ರಾಯಚೂರು,ನ.29 :- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರಾಯಚೂರು ತಾಲೂಕಿನಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಮಡೋಳಪ್ಪ ಪಿ.ಎಸ್. (ಡಿ.ಆರ್.ಡಿ.ಎ) ಅವರು ಸೋಮವಾರ ದಂದು ಭೇಟಿ ನೀಡಿ ಪರಿಶೀಲನೆ ಮಾಡಿದರು.
ತಾಲೂಕಿನ ಶಾಖವಾದಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಘನ ತ್ಯಾಜ್ಯ ವಿಲೇವಾರಿ ಘಟಕ, ಪ್ರಗತಿ ಹಂತದಲ್ಲಿರುವ ಗೋದಾಮು ನಿರ್ಮಾಣ, ಗ್ರಾಮೀಣ ಉದ್ಯಾನವನ, ಕೆರೆ ಅಭಿವೃದ್ಧಿ, ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿ ಮತ್ತು ಗ್ರಾಮ ಪಂಚಾಯತಿ ಕಚೇರಿಗೆ ತೆರಳಿ ಯೋಜನೆಯ ಬಗ್ಗೆ ಪಂಚಾಯತಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ನಂತರ ಕಡತ ಪರಿಶೀಲಿಸಿದರು.
ತದನಂತರ ಸಂಗಮಕೂಟ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಇಬ್ರಾಹಿಂ ದೊಡ್ಡಿ, ರ್ರಗುಂಟ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ, ಮೆಟಲ್ ರಸ್ತೆ, ಹೈಟೆಕ್ ಶೌಚಾಲಯ, ಅಡುಗೆ ಕೊಣೆ, ಕಾಮಗಾರಿಗಳನ್ನು ವೀಕ್ಷಣೆ ಜೊತೆಗೆ ಅದರಲ್ಲಿ ಸಂಗ್ರಹವಾದ ಮಕ್ಕಳ ಆಹಾರ ದವಸ ದಾನ್ಯಗಳ ಗುಣಮಟ್ಟವನ್ನು ಪರಿಶೀಲಿಸಿದರು.
ನರೇಗಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿಗಳನ್ನು ಉತ್ತಮವಾಗಿ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾ,ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ತ್ರಾಂತ್ರಿಕ ಸಹಾಯಕರು ಮತ್ತು ಗ್ರಾ.ಪಂ ಸಿಬ್ಬಂದಿ ವರ್ಗದವರು ಇದ್ದರು.