ಕನ್ನಡ ಚಲನಚಿತ್ರ ರಂಗದ ಪ್ರತಿಭಾವಂತ ನಟ ಧೀರೇಂದ್ರ ಗೋಪಾಲ್

0
123

ಧೀರೇಂದ್ರ ಗೋಪಾಲ್ ಅಂದರೆ ಮನಮೋಹಕವಾಗಿ ಸಂಭಾಷಣೆ ಹೇಳುತ್ತಿದ್ದ ಒಂದು ಸುಂದರ ಕಲಾಭಿವ್ಯಕ್ತಿ ನಮ್ಮ ಕಣ್ಣೆದುರು ಬಂದು ನಿಲ್ಲುತ್ತದೆ. ಅವರು ಮಾಡಿದ್ದು ಹೆಚ್ಚು ಖಳ ಪಾತ್ರಗಳು. ಆದರೆ ಅವರ ಪಾತ್ರಗಳ ಹೊರಮುಖದ ಖಳತನವೇನೇ ಇದ್ದರೂ, ಅವರೊಳಗೆ ಅಡಗಿದ್ದ ಅದ್ಭುತ ಅಭಿನಯ ಪ್ರತಿಭೆ, ಅವರು ಹೊರಹೊಮ್ಮಿಸುತ್ತಿದ್ದ ಸಂಭಾಷಣಾ ಚತುರತೆ ಕನ್ನಡ ಕಲಾ ರಸಿಕರನ್ನು ಅಪಾರವಾಗಿ ಸೆಳೆದಿದೆ.

ಧೀರೇಂದ್ರ ಗೋಪಾಲರು 1940ರ ಏಪ್ರಿಲ್ 12ರಂದು ಹೊಳೆನರಸೀಪುರದ ಜೋಡಿಗುಬ್ಬಿ ಗ್ರಾಮದಲ್ಲಿ ಜನಿಸಿದರು. ಅವರ ಅಂದಿನ ಹೆಸರು ಹೆಚ್. ಎನ್. ಗೋಪಾಲರಾವ್.

ಧೀರೇಂದ್ರ ಗೋಪಾಲರಿಗೆ ಬಾಲ್ಯದಿಂದಲೂ ಅಭಿನಯ ಕಲೆಯಲ್ಲಿ ಅಪಾರ ಆಸಕ್ತಿ. ಒಮ್ಮೆ ಶಾಲೆಯಲ್ಲಿ ಅವರ ಏಕಪಾತ್ರಾಭಿನಯವನ್ನು ಕಂಡು ಮೆಚ್ಚಿಕೊಂಡ ಗುಬ್ಬಿ ವೀರಣ್ಣನವರು, ಅವರಿಗೆ ತಮ್ಮ ನಾಟಕ ತಂಡವನ್ನು ಸೇರಲು ಆಹ್ವಾನ ನೀಡಿದರು. ಯುವಕ ಧೀರೇಂದ್ರ ಗೋಪಾಲರು ‘ಎಚ್ಚಮ ನಾಯಕ’ನ ಪಾತ್ರದಲ್ಲಿ ವಿಜ್ರಂಭಿಸಿದರು. ಅಂದಿನಿಂದ ಅವರು ಹಿಂತಿರುಗಿ ನೋಡಲಿಲ್ಲ. ರಂಗಭೂಮಿಯಲ್ಲಿ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದ ಧೀರೇಂದ್ರ ಗೋಪಾಲರ ನಾಟಕಗಳಲ್ಲಿ ಟಿಪ್ಪು ಸುಲ್ತಾನ್, ಮುದುಕನ ಮದುವೆ ಮುಂತಾದವು ಪ್ರಸಿದ್ಧಿ ಪಡೆದಿವೆ.

ಒಮ್ಮೆ ನಿರ್ದೇಶಕ ಸಿ. ವಿ. ಶಿವಶಂಕರ್ ಅವರಿಂದ ಪುಟ್ಟ ಪಾತ್ರವೊಂದಕ್ಕೆ ಆಹ್ವಾನಿತರಾಗಿದ್ದ ಧೀರೇಂದ್ರ ಗೋಪಾಲ್ ಮುಂದೆ ಪುಟ್ಟಣ್ಣ ಕಣಗಾಲರ ‘ನಾಗರಹಾವು’ ಚಿತ್ರದಲ್ಲಿ ಹೆಚ್ಚು ಪರಿಚಿತಗೊಂಡರು. ‘ಪಡುವಾರಳ್ಳಿ ಪಾಂಡವರು’ ಚಿತ್ರದಲ್ಲಿನ ಅವರ ಹಳ್ಳಿಯ ಗೌಡನ ಪಾತ್ರದ ನಿರ್ವಹಣೆಯಂತೂ ಕನ್ನಡ ಚಿತ್ರರಂಗದ ಮಹತ್ವದ ಅಭಿವ್ಯಕ್ತಿಗಳಲ್ಲೊಂದು ಎನಿಸುವಂತೆ ಚಿತ್ರರಸಿಕರ ಮನದಲ್ಲಿ ಉಳಿಯುವಂತೆ ಮಾಡಿದೆ. ‘ಪಡುವಾರಳ್ಳಿ ಪಾಂಡವರು’ ಚಿತ್ರದ ಧೀರೇಂದ್ರ ಗೋಪಾಲ್ ಮತ್ತು ಮುಸುರಿ ಕೃಷ್ಣಮೂರ್ತಿ ಜೋಡಿ ಮಾಡಿದ ಮೋಡಿ, ಖಳ ಪಾತ್ರ ನಿರ್ವಹಣೆಗಳಿಗೊಂದು ಹೊಸ ಭಾಷ್ಯವನ್ನೇ ಬರೆದಂತದ್ದು.

ಮುಂದೆ ಧೀರೇಂದ್ರ ಗೋಪಾಲರು ಹೆಚ್ಚು ಹೆಚ್ಚು ಒಂದೇ ರೀತಿಯ ಖಳ ಪಾತ್ರಗಳಲ್ಲಿಯೇ ಅಭಿನಯಿಸಿದರು ಎಂಬುದು ನಿಜವಾದರೂ ಅವರ ಭಾವಾಭಿನಯ ಮತ್ತು ಸಂಭಾಷಣಾ ರೀತಿ ಚಿತ್ರರಸಿಕರನ್ನು ಸಾಕಷ್ಟು ಮೋಡಿ ಮಾಡಿತ್ತು. ಸುಮಾರು 180 ಚಿತ್ರಗಳಲ್ಲಿ ನಟಿಸಿದ ಧೀರೇಂದ್ರ ಗೋಪಾಲರು ಅಭಿನಯಿಸಿದ ಕೆಲವು ಚಿತ್ರಗಳನ್ನು ಹೆಸರಿಸುವುದಾದರೆ ‘ನಾಗರಹಾವು’, ‘ಪಡುವಾರಳ್ಳಿ ಪಾಂಡವರು’, ‘ನಂಜುಂಡಿ ಕಲ್ಯಾಣ’, ‘ಚಕ್ರವ್ಯೂಹ’, ‘ಸಾಹಸ ಸಿಂಹ’, ‘ಖೈದಿ’, ‘ಗಜಪತಿಯ ಗರ್ವಭಂಗ’, ‘ಅಣ್ಣಯ್ಯ’, ‘ಗಡಿಬಿಡಿ ಗಂಡ’, ‘ಪುಡಾರಿ ಪರಂಧಾಮಯ್ಯ’ ಮುಂತಾದವು ನೆನಪಾಗುತ್ತವೆ.

ಧೀರೇಂದ್ರ ಗೋಪಾಲರ ಮತ್ತೊಂದು ಪ್ರಸಿದ್ಧಿಯ ಕ್ಷೇತ್ರವೆಂದರೆ ಅವರ ಧ್ವನಿ ಸುರುಳಿಗಳು. ನಾಡು ಕಂಡ ಅತ್ಯುತ್ತಮ ಸಂಭಾಷಣಾ ಚತುರರಲ್ಲೊಬ್ಬರಾದ ಧೀರೇಂದ್ರ ಗೋಪಾಲರು ತಮ್ಮೀ ಪ್ರತಿಭೆಯನ್ನು ಧ್ವನಿಸುರುಳಿಗಳಿಗೆ ಸಮರ್ಥವಾಗಿ ಬಳಸಿಕೊಂಡು ಹಲವಾರು ಪ್ರಸಿದ್ಧ ಧ್ವನಿಸುರುಳಿಗಳನ್ನು ಮಾರುಕಟ್ಟೆಗೆ ತಂದಿದ್ದರು. ರಾಜಕೀಯ ವಿಡಂಭನಾ ನಿರೂಪಣೆಗಳಿಗಾಗಿ ಅವರು ಮೂನ್ನೂರಕ್ಕೂ ಹೆಚ್ಚು ರೀತಿಯ ಧ್ವನಿ ವೈವಿಧ್ಯಗಳನ್ನು ಬಳಸಿದ್ದರು ಎಂದು ಹೇಳಲಾಗಿದೆ.

ಧೀರೇಂದ್ರ ಗೋಪಾಲರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿದ್ದವು.

ಕೆಲವು ಕಾಲ ಅನಾರೋಗ್ಯಕ್ಕೊಳಗಾಗಿದ್ದ ಧೀರೇಂದ್ರ ಗೋಪಾಲರು 2000ದ ಡಿಸೆಂಬರ್ 25ರಂದು ಈ ಲೋಕವನ್ನಗಲಿದರು. ತಮ್ಮ ಅಪೂರ್ವ ಪ್ರತಿಭೆಯ ಮೂಲಕ ಕಲಾ ಲೋಕದಲ್ಲಿ ಅವರು ತಮ್ಮ ನೆನಪನ್ನು ಉಳಿಸಿಹೋಗಿದ್ದಾರೆ.

LEAVE A REPLY

Please enter your comment!
Please enter your name here