ಬಳ್ಳಾರಿ,ಜು.06:ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸುತ್ತಲಿನ ಸಾಕು ಪ್ರಾಣಿಗಳು ಮತ್ತು ಕಾಡು ಪ್ರಾಣಿಗಳ ಕಡಿತ ಮತ್ತು ಅವುಗಳಿಂದ ಉಂಟಾಗುವ ಕಾಯಿಲೆಗಳ ಕುರಿತು ಮುಂಜಾಗೃತೆ ವಹಿಸುವ ಮೂಲಕ ಮನುಷ್ಯರ ಜೀವನ್ನು ಕಾಪಾಡುವ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಪಶು ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರಾಣಿಜನ್ಯ ದಿನಾಚರಣೆ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವ ಪ್ರಾಣಿಜನ್ಯ ರೋಗಗಳ ನಿಯಂತ್ರಣ ದಿನವನ್ನಾಗಿ ಜುಲೈ 06 ರಂದು ಆಚರಿಸಲಾಗುತ್ತದೆ. ಪ್ರಾಣಿಗಳ ಕಚ್ಚುವಿಕೆ ಮತ್ತು ಕೆಲವೊಮ್ಮೆ ರೋಗ ಹೊಂದಿದ ಪ್ರಾಣಿಗಳು ನಮ್ಮ ದೇಹದ ಮೇಲಿನ ಗಾಯವನ್ನು ನೆಕ್ಕಿದರೂ ರೋಗ ಹರಡುವ ಸಾಧ್ಯತೆ ಇದ್ದು, ಅವುಗಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ನಾಯಿಗಳ, ಬೆಕ್ಕುಗಳ, ಮಂಗಗಳ ಕಚ್ಚುವಿಕೆಯಿಂದ ಬರುವ ಕಾಯಿಲೆಗಳಾದ ರೇಬಿಸ್, ಮಂಗನಕಾಯಿಲೆ ಸೇರಿದಂತೆ ಪ್ರಾಣಿ ಮತ್ತು ಪಕ್ಷಿಗಳಿಂದ ಅವುಗಳ ವೈರಸ್ಗಳಿಂದ ಕೋವಿಡ್, ಆಂಥ್ರಾಕ್ಸ್, ಪಕ್ಷಿಜ್ವರ, ಬ್ರುಸೇಲ್ಲಾಸಿಸ್, ಇಲಿಜ್ವರ, ಡೆಂಗ್ಯು, ಎಬೋಲಾ, ಪ್ಲೇಗು, ಹಂದಿಜ್ವರ ಮುಂತಾದವುಗಳ ನಿಯಂತ್ರಣ ಮಾಡುವುದರ ಜೊತೆಗೆ ವೈದ್ಯರು ಸಕಾಲದಲ್ಲಿ ಚಿಕಿತ್ಸೆಯನ್ನು ನೀಡಲು ಹಾಗೂ ಜಾಗೃತಿಯನ್ನು ಕೈಗೊಳ್ಳಲು ಪ್ರತಿಯೊಬ್ಬರೂ ಜವಾಬ್ದಾರಿಯನ್ನು ನಿರ್ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವಿರೇಂದ್ರಕುಮಾರ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಮೋಹನಕುಮಾರಿ, ಡಾ.ಈರಣ್ಣ, ಡಾ.ರಾಧಿಕಾ, ಜಿಲ್ಲಾ ಆಸ್ಪತ್ರೆಯ ತಜ್ಞವೈದ್ಯರಾದ ಡಾ.ಮಲ್ಲಿಕಾರ್ಜುನ, ಡಾ.ಯೋಗಾನಂದರೆಡ್ಡಿ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಜಶೇಖರ, ತಾ.ಪಂನ ಸಹಾಯಕ ನಿರ್ದೇಶಕ ಮಹಮ್ಮದ್ ಗೌಸ್, ಮಹಾನಗರ ಪಾಲಿಕೆಯ ಪರಿಸರ ಅಭಿಯಂತರರಾದ ಶಿವರಾಮರೆಡ್ಡಿ, ಹರ್ಷವರ್ಧನ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಎಪಡಮಾಲಜಿಸ್ಟ್ ಡಾ.ಪ್ರಿಯಾಂಕ್, ಎನ್.ಸಿ.ಡಿ ಜಿಲ್ಲಾ ಸಂಯೋಜಕರಾದ ಡಾ.ಜಬೀನ್ ತಾಜ್, ಮೈಕ್ರೋಬಯಾಜಿಸ್ಟ್ ಶರತ್ಕುಮಾರ ಹಾಗೂ ಗೊವಿಂದಪ್ಪ, ಶಿವಕುಮಾರ, ಅಕ್ತರಪಾಶಾ, ರಾಘವೇಂದ್ರ, ತಿಪ್ಪೆಸ್ವಾಮಿ, ಮಹಮ್ಮದ್ ಖಾಸಿಂ, ಅಂಬಾದಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಮಾರಣಾಂತಿಕ ಕಾಯಿಲೆಗಳಿಂದ ಮಾನವರನ್ನು ರಕ್ಷಿಸೋಣ ಎಂಬ ದ್ಯೇಯವಾಕ್ಯದೊಂದಿಗೆ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು ಹಾಗೂ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.