ಮಹರ್ಷಿ ವಾಲ್ಮೀಕಿ ಜಾತ್ರೆ-2021 ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು: ಡಾ.ಮಲ್ಲಿಕಾ ಘಂಟಿ

0
138

ದಾವಣಗೆರೆ ಫೆ.08: ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು. ಮಹಿಳೆಯರು ಮಹಿಳೆಯರಿಗಾಗಿ ಶಾಸನ ಮಾಡುವಂತಿರಬೇಕು. ಇಲ್ಲದಿದ್ದರೆ ಮತ್ತದೇ ಅತಂತ್ರ ಬದುಕು ಮಹಿಳೆಗೆ ಅನಿವಾರ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ.ಮಲ್ಲಿಕಾ ಎಸ್.ಘಂಟಿ ಅಭಿಪ್ರಾಯ ಪಟ್ಟರು.

ಮಹರ್ಷಿ ವಾಲ್ಮೀಕಿ ಜಾತ್ರೆ 2021 ದ ಅಂಗವಾಗಿ ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಮಾತೆ ಶಬರಿ ಮಹಿಳಾ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಯಾವುದೇ ಸ್ಥಾನದಲ್ಲಿದ್ದರೂ ತನ್ನದೇ ಸಮುದಾಯದ ಗಂಡಿನ ಅಹಂಕಾರ, ದಬ್ಬಾಳಿಕೆಗೆ ಒಳಗಾಗುತ್ತಿದ್ದಾಳೆ. ಆ ಪುರುಷ ವೈದಿಕದಿಂದ ಕಲಿತ ದಬ್ಬಾಳಿಕೆಯನ್ನು ಮಹಿಳೆ ಮೇಲೆ ತೋರುತ್ತಿದ್ದು, ಮಹಿಳೆ ಈ ಎರಡೂ ಬೀಗಗಳನ್ನು ಒಡೆಯಬೇಕಿದೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು. ಸಾವಿತ್ರಿಬಾ ಫುಲೆಯವರು ಅಂದೇ ವೈದಿಕ ಶಾಲೆಯು ಮಹಿಳೆರ ಮೇಲೆ ಶೋಷಣೆ ಮಾಡುತ್ತಿದೆ, ಇದರಿಂದ ತಪ್ಪಿಸಿಕೊಳ್ಳಲು ಶಿಕ್ಷಣ ಅತ್ಯಗತ್ಯ ಎಂದು ತಿಳಿದು ತಾವೂ ಕಲಿಯುತ್ತಾ ಮಹಿಳೆಯರಿಗೆ ಶಾಲೆ ತೆರೆದರು ಎಂದರು.
ಮಹಿಳೆಗೆ ಶಿಕ್ಷಣ ಮತ್ತು ಶಾಸನ ಸಭೆಗಳಲ್ಲಿ ಮೀಸಲಾತಿ ನೀಡುವ ಮೂಲಕ ಅವರನ್ನು ಅತಂತ್ರ ಸ್ಥಿತಿಯಿಂದ ಹೊರತರಬಹುದಾಗಿದ್ದು, ಶಾಸನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವಂತೆ ಮನವಿ ಮಾಡಿದರು.
ಜಾತ್ರೆಯಲ್ಲಿ ಅಕ್ಷರ ಹಂಚಿಕೆ: ಮೊದಲೆಲ್ಲ ಜಾತ್ರೆಗಳಲ್ಲಿ ಮೂಢನಂಬಿಕೆಯ ಹಂಚಲಾಗುತ್ತಿದ್ದರೆ, ಇಂದು ಜ್ಞಾನದ ಹಂಚಿಕೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಉತ್ತಮ ಪುಸ್ತಕಗಳು ಮಾರಾಟವಾಗುತ್ತಿವೆ. ಜ್ಞಾನಿಗಳ ಮಾತುಗಳನ್ನು ಕೇಳಿಸಲಾಗುತ್ತಿದೆ.
ಜ್ಯೋತಿ ಬಾಫುಲೆಯವರು ಆ ಕಾಲದಲ್ಲಿಯೇ ತಳ ಸಮುದಾಯವನ್ನು ಮೇಲೆ ತರುವ ವಸ್ತುವನ್ನು ಇಟ್ಟುಕೊಂಡು ನಾಟಕ ರಚಿಸುವ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದರು. ಮೂರ್ತಿ ಪೂಜೆಗಿಂತ ಜ್ಞಾನ ಪೂಜೆ ದೊಡ್ಡದು, ದೇವಾಲಯಗಳಿಂತ ಶಾಲೆ ನಿರ್ಮಿಸುವುದು ಶ್ರೇಷ್ಟ ಎಂದು ತಿಳಿಸಿದ್ದರು.

1990 ರ ದಶಕವನ್ನು ತಳ ಸಮುದಾಯದ ಜಾಗೃತ ಕಾಲಘಟ್ಟವೆನ್ನಬಹುದು. ಅಲ್ಲಿಯವರೆಗೆ ತಳ ಸಮುದಾಯಗಳು ತಮ್ಮ ಸಾಮಾಜಿಕ, ಸಾಂಸ್ಕøತಿಕ ಮತ್ತು ಧಾರ್ಮಿಕ ಚಿಂತನೆಗಳನ್ನು ಚರ್ಚಿಸಲು ಒಂದು ವೇದಿಕೆ ಬೇಕು. ತಮ್ಮದೇ ಗುರು ಬೇಕು ಎಂಬ ಜ್ಞಾನ ಇರಲಿಲ್ಲ. 90 ರ ದಶಕದ ನಂತರ ಅನೇಕ ತಳ ಸಮುದಾಯಗಳು ತಮ್ಮ ಧಾರ್ಮಿಕ ಪೀಠ ಸ್ಥಾಪಿಸುವ ಮೂಲಕ ಅಸ್ತಿತ್ವ ಕಂಡುಕೊಂಡವು. ಜಾತಿ ಮತ್ತು ವೃತ್ತಿಯಲ್ಲಿ ಬಲಿಷ್ಟರಾದರೂ ಸಾಂಸ್ಕøತಿಕವಾಗಿ, ಧಾರ್ಮಿಕರಾಗಿ ದುರ್ಬಲರಾದೆವು, ಕಾರಣ ವಾಲ್ಮೀಕಿ, ಬಸವಣ್ಣ ಮತ್ತು ಡಾ.ಅಂಬೇಡ್ಕರ್‍ರಂತಹ ಚೈತನ್ಯಗಳ ವಿಚಾರಧಾರೆ ಮೂಲಕ ಮುಂದೆ ಬರಲು ಸಾಧ್ಯವಾಗದಿದ್ದುದು. ಇಂದು ಧಾರ್ಮಿಕ ಗುರುಗಳನ್ನು ಹೊಂದಿ, ಇಂತಹ ಜಾತ್ರೆ ಮೂಲಕ ತಳ ಸಮುದಾಯದ ವಿಚಾರಧಾರೆಗಳನ್ನು ಚರ್ಚೆ ಮಾಡುತ್ತಾ, ವೇದಿಕೆ ಸೃಷ್ಟಿಸಿಕೊಂಡಿದ್ದೇವೆ. ನಮ್ಮ ಬುದ್ದಿ ನಮ್ಮ ತಲೆಯಲ್ಲಿದೆ ಎಂಬುದನ್ನು ಸಂವಿಧಾನ ಪೂರ್ವದಲ್ಲೇ ಅಕ್ಷರ ಬಾಗಿಲು ತೆರೆದು ಸಾವಿತ್ರಿ ಬಾಫುಲೆ, ಜ್ಯೋತಿ ಬಾಫುಲೆ ತೋರಿಸಿಕೊಟ್ಟಿದ್ದಾರೆ. ಶತಮಾನಗಳ ಕಾಲ ಅಕ್ಷರ ಗುತ್ತಿಗೆ ಹಿಡಿದ ಹುನ್ನಾರವನ್ನು ಚರಿತ್ರೆ ಮೂಲಕ ಸ್ಪಷ್ಟವಾಗಿದ್ದು ಇಂದು ನಾವು ನಮ್ಮತನ, ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅಕ್ಷರದ ಮೂಲಕ ಅರಿತು, ನಡೆಯುತ್ತಿದ್ದೇವೆ. ಇಡೀ ಚರಿತ್ರೆಯಲ್ಲಿ ಮುಂದೆ ಬರಬೇಕೆಂಬ ಹೆಣ್ಣಿನ ಹಂಬಲವನ್ನು ತಡೆಗೋಡೆ ನಿರ್ಮಿಸುವ ಮೂಲಕ ಅಡ್ಡಿಪಡಿಸುತ್ತಿದ್ದು ಅದನ್ನು ದೂಡುವ ಶಕ್ತಿ ಬೆಳೆಸಿಕೊಂಡು ಗೋಡೆಯನ್ನು ಒಡೆಯಬೇಕಿದೆ.
ಇಂದಿಗೂ ನಮ್ಮ ಪಾಡು ಸೀತೆಗಿಂತ ಭಿನ್ನವಾಗಿಲ್ಲ. ಇಂದಿಗೂ ಮಹಿಳೆಯನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡುವ ಸಂಸ್ಕøತಿ ನಮ್ಮಲ್ಲಿದ್ದು ಕಳೆದು ಹೋಗುವ ಅಪಾಯವಿದೆ. ಆದ ಕಾರಣ ಅವಕಾಶ ಸಿಕ್ಕಾಗೆಲ್ಲ ನಾವು ಮನದಾಳದ ಮಾತನ್ನು ಆಡಬೇಕು. ಅಕ್ಷರಸ್ಥರ ಸಂಖ್ಯೆ ಹೆಚ್ಚಬೇಕು ಎಂದರು.

ವಾಲ್ಮೀಕಿ ಬಗ್ಗೆ ಅವೈಜ್ಞಾನಿಕ ಬೋಧನೆ ಸಲ್ಲದು:

ವಾಲ್ಮೀಕಿ ಹೇಗಾದ ಎಂಬ ಬಗ್ಗೆ ಪಠ್ಯದ ಮೂಲಕ ಅವೈಜ್ಞಾನಿಕವಾಗಿ ಬೋಧನೆ ಮಾಡುತ್ತಿದೇವೆ. ಅದನ್ನು ನಿಲ್ಲಿಸಬೇಕಿದೆ. ಅವರಲ್ಲಿ ಅಗಾಧವಾದ ಪಾಂಡಿತ್ಯ ಮತ್ತು ಸೂಕ್ಷ್ಮತೆಗಳಿದ್ದವು. ವೈದಿಕ ರಾಮಾಯಣದ ಬದಲಿಗೆ ವಾಲ್ಮೀಕಿ ರಾಮಾಯಣ ಹೇಳಬೇಕಿದೆ. ಸಕುಟುಂಬದಿಂದ ಕೂಡಿದ ರಾಮಾಯಣ ಇದಾಗಿದೆ. ವಾಲ್ಮೀಕಿ ಕಳ್ಳ, ಕುಡುಕ ಆಗಿದ್ದ ಎಂದೆಲ್ಲ ಅಪಮಾನ ಮಾಡುವದನ್ನು ವಿರೋಧಿಸುತ್ತೇನೆ. ವಾಲ್ಮೀಕಿ ಶ್ರೇಷ್ರು ಹಾಗೆಯೇ, ವಾಲ್ಮೀಕಿ, ವ್ಯಾಸರು, ಕನಕದಾಸರು ನಾಯಕರಾಗಿದ್ದರು.

12 ನೇ ಶತಮಾನದಲ್ಲಿ ಎಲ್ಲ ಜಾತಿ ಕುಲದವರನ್ನು ಸಮಾನರನ್ನಾಗಿ ಕಾಣುವ, ಹೆಣ್ಣು ಮಕ್ಕಳಿಗೆ ಸಮಾನತೆ ನೀಡುವ ಅವಕಾಶವನ್ನು ಬಸವಾದಿ ಶರಣರು ಕಲ್ಪಿಸಿಕೊಟ್ಟಿದ್ದು, ಇಂದು ನಮ್ಮ ಗುರುಗಳು ಸಹ ನಮಗೆ ಈ ವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟಿರುವುದು ಅನುಭವ ಮಂಟಪವನ್ನು ನೆನಪಿಸುತ್ತಿದೆ. ಇದೂ ಕೂಡ ಬಸವ ಪರಂಪರೆಯಿಂದ ಬಂದಿದ್ದಾಗಿದ್ದು, ಅಂದೂ ಕೂಡ ಸಾಮಾಜಿಕ ಚಳವಳಿಯಲ್ಲಿ ಮಹಿಳೆಯರ ಪಾಲು ಅರ್ಧ ಇದ್ದರೆ, ಇಲ್ಲಿಯೂ ಅರ್ಧ ಮಹಿಳೆಯರಿದ್ದಾರೆ. ಆದ ಕಾರಣ ಶಾಸನ ಸಭೆಯಲ್ಲಿಯೂ ಮಹಿಳೆಯರಿಗೆ ಅವಕಾಶ ನೀಡಬೇಕೆಂದರು.
ಕರ್ನಾಟಕ ಸರ್ಕಾರದ ಗೃಹ ಕಾರ್ಯದರ್ಶಿಗಳಾದ ಮಾಲಿನಿ ಕೃಷ್ಣಮೂರ್ತಿ ಮಾತನಾಡಿ, ಮಹಿಳೆಯರಿಗೆ ಬೇಕಿರುವುದು ವಿದ್ಯೆ. ವಿದ್ಯಾಭ್ಯಾಸದಿಂದ ಮಹಿಳೆ ಆರ್ಥಿಕವಾಗಿ ಸ್ವಾವಲಂಬನೆಯೊಂದಿಗೆ ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ.
ತ್ರಿಮೂರ್ತಿ ಬ್ರಹ್ಮ ವಿಷ್ಣು ಮಹೇಶ್ವರನಿಗೆ ಸರಿಸಮನಾಗಿ ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿ ತತ್ವಗಳಿದ್ದದ್ದರಿಂದಲೇ ಸಮತೋಲನ ಸಾಧ್ಯವಾಯಿತು. ಹೆಣ್ಣು ಶಿಕ್ಷಿತಳಾಗುವುದು ಸರಸ್ವತಿ ತತ್ವವಾದರೆ ಆರ್ಥಿಕವಾಗಿ ಸ್ವಾವಲಂಬನೆ ಹೊಂದುವುದು ಲಕ್ಷ್ಮಿ ತತ್ವ. ಅವೆರಡನ್ನೂ ಸರಿದೂಗಿಸಿಕೊಂಡು ಕೌಟುಂಬಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿ ಕಾಣುವುದು ಪಾರ್ವತಿ ತತ್ವವಾಗಿದ್ದು, ಇವೆಲ್ಲ ನಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು.
ಒಂದು ಹೆಣ್ಣು ಕಲಿತರೆ ಇಡೀ ಕುಟುಂಬ ಕಲಿಯುತ್ತದೆ. ಅದೇ ರೀತಿ ನಾವು ನಮ್ಮ ಮನೆ ಗಂಡು ಮಕ್ಕಳಿಗೆ ಹೆಣ್ಣನ್ನು ಗೌರವಿಸುವಂತಹ ಸಂಸ್ಕಾರ, ಶಿಕ್ಷಣ ನೀಡಬೇಕೆಂದರು.

ಖ್ಯಾತ ಚಲನಚಿತ್ರ ನಟಿ ಹಾಗೂ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶೃತಿ ಮಾತನಾಡಿ, ಮುಂದೆ ಗುರಿ ಮತ್ತು ಹಿಂದೆ ಗುರು ಇದ್ದರೆ ಆತನನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ಮಹಿಳಾ ಸಮಾವೇಶಕ್ಕೆ ಗುರುಗಳು ಅನುವು ಮಾಡಿಕೊಟ್ಟಿರುವುದು ಅಂಬೇಡ್ಕರ್ ಹೇಳಿದ ಸಮಾನತೆಯ ಸಮತೋಲನದಂತಿದೆ.
ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕನಂತಹ ದಿಟ್ಟ ಮಹಿಳೆಯರಿಗೆ ಬೇರೆ ರೀತಿಯ ವೈರಿಗಳಿದ್ದು ಅವರು ಖಡ್ಗ ಹಿಡಿದು ಹೋರಾಡಿದರೆ ಇಂದಿನ ಪರಿಸ್ಥಿತಿಯಲ್ಲಿ ವೈರಿಗಳ ಸ್ವರೂಪ ಬೇರೆ ಇದ್ದು ಇದರ ವಿರುದ್ದ ಹೋರಾಟಡಲು ಶಿಕ್ಷಣ ಎಂಬ ಪರಿಣಾಮಕಾರಿ ಅಸ್ತ್ರ ಬೇಕಿದೆ. ಭಾರತೀಯರಾದ ನಾವು ಪುಣ್ಯವಂತರು. ಹೆಣ್ಣನ್ನು ದೇವಿ ರೂಪದಲ್ಲಿ ನೋಡಲಾಗುತ್ತದೆ ಎಂದ ಅವರು ಶಿಕ್ಷಣ ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢಗೊಳಿಸುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ಜಾಗೃತಿ ಸಮಾವೇಶ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಕೆ.ಪಿ.ಟಿ.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕರಾದ ಡಾ.ಮಂಜುಳ ಅವರು ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣಿಗೆ ದಕ್ಕಬೇಕಾದ ಎಲ್ಲವೂ ಸಂವಿಧಾನದಲ್ಲಿದೆ. ವ್ಯವಸ್ಥೆಯಲ್ಲಿ ಎಲ್ಲಾ ಅನುಕೂಲವೂ ಇದೆ. ಸಾಧನೆ ಮಾಡುವಂತಹ ಅವಕಾಶ ಪ್ರತಿಯೊಬ್ಬರಿಗೂ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕಾದ ಹೊಣೆ ನಮ್ಮ ಮೇಲಿದೆ. ಪರಿಶ್ರಮ ಪಡದೇ ಯಾವ ಕೆಲಸವು ಪರಿಪೂರ್ಣವಾಗುವುದಿಲ್ಲ. ಯಶಸ್ಸು ಪಡೆಯಬೇಕಾದರೆ ಶ್ರಮ ಪಡಬೇಕು ಎಂದರು.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಗೋಮತಿದೇವಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ನಾವು ಸೀತೆಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕೆಂದು ರಾಮಾಯಣದ ಕಥೆಗಳನ್ನು ಉಲ್ಲೇಖಿಸಿದ ಅವರು ಭಾರತೀಯ ಸಮಾಜ ಲಿಂಗಬೇಧದ ಅಸಮಾನತೆಯಲ್ಲಿದ್ದಾಗ, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಿ, ಸತಿಸಹಗಮನ ಪದ್ಧತಿ ಅತೀ ಹೆಚ್ಚಾಗಿ ಇದ್ದಂತಹ ಕಾಲಘಟ್ಟದಲ್ಲಿ ಸಾವಿತ್ರಿಬಾಫುಲೆ ತನ್ನ ಪತಿ ಹಾಗೂ ತಂದೆಯಿಂದ ಪ್ರೇರಣೆ ಪಡೆದು ಅಕ್ಷರ ಕಲಿತು ಶಿಕ್ಷಕ ತರಬೇತಿ ಮುಗಿಸಿ, ಶೋಷಿತ ವರ್ಗದ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವಂತಹ ಸ್ಥೈರ್ಯ, ಮನೋಬಲ ಮೂಡಿಸಿದ್ದು ನಮಗೆಲ್ಲ ಮಾದರಿ ಎಂದರು.
ಗೋಕಾಕಿನ ಪ್ರಿಯಾಂಕ ಎಸ್ ಜಾರಕಿಹೊಳಿ ಮಾತನಾಡಿ, ಇಂದು ಹೆಣ್ಣು ಮುಖ್ಯವಾಹಿನಿಗೆ ಬಂದು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ. ಅವರ ಸಿದ್ದಾಂತಗಳನ್ನು ನಾವಿಂದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಕಲೆ ಇರುತ್ತದೆ. ಅದನ್ನು ಗುರುತಿಸಿ ಪೋಷಿಸಬೇಕಾದ ಹೊಣೆ ಪೋಷಕರು ಹಾಗೂ ಶಿಕ್ಷಕರಾಗಿರುತ್ತದೆ. ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಮುನ್ನೆಲೆಗೆ ತರುವಲ್ಲಿ ಪ್ರಯತ್ನಿಸಿ ಎಂದು ತಿಳಿಸಿದರು.
ಸೋಮವಾರ ಬೆಳಿಗ್ಗೆ ನಡೆದ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಮಾಜಿ ಸಭಾಪತಿಗಳಾದ ಕೆ.ಬಿ. ಕೋಳಿವಾಡ ಇವರು ಉದ್ಘಾಟಿಸಿದರು. ಹರಿಹರ ಶಾಸಕರಾದ ಎಸ್.ರಾಮಪ್ಪ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪುಷ್ಪ ಅರ್ಪಿಸಿದರು.
ಮಹರ್ಷಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಶಾಂತಲಾ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಕೇಂದ್ರ ಸರ್ಕಾರ ನೀಡಿರುವಂತೆ ರಾಜ್ಯ ಸರ್ಕಾರ ಕೂಡ ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿದರು.

ವೇದಿಕೆಯಲ್ಲಿ ಬೆಂಗಳೂರಿನ ಅಬಕಾರಿ ಅಧೀಕ್ಷಕ ಲಕ್ಷ್ಮೀ ಎಂ ನಾಯಕ, ಶಿವಮೊಗ್ಗದ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ತಾರಾ, ಜವಳಿ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಕಮಲಾ ಮರಿಸ್ವಾಮಿ, ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣಸ್ವಾಮಿ ಇತರೆ ಮಹಿಳಾ ಅಧಿಕಾರಿಗಳು, ಸಾಧಕಿಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here