ಕೊಟ್ಟೂರು ತಾಲ್ಲೂಕಿನ ಕೊಟ್ಟೂರಿನಲ್ಲಿ ಸೋಮವಾರ ನಡೆದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವದಲ್ಲಿ ಸಾವಿರಾರು ಭಕ್ತರು ಭಕ್ತಿ-ಶ್ರದ್ಧೆಯಿಂದ ಪಾಲ್ಗೊಂಡರು.
ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶವೆಲ್ಲವೂ ರಾತ್ರಿ ಲಕ್ಷ ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿತ್ತು. ಭಕ್ತರು ಜಯಘೋಷ ಮಾಡುತ್ತಾ ಮಣ್ಣಿನ ಪ್ರಣತಿಗಳಲ್ಲಿ ಎಣ್ಣೆ ಬತ್ತಿಯ ದೀಪ ಬೆಳಗಿ ಇಷ್ಟದೇವರಿಗೆ ಕೈಮುಗಿದರು. ನಂತರ ಚೌಕಾಕಾರದ ತೊಟ್ಟಿಯಲ್ಲಿ ಕೊಬ್ಬರಿ ಹಾಕಿ ಸುಟ್ಟು ಹರಕೆ ತೀರಿಸಿದರು. ಸೂರ್ಯಾಸ್ತವಾದ ಬಳಿಕ ಕ್ರಿಯಾಮೂರ್ತಿಗಳಾದ ಶಂಕರಸ್ವಾಮಿ ಚಾಲನೆ ನೀಡಿದರು. ಮತ್ತು ಕೊಟ್ಟೂರು ದೇವರು ಆರ್. ಎಂ. ಪ್ರಕಾಶ್ ಅವರು ಚಾಲನೆ ನೀಡಿದರು.
ಭಕ್ತಸಾಗರ : ಜಿಲ್ಲೆಯವರಷ್ಟೇ ಅಲ್ಲದೆ, ದಾವಣಗೆರೆ, ಗದಗ, ಮತ್ತು ಚಿತ್ರದುರ್ಗ ಜಿಲ್ಲೆಯ ಪಟ್ಟಣ ಹಾಗೂ ಹಳ್ಳಿಗಳಿಂದ ಬೆಳಿಗ್ಗೆಯಿಂದಲೇ ಸಾಗರದ ರೀತಿ ಭಕ್ತರು ಕೊಟ್ಟೂರಿಗೆ ಬಂದು ನೆರೆಯುತ್ತಿದ್ದರು. ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದು ಹಣ್ಣು -ಕಾಯಿ ಆರ್ಶೀವಾದ ಪಡೆದರು. ಕಾರ್ತಿಕದ ಸಡಗರ ಪಟ್ಟಣದ ಎಲ್ಲ ಬೀದಿಗಳಲ್ಲಿ ಮನೆ ಮಾಡಿತ್ತು.
ಪಾದಯಾತ್ರೆ : ದೂರದ ಪಟ್ಟಣದಿಂದ ನೂರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆ ಮೂಲಕ ಬಂದಿದ್ದರು. ಹಲವರು ಮುಂಜಾನೆಯೇ ಮೂರ್ಕಲ್ ಮಠದಿಂದ ಹಿರೇಮಠದವರೆಗೆ ದೀಡು ನಮಸ್ಕಾರ ಹಾಕಿಕೊಂಡ ಬಂದು ಭಕ್ತಿ ಸಮರ್ಪಿಸಿದರು. ಉತ್ಸವದ ಪ್ರಯುಕ್ತ ತೊಟ್ಟಿಲುಮಠ ಮತ್ತು ಗಚ್ಚಿನಮಠದಲ್ಲೂ ಹೆಚ್ಚು ಭಕ್ತರು ನೆರೆದಿದ್ದರು.
ಕೊಟ್ಟೂರೇಶ್ವರ ಮಾಲೆ ಧರಿಸಿದ್ದ ಸ್ಥಳೀಯ ಹಾಗೂ ವಿವಿಧ ಪ್ರದೇಶಗಳ ಭಕ್ತರು ಶುಭ್ರ ಬಿಳಿ ವಸ್ತ್ರ ತೊಟ್ಟು ಗುಂಪಾಗಿ ಬಂದು ದರ್ಶನ ಪಡೆದರು. ನಮ್ಮ ಪೊಲೀಸ್ ಸಿಬ್ಬಂದಿಗಳು ಬಿಗಿ ಬಂದಬಸ್ತು ಮಾಡಲಾಯಿತು.
ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ದೇವಸ್ಥಾನದ ಕಾರ್ಯನಿರ್ವಹಕಧಿಕಾರಿ, ದೇವಸ್ಥಾನದ ಸಿಬ್ಬಂದಿಗಳು ಹಾಗೂ ಊರಿನ ಮುಖಂಡರು, ಕಟ್ಟಿಮನಿ ದೈವಸ್ಥರು, ಭಕ್ತರು ಪಾಲ್ಗೊಂಡಿದ್ದರು.
ವರದಿ: ಶಿವರಾಜ್ ಕನ್ನಡಿಗ