ಸಂಡೂರು: ಸೆ: 29: ತಾಲೂಕಿನ ತಾಳೂರು ಗ್ರಾಮದ ಕಲ್ಲೇಶ್ವರ ದೇವಾಲಯದ ಪಾರ್ಕಿನಲ್ಲಿ “ವಿಶ್ವ ಹೃದಯ ದಿನಾಚರಣೆ” ಕುರಿತು ಗುಂಪು ಸಭೆಯ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಮೇಘನಾಥ್ ಮಾತನಾಡಿ ಹೃದಯ ಕ್ರಿಯೆ ಚೆನ್ನಾಗಿ ಇರಬೇಕಾದರೆ ಅದರ ಕಾಳಜಿ ನಾವು ಮಾಡಲೇ ಬೇಕು ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ ಉತ್ತಮ ಜೀವನ ಶೈಲಿಯಲ್ಲಿ ಅಡಗಿದೆ ಹೃದಯದ ಆರೋಗ್ಯ, ಬದಲಾಗುತ್ತಿರುವ ಜೀವನ ಶೈಲಿಯಿಂದ ಹೃದಯಕ್ಕೆ ಅಪಾಯವಾಗುತ್ತಿದೆ, ಹೆಚ್ಚು ಕೊಬ್ಬಿನಾಂಶ ಹೊಂದಿರುವ ಆಹಾರ, ಹೆಚ್ಚು ಉಪ್ಪು, ಖಾರ, ಮಸಾಲೆ ಪದಾರ್ಥಗಳ ಬಳಕೆ, ಒಳ್ಳೆಯದಲ್ಲ, ಕಾಳುಗಳು, ಸೊಪ್ಪು, ತರಕಾರಿ ಇರುವ ಆಹಾರ, ಹಣ್ಣುಗಳ ಸೇವನೆ ಉತ್ತಮ, ನಿಯಮಿತ ವ್ಯಾಯಾಮ, ಸದಾ ಚಟುವಟಿಕೆಯಿಂದ ಇರಬೇಕು,ಧೂಮಪಾನ,ಮದ್ಯಪಾನ, ತಂಬಾಕು ಸೇವನೆ ಯಿಂದ ರಕ್ತದೊತ್ತಡ ಹೆಚ್ಚು ಮಾಡುವುದರಿಂದ ಹೃದಯಕ್ಕೆ ತೊಂದರೆ ಕೊಡುತ್ತದೆ, ಮಧುಮೇಹ ಕಾಯಿಲೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು, ಯುವಕರು ಉತ್ತಮ ಆರೋಗ್ಯ ಜೀವನ ಶೈಲಿಯೊಂದಿಗೆ ಪ್ರತಿ ಆರು ತಿಂಗಳಿಗೊಮ್ಮೆ ಹೃದಯದ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ, ಫಿಟ್ನೆಸ್ಗಾಗಿ ಕಠಿಣ ಜಿಮ್ ಬೇಡ,ಸರಳ ಅಭ್ಯಾಸದೊಂದಿಗೆ ಧ್ಯಾನ, ಯೋಗ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದರು,
2004 ರಿಂದ ವಿಶ್ವ ಹೃದಯ ದಿನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ, ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರ ಹೃದಯ ಸ್ತಂಭನದಿಂದ ಮರಣ ಹೊಂದಿದ್ದು ನೋವಿನ ಸಂಗತಿ, ಅವರ ನೆನಪಿನಲ್ಲಿ ಹೃದಯದ ಆರೋಗ್ಯದ ಕಡೆ ಎಲ್ಲರೂ ಗಮನ ಹರಿಸೋಣ, ಸಾವಿನ ನಂತರ ಸಾರ್ಥಕತೆಗಾಗಿ ಎಲ್ಲರೂ ನೇತ್ರ ಮತ್ತು ಇತರ ಅಂಗಾಂಗ ದಾನಗಳ ಬಗ್ಗೆ ನೊಂದಣಿ ಮಾಡಿಕೊಂಡು ನಮ್ಮ ಮರಣನಂತರ ಇತರರ ಬಾಳಿಗೆ ಬೆಳಕಾಗುವ ಕಡೆ ಸಾಗೋಣ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮಂಜುನಾಥ ಸ್ವಾಮಿ,ಬಸವರಾಜ,ರವಿಕುಮಾರ್, ಜಯರಾಮ,ನಾಗರಾಜ,ಹಂಪಮ್ಮ,ಗಂಗಮ್ಮ,ನೀಲಮ್ಮ,ಈರಮ್ಮ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಆಶಾ ಕಾರ್ಯಕರ್ತೆ ಮಂಗಳ, ಇತರರು ಉಪಸ್ಥಿತರಿದ್ದರು