ಧಾರವಾಡ:ಸೆ.17: ಜಿಲ್ಲೆಯಲ್ಲಿ ಇಂದು (ಸೆ.17) ಬೃಹತ್ ಕೋವಿಡ್-19 ಲಸಿಕಾ ಅಭಿಯಾನವನ್ನು 420 ಕ್ಕೂ ಹೆಚ್ಚು ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಮಧ್ಯಾಹ್ನ 12 ಗಂಟೆ ಹೊತ್ತಿಗೆ 21 ಸಾವಿರ ಕ್ಕಿಂತ ಹೆಚ್ಚು ಕೋವಿಡ್ ಲಸಿಕೆಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಜೆ.ಎಸ್.ಎಸ್.ಮಹಾವಿದ್ಯಾಲಯದಲ್ಲಿ ಇಂದು (ಸೆ.17) ಸ್ಥಾಪಿಸಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿದ ಅವರು, ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಲಸಿಕಾ ಕೇಂದ್ರಗಳಿಗೆ ಆಗಮಿಸಿದ್ದಾರೆ. 90 ಸಾವಿರ ಕ್ಕಿಂತ ಹೆಚ್ಚು ಡೋಸ್ಗಳನ್ನು ಈಗಾಗಲೇ ನೀಡಿದ್ದು ಹೆಚ್ಚುವರಿಯಾಗಿ ಇತರೆ ಜಿಲ್ಲೆಗಳಿಂದ ಕೋವಿಡ್ ಲಸಿಕೆಗಳನ್ನು ಪಡೆಯಲಾಗುತ್ತದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಲಸಿಕೆಯ ಕೊರತೆ ಕಂಡುಬಂದಿಲ್ಲ. ಈ ಹಿಂದೆ 200 ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುತ್ತಿತ್ತು ಈಗ 420 ಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ ಎಂದರು.
ಜೂನ್ 26 ಕ್ಕಿಂತ ಮೊದಲು ಕೋವಿಶೀಲ್ಡ್ ಪ್ರಥಮ ಡೋಸ್ ಪಡೆದವರು 2 ನೇಯ ಡೋಸ್ ಪಡೆಯಲು ಅರ್ಹರಾಗಿರುತ್ತಾರೆ. ಕೋವ್ಯಾಕ್ಸಿನ 28 ದಿನಗಳ ಹಿಂದೆ ಪಡೆದವರು ಮತ್ತು ಮೊದಲನೇಯ ಡೋಜ್ ಪಡೆಯುವವರು ಕರ್ನಾಟಕ ಸರ್ಕಾರದ ಈ ಲಸಿಕಾ ಮೇಳದಲ್ಲಿ ಪಾಲ್ಗೊಂಡು ಲಸಿಕೆಯನ್ನು ಪಡೆದು ಈ ಬೃಹತ್ ಕೋವಿಡ್ ಲಸಿಕಾಕರಣದ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ನೂರಾರು ಕೇಂದ್ರಗಳಲ್ಲಿ ಪ್ರತಿದಿನ 10 ರಿಂದ 20 ಸಾವಿರ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದ್ದು, ವಾರದಲ್ಲಿ ಒಮ್ಮೆ ಲಸಿಕಾ ಮೇಳ ಆಯೋಜಿಸಲಾಗುತ್ತದೆ. ಆರೋಗ್ಯ ಇಲಾಖೆಯ ಜೊತೆಗೆ ಎಲ್ಲ ಇಲಾಖೆಗಳು ಕೈಜೋಡಿಸಿ ಜಿಲ್ಲೆಯಲ್ಲಿ ಇಂದು ಬೃಹತ್ ಲಸಿಕಾಕರಣ ಮೇಳ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಇಂದು ದಾಖಲೆಯ ಮಟ್ಟದಲ್ಲಿ ಲಸಿಕಾಕರಣ ನಡೆಯುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದರು.
ಮಹಾನಗರ ಪಾಲಿಕೆ ವಲಯ ಆಯುಕ್ತ ಮನೋಜ, ಜೆ.ಎಸ್.ಎಸ್. ಸಂಸ್ಥೆಯ ಮಹಾವೀರ ಉಪಾಧ್ಯೆ, ರೋಟರಿ ಕ್ಲಬ್ ಸೆವೆನ್ ಹಿಲ್ಸ್ನ ಡಾ. ಪಲ್ಲವಿ ದೇಶಪಾಂಡೆ ಮತ್ತಿತರರು ಇದ್ದರು.