ಡಿ.13 ರಿಂದ 24 ರವರೆಗೆ ಬೆಳಗಾವಿಯದಲ್ಲಿ ವಿಧಾನಮಂಡಲ ಅಧಿವೇಶನ ಯಶಸ್ವಿಗೆ ಸಮರ್ಪಕ ಸಿದ್ಧತೆಗಳನ್ನು ಕೈಗೊಳ್ಳಲು ಸಭಾಪತಿ ಕಾಗೇರಿ ಸೂಚನೆ

0
90

ಬೆಳಗಾವಿ:ಡಿ.02:ಇಲ್ಲಿನ ಸುವರ್ಣಸೌಧದಲ್ಲಿ ಇದೇ ಡಿ.13 ರಿಂದ 24 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನವನ್ನು ಯಶಸ್ವಿಗೊಳಿಸಲು ಉತ್ತಮ ವಸತಿ, ಸಾರಿಗೆ ,ಆಹಾರ , ಶಿಷ್ಟಾಚಾರ ಸಿದ್ಧತೆಗಳನ್ನು ಸರ್ಕಾರ ,ಜಿಲ್ಲಾಡಳಿತ ಸಮರ್ಪಕವಾಗಿ ಕೈಗೊಳ್ಳಬೇಕು.ಸದ್ಯಕ್ಕೆ ಕೊರೊನಾ ಬಗ್ಗೆ ಯಾವುದೇ ಆತಂಕಗಳಿಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸುವರ್ಣಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಅಧಿವೇಶನದ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಅಧಿವೇಶನಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಬುಲೆಟಿನ್,ಕಾರ್ಯಕ್ರಮ ಪಟ್ಟಿ,ಕಲಾಪಗಳು,ಪ್ರಶ್ನೋತ್ತರಗಳ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆ
2018 ರ ಡಿಸೆಂಬರ್‌ನಲ್ಲಿ ಇಲ್ಲಿ ಅಧಿವೇಶನ ನಡೆದಿತ್ತು.ಅದರ ನಂತರ ಕೊರೊನಾ ಕಾರಣದಿಂದ ಮೂರುವರ್ಷಗಳ ಬಳಿಕ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿದೆ. ಕೊರೊನಾ ನಿಯಂತ್ರಣ,ಅತಿವೃಷ್ಟಿ,ವಿಧಾನಪರಿಷತ್ ಚುನಾವಣೆ ಎಲ್ಲವುಗಳ ಮಧ್ಯೆ ಅಧಿವೇಶನ ಆಯೋಜಿಸುವುದು ಸವಾಲಿನ ಕಾರ್ಯವಾಗಿದೆ. ಸಿದ್ಧತೆಗಳನ್ನು ಸರ್ಕಾರ,ಜಿಲ್ಲಾಡಳಿತ ಹಾಗೂ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಪರಸ್ಪರ ಸಮನ್ವಯದೊಂದಿಗೆ ವಿಶ್ವಾಸಪೂರ್ಣವಾಗಿ ಆಯೋಜಿಸಬೇಕು.ಎಲ್ಲಾ ಹಂತಗಳಲ್ಲಿ ಜವಾಬ್ದಾರಿಯುತವಾಗಿ ಪರಸ್ಪರ ಸಂವಹನ ಮಾಡಬೇಕು.ಸಚಿವರು,ಶಾಸಕರ ಹಿರಿತನ ಆಧರಿಸಿ ಸೌಕರ್ಯಗಳನ್ನು ಕಲ್ಪಿಸಬೇಕು.ಎಲ್ಲರಿಗೂ ಲೇಸನ್ ಅಧಿಕಾರಿಗಳನ್ನು ನೇಮಿಸಬೇಕು. ಜವಾಬ್ದಾರಿಗಳನ್ನು ವಿಕೇಂದ್ರೀಕರಣಗೊಳಿಸಿ ಕಾರ್ಯ ಹಂಚಿಕೆ ಮಾಡಬೇಕು. ಅಧಿವೇಶನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿದೆ,ಕೊರೊನಾ ಕಾರಣದಿಂದ ಈ ಬಾರಿ ಮಕ್ಕಳಿಗೆ ಅವಕಾಶವಿಲ್ಲ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಅಧಿವೇಶನವನ್ನು ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಆಯೋಜಿಸಬೇಕು. ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಎಲ್ಲಾ ಸದಸ್ಯರಿಗೆ ಬೆಳಗಾವಿಯಲ್ಲಿಯೇ ವಸತಿ ಸೌಕರ್ಯ ಕಲ್ಪಿಸಿದರೆ ಸದನಕ್ಕೆ ಅವರು ಸಕಾಲದಲ್ಲಿ ಹಾಜರಾಗಲು ಅನುಕೂಲವಾಗುತ್ತದೆ ಎಂದರು.

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿ, ವಿಧಾನಮಂಡಲ ಅಧಿವೇಶನ ಅಚ್ಚುಕಟ್ಟಾಗಿ ಆಯೋಜಿಸಬೇಕು. ಅಧಿವೇಶನ ಸಮಯದಲ್ಲಿ ತಾಲೂಕು ಮಟ್ಟದಲ್ಲಿ ಗ್ರೇಡ್ 2 ತಹಸೀಲ್ದಾರರು,ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು,ಪುರಸಭೆ,ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು ತಮ್ಮ ಕೇಂದ್ರ ಸ್ಥಾನಗಳಲ್ಲಿಯೇ ಇದ್ದು ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರ ಶಂಕರಗೌಡ ಪಾಟೀಲ ಮಾತನಾಡಿ,ಸುರ್ವರ್ಣಸೌಧ ನಿರ್ವಹಣೆ ಕಾರ್ಯವನ್ನು ಕಳೆದ ಒಂದು ತಿಂಗಳಿನಿಂದ ನಿರ್ವಹಿಸಲಾಗುತ್ತಿದೆ.ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿವಿಧ 23 ಕಚೇರಿಗಳನ್ನು ಕೆಳಮಹಡಿಗೆ ಸ್ಥಳಾಂತರಿಸಲಾಗಿದೆ.ಆವರಣದಲ್ಲಿ ವಾಹನ ನಿಲುಗಡೆಗೆ ನೆಲ ಸಮತಟ್ಟುಗೊಳಿಸಲಾಗುತ್ತಿದೆ.ಇಂಟರ್‌ನೆಟ್ ,ವೆಬ್ ಕಾಸ್ಟಿಂಗ್ ಮಾಡಲು ಏರ್ಪಾಡುಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಅಧಿವೇಶನದ ವಿಶೇಷಾಧಿಕಾರಿ ಡಾ.ಸುರೇಶ ಇಟ್ನಾಳ ಮಾತನಾಡಿ, 2018 ರ ದರದಲ್ಲಿಯೇ ಹೋಟೆಲ್ ರೂಮುಗಳನ್ನು ಒದಗಿಸಲು ಈಗಾಗಲೇ ತಿಳಿಸಲಾಗಿದೆ.ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ,ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ,ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್ ,ಅಧಿವೇಶನ ವಿಶೇಷಾಧಿಕಾರಿ ಡಾ.ಸುರೇಶ ಇಟ್ನಾಳ ಸೇರಿದಂತೆ ಇಲಾಖೆ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here