ಕೊಟ್ಟೂರು :ಅ:0೨:- ಚುನಾವಣಾ ಸುಧಾರಣೆಗಳ ಬಗ್ಗೆ ಮತ್ತು ಮತದಾರರ ಗುರುತಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಮತ್ತು ದೃಢೀಕರಿಸಲು ಸ್ವಯಂಪ್ರೇರಿತವಾಗಿ ಮತದಾರರಿಂದ ಆಧಾರ್ ದತ್ತಾಂಶವನ್ನು ಸಂಗ್ರಹಣೆ ಮಾಡುವ ಕಾರ್ಯವನ್ನು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಟ್ಟೂರು ಪಟ್ಟಣದ ಮತಗಟ್ಟೆ ಸಂಖ್ಯೆ-245 ರಲ್ಲಿ ತಹಶೀಲ್ದಾರರು, ಚುನಾವಣೆ ಸಿಬ್ಬಂದಿ ಡಿ ಶಿವಕುಮಾರ್, ಸ್ವೀಪ್ ಇಎಲ್ ಸಿ ಆದ ಶಶಿಧರ ಮೈದೂರು, ಬಿ.ಎಲ್.ಒ. ಮಂಜುನಾಥ. ಬಿ.ಪಿ. ಹಾಲಸ್ವಾಮಿ ಕಂದಾಯ ನಿರೀಕ್ಷಕರು ಇವರು ಮತದಾರರಾದ ಮೈದೂರು ರಾಜೀವ್ ಹಾಗೂ ಕೊಟ್ರೇಶಪ್ಪ ಇವರ ಮತದಾರರ ಗುರುತಿನ ಚೀಟಿಗೆ ಅವರ ಆಧಾರ್ ಸಂಖ್ಯೆ ಜೋಡಣೆಯನ್ನು “ಸ್ವಯಂಪ್ರೇರಿತವಾಗಿ” ಸಂಗ್ರಹಣೆ ಮಾಡಿ ಆನ್ ಲೈನ್ ಲಿಂಕ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮ 01.08.2022 ರಿಂದ ದೇಶಾದ್ಯಂತ ಚಾಲನೆಯಾಗಿದ್ದು, ಮತದಾರರು ಸ್ವಯಂ ಪ್ರೇರಿತರಾಗಿ ತಮಗೆ ಸಂಬಂಧಿಸಿದ ಮತಗಟ್ಟೆಯ ಬಿಎಲ್ಒ ಗಳಿಗೆ ತಮ್ಮ ಮತದಾರರ ಗುರುತಿನ ಚೀಟಿ, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯಕ್ಕೆ ಸಹಕಾರ ನೀಡಲು ಹಾಗೂ ಮತದಾರರು ಸ್ವಯಂ ಆಗಿ ಓಟರ್ ಹೆಲ್ಪ್ ಲೈನ್ ಮತ್ತು ಎನ್.ವಿ.ಎಸ್.ಪಿ ತಂತ್ರಾಂಶದಲ್ಲಿ ಜೋಡಣೆ ಮಾಡಲು ಅವಕಾಶ ಇದ್ದು, ಕೊಟ್ಟೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮತದಾರರು ಸದರಿ ಕಾರ್ಯದ ಸದುಪಯೋಗಪಡಿಸಿಕೊಳ್ಳುವಂತೆ ತಹಶೀಲ್ದಾರರಾದ ಕುಮಾರಸ್ವಾಮಿ ತಿಳಿಸಿದರು.
ವರದಿ: ಶಿವರಾಜ್ ಕನ್ನಡಿಗ