ಬಳ್ಳಾರಿ,ನ.25 : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಮದುವೆ/ನಿಶ್ಚಿತಾರ್ಥ/ಹುಟ್ಟುಹಬ್ಬದಶುಭಾಷಯ/ರಾಜಕೀಯ/ಸನ್ಮಾನ/ರೆಸ್ಟೋರೆಂಟ್/ಹೋಟೆಲ್/ಖಾಸಗಿ ಅಥವಾ ಸ್ವಂತ ಮನೆಗಳಲ್ಲಿ/ ಸಾರ್ವಜನಿಕ ಮೈದಾನಗಳಲ್ಲಿ ಮತ್ತು ಕಟ್ಟಡ ಇತ್ಯಾದಿ ಸ್ಥಳಗಳಲ್ಲಿ ನಡೆಸುವ ಸಭೆ ಸಮಾರಂಭಗಳ ಕುರಿತು ಸಾರ್ವಜನಿಕರು ಎರಡು ದಿನಗಳ ಮುಂಚಿತವಾಗಿ ಮಹಾನಗರ ಪಾಲಿಕೆಯಲ್ಲಿ ಸಂಬಂಧಪಟ್ಟ ಪರಿಸರ ಅಭಿಯಂತರರು ಮತ್ತು ಆರೋಗ್ಯ ನೀರಿಕ್ಷಕರ ಗಮನಕ್ಕೆ ತರುವುದು ಕಡ್ಡಾಯವಾಗಿರುತ್ತದೆ ಎಂದು ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆ ಸಮಾರಂಭಗಳಲ್ಲಿ ಭೋಜನ, ತಿಂಡಿ-ತಿನಿಸುಗಳು ಇತ್ಯಾದಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಅವಶ್ಯಕವಾಗಿರುತ್ತದೆ. ಆದ್ದರಿಂದ ಸಮಾರಂಭಗಳು ಮಾಡುವವರು ಮಹಾನಗರ ಪಾಲಿಕೆ ಗಮನಕ್ಕೆ ತರದೇ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುವುದರಿಂದ ನಗರದ ಸೌಂದರ್ಯ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಮಾರಂಭಗಳಿಂದ ಉತ್ಪತಿಯಾಗುವ ತ್ಯಾಜ್ಯವನ್ನು ನಗರದ ಹೊರವಲಯದಲ್ಲಿ ವಿಲೇವಾರಿ ಮಾಡುವುದನ್ನು ಕಂಡುಬಂದಲ್ಲಿ ಅಂತಹವರ ವಿರುದ್ಧ ಕರ್ನಾಟಕ ಮುನಿಸಿಪಾಲ್ ಕಾರ್ಪೋರೇಷನ್ 1976ರ ಪ್ರಕಾರ ಮತ್ತು ಎಸ್ಡಬ್ಲ್ಯೂಎಂ ನಿಯಮಾವಳಿ ಪ್ರಕಾರ ದಂಡ ವಿಧಿಸಿ ಕಾನೂನಿನ ರೀತ್ಯಾ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ನಗರವನ್ನಾಗಿಸಲು ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಿ ಸಹಕರಿಸಲು ಅವರು ಮನವಿ ಮಾಡಿದ್ದಾರೆ.