್ಳಾರಿಯ ಉಪವಿಭಾಗದ ಸಹಾಯಕ ಆಯುಕ್ತರಾದ ಡಾ.ಆಕಾಶ್ ಶಂಕರ್ ಅವರು ಹೇಳಿದರು.
ಬಳ್ಳಾರಿಯ ಜಿಲ್ಲಾ ಹಾಗೂ ತಾಲೂಕು ಲೋಕ ಶಿಕ್ಷಣ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ನಡೆದ 55ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಸಾಕ್ಷರತಾ ಸಪ್ತಾಹ ಕಾರ್ಯಕ್ರಮದಲ್ಲಿ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಜನರ ಗಮನವನ್ನು ಶಿಕ್ಷಣದತ್ತ ಸೆಳೆಯಲು, ಅವರ ಹಕ್ಕುಗಳ ಬಗ್ಗೆ ತಿಳಿಯಲು, ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿ ಸಾಧಿಸುವಂತೆ ಪ್ರೆರೇಪಿಸಲು ಈ ಸಾಕ್ಷರತಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಬಡತನ, ನಿರುದ್ಯೋಗ, ಬಾಲ್ಯ ವಿವಾಹ, ಮೂಢ ನಂಬಿಕೆ ಮುಂತಾದ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ಶಿಕ್ಷಣ ಅತ್ಯವಶ್ಯಕ ಎಂದು ಅವರು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ರಾಮಪ್ಪವಯಸ್ಕರಿಗಿಂತ ಸಾಕ್ಷರತಾ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಾಕ್ಷರತಾ ಸಂಯೋಜಕರಾದ ಪ್ರಕಾಶ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಚಿಗಟೇರಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿಯ ಕಾರ್ಯಕ್ರಮ ಸಹಾಯಕ ಜಿ.ಭಾಸ್ಕರ ರೆಡ್ಡಿ, ಬಳ್ಳಾರಿ ತಾಪಂ ಇಒ ಎಂ.ಬಸಪ್ಪ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ನಿಂಗಪ್ಪ, ಶಿವಶಂಕರ ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ಸಾಕ್ಷರತಾ ಸಂಯೋಜಕರು ಮತ್ತು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ಇದ್ದರು.