ಕಲಬುರಗಿ.ನ.29.- ಜಿಲ್ಲಾ ಮಟ್ಟದ ಗೃಹರಕ್ಷಕದಳದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭವು ಗುರುವಾರ ಕಲಬುರಗಿಯ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯ ಕ್ರೀಡಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೃಹರಕ್ಷಕರು ಹಾಗೂ ಗೃಹರಕ್ಷಕೀಯರಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದ ಕಲಬುರಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪ್ರಸನ್ನ ದೇಸಾಯಿ ಅವರು ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಲಬುರಗಿ ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟರರಾದ ಸಂತೋಷ ಕುಮಾರ ಪಾಟೀಲ್ ಮಾತನಾಡಿ, ಗೃಹರಕ್ಷಕರು ಆಸಕ್ತಿವಹಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡಾಕೂಟವು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳ ಕಚೇರಿಯ ಸಿಬ್ಬಂದಿಯವರಾದ ಸಿ. ಸಂತೋಷ, ಎಸ್. ನಾಗರಾಜ ಸೇರಿದಂತೆ ಬಸವರಾಜ ದೇಗಲಮಡ್ಡಿ, ವಿಜಯ ಎಂ ಗೋಡಬೋಲೆ, ಲಿಂಗಣ್ಣಾ ಪೂಜಾರಿ, ಮಲ್ಲಯ್ಯಾ ಸ್ವಾಮಿ ಹಾಗೂ ಬಸವರಾಜ ಗೌಡ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸಿ. ಸಂತೋಷ ಸ್ವಾಗತಿಸಿದರು. ಚಂದ್ರಕಾಂತ ಹಾವನೂರ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಇದೇ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಗೃಹರಕ್ಷಕರಿಗೆ ಪ್ರಮಾಣ ಪತ್ರಗಳನ್ನು ಮತ್ತು ಬಹುಮಾನಗಳನ್ನು ವಿತರಿಸಲಾಯಿತು.