ವಿಜಯನಗರ(ಹೊಸಪೇಟೆ),ಅ.28 : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಬಳ್ಳಾರಿ, ವಿಜಯನಗರ ಜಿಲ್ಲೆಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಂಪಿ ಪ್ರಾಧಿಕಾರ, ಎ.ಎಸ್.ಐ, ಕೆ.ಎಸ್.ಪಿ.ಸಿ.ಬಿ, ಡಿ.ವೈ.ಎಫ್.ಎಸ್ ಮತ್ತು ಎನ್ಎಸ್ಎಸ್ ಘಟಕಗಳ ಸಹಯೋಗದೊಂದಿಗೆ ಹಂಪಿಯ ವಿರೂಪಾಕ್ಷ ದೇವಸ್ಥಾನದ ಬಳಿ ಕ್ಲೀನ್ ಇಂಡಿಯಾ ಅಭಿಯಾನ ನಡೆಯುತ್ತಿದ್ದು, ವಿಶ್ವಪ್ರಸಿದ್ದ ಹಂಪಿಯಲ್ಲಿ ಸ್ವಚ್ಛ ಭಾರತ ಹಾಗೂ ಸ್ವಚ್ಛ ಹಂಪಿ ಕಾರ್ಯಕ್ರಮ ಗುರುವಾರ ನಡೆಯಿತು.
ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಈ ಸ್ವಚ್ಛತಾ ಕಾರ್ಯಕ್ರಮ ಒಂದುದಿನಕ್ಕೆ ಮಾತ್ರ ಸೀಮಿತವಾಗದೇ ಪ್ರತಿ ಶುಕ್ರವಾರದಂದು ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮ ಯಶಸ್ವಿಯಾಗಬೇಕೆಂದರೆ ವೇದಿಕೆ ಕಾರ್ಯಕ್ರಮ ನಂತರ ನಮ್ಮ ಕೆಲಸ ಕಾರ್ಯ ಚೆನ್ನಾಗಿರಬೇಕು ಎಂದರು.
ಯುವಜನರು ಹಂಪಿಯನ್ನು ಸ್ವಚ್ಛಭಾರತ ಮಾಡುವ ಭಾಗವಾಗಿ ಪರಿಗಣಿಸಿ ಈ ಪ್ರದೇಶವನ್ನು ಸ್ವಚ್ಛವಾಗಿ ಮಾಡಬೇಕು. ನಂತರ ಇದನ್ನು ಔಪಚಾರಿಕವಾಗಿ ಈ ಒಂದು ದಿನಕ್ಕೆ ಮಾತ್ರ ಸಿಮಿತ ಮಾಡದೇ, ಹೆಚ್.ಸಿ.ಸಿ.ಬಿ ಯವರು ಸಹಕಾರದೊಂದಿಗೆ ಹಂಪಿಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ಮುಂದಿನ 6 ತಿಂಗಳವರೆಗೂ ಪ್ರತಿ ಶುಕ್ರವಾರ ಹಾಗೂ ಶನಿವಾರ ಶ್ರಮದಾನ ಮಾಡುವ ಕಾರ್ಯಕ್ರಮದ ಆಯೋಜನೆಯನ್ನು ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು.
ಇಲಾಖೆಯ ಸಿಬ್ಬಂದಿಗಳು, ಎನ್ಎಸ್ಎಸ್, ಸ್ವಯಂಸೇವಕರು, ಸ್ವಸಹಾಯ ಸಂಘದ ಸದಸ್ಯರುಗಳು ಹಾಗೂ ಎಲ್ಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸೇರಿ ಜಿಲ್ಲಾಧಿಕಾರಿಯವರು ಸ್ವಚ್ಛಭಾರತ ಹಾಗೂ ಪ್ಲಾಸ್ಟಿಕ್ ಮುಕ್ತ ಹಂಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಯುವ ನೆಹರು ಯುವ ಕೇಂದ್ರದ ಹಾಗೂ ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ವೈದ್ಯ, ಜಿ.ಪಂ ಸಿಇಒ ಹರ್ಷಲ್ ಬೊಯೇಲ್ ನಾರಾಯಣಾವ್, ಸಹಾಯಕ ಆಯುಕ್ತರಾದ ಸಿದ್ದರಾಮೇಶ್ವರ, ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ, ನೆಹರು ಯುವ ಕೇಂದ್ರದ ಅಧಿಕಾರಿ ಮೊಂಟು ಪಾತರ, ತಹಶೀಲ್ದಾರ್ ವಿಶ್ವನಾಥ್, ಹಿಂದುಸ್ಥಾನ್ ಕೊಕೊ ಕೋಲಾ ಮತ್ತು ಕಂಪನಿಯ ಘಟಕ ವ್ಯವಸ್ಥಾಪಕ ವಿನೋದ ಜಕಾತಿ, ಪುರತತ್ವ ಇಲಾಖೆಯ ಜಂಟಿ ನಿರ್ದೇಶಕ ಪ್ರಹ್ಲಾದ್, ಭಾರತೀಯ ಪುರತತ್ವ ಇಲಾಖೆಯ ಹುಚ್ಚೇಕರ್ ದೇಸಾಯಿ, ಕೆ.ಎಸ್.ಪಿ.ಸಿ.ಪಿ. ಇಲಾಖೆಯ ಉಮಾಶಂಕರ್, ಪ್ರವಾಸೋದ್ಯಮದ ಡಿಡಿ ತಿಪ್ಪೇಸ್ವಾಮಿ, ಜೆ.ಎಸ್.ಡಬ್ಲ್ಯೂ ಸಿ.ಎಸ್.ಆರ್. ಹೆಡ್ ಪೌಂಡೇಷನ್ ವಿನೋದ್ ಪುರೋಹಿತ್, ವಿದ್ಯಾರ್ಥಿಗಳು, ಯುವಕರು, ಸ್ವಯಂ ಸೇವಕರು ಇನ್ನಿತರರು ಇದ್ದರು.