ರಸ್ತೆ,ರೈಲು,ವಾಯು ಮಾರ್ಗ-ಸಮಗ್ರ ಅಭಿವೃದ್ದಿ, ಶಿಕ್ಷಣದಿಂದ ಬದಲಾವಣೆ-ಕೈಗಾರಿಕೆಯಿಂದ ಅಭಿವೃದ್ದಿ ಸಾಧನೆ ಆಗಬೇಕು : ಎಂಪಿ.

0
86

ಶಿವಮೊಗ್ಗ, ಸೆಪ್ಟೆಂಬರ್ 21: ಶಿಕ್ಷಣದಿಂದ ಬದಲಾವಣೆ ಮತ್ತು ಕೈಗಾರಿಕಾರಿಯಿಂದ ಅಭಿವೃದ್ದಿಯನ್ನು ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಹೊಸ ಶಿಕ್ಷಣ ನೀತಿ ಮತ್ತು ಕೈಗಾರಿಕಾ ನೀತಿಗಳನ್ನು ಜಾರಿಗೆ ತಂದಿದ್ದು ಪರಿಣಾಮಕಾರಿ ಅನುಷ್ಟಾನಗೊಳಿಸಬೇಕಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕರ್ನಾಟಕ ಸರ್ಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ’ ಕಾರ್ಯಕ್ರಮದ ವಾಣಿಜ್ಯ ಸಪ್ತಾಹ ಅಂಗವಾಗಿ ಇಂದು ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ರಫ್ತುದಾರರ ಸಮಾವೇಶ ಮತ್ತು ರಫ್ತು ಅಭಿವೃದ್ದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಶಿಕ್ಷಣದ ಮೂಲಕ ಮಾತ್ರ ಉತ್ತಮ ಬದಲಾವಣೆ ಸಾಧ್ಯ ಎಂದು ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಅದರೊಂದಿಗೆ ಆರ್ಥಿಕ ಸಹಕಾರ ಮತ್ತು ಆರ್ಥಿಕ ಶಕ್ತಿಯನ್ನು ಯಾವ ರೀತಿ ಹೆಚ್ಚಿಸಬೇಕೆಂಬ ನಿಟ್ಟಿನಲ್ಲಿ ಚಿಂತನೆ ಮಾಡುತ್ತಿದೆ. ಜೊತೆಗೆ 2020-25 ರ ಕೈಗಾರಿಕಾ ನೀತಿಯನ್ನು ಜಾರಿಗೆ ತಂದಿದ್ದು, ಈ ನೀತಿಗಳನ್ನು ಅರಿತು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕಿದೆ ಎಂದರು.
ಕೊರೊನಾ ಸಂಕಷ್ಟದ ಸಮಯದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ದಿಗೆ ಕೊರತೆ ಆಗದಂತೆ ಎಲ್ಲರ ಸಹಕಾರದೊಂದಿಗೆ ಯೋಜನೆಗಳನ್ನು ಅನುಷ್ಟಾನಗೊಳಿಸಿದೆ. ರಸ್ತೆ, ರೈಲು ಮತ್ತು ವಾಯು ಮಾರ್ಗಕ್ಕೆ ಸಂಬಂಧಿಸಿದಂತ ಜಿಲ್ಲೆಯಲ್ಲಿ ಉತ್ತಮ ಅಭಿವೃದ್ದಿಯಾಗಿದೆ. ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಸಹಕಾರ ದೊರಕಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳು ಆಗುತ್ತಿದ್ದು ನಿಮ್ಮದೇನಾದರೂ ಸಲಹೆಗಳಿದ್ದರೆ ತಿಳಿಸಬಹುದು ಎಂದರು.
ಬೆಂಗಳೂರು-ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್ ಆಗಿದ್ದು, ಶಿವಮೊಗ್ಗವನ್ನು ಕಾರಿಡಾರ್ ವ್ಯಾಪ್ತಿಗೆ ಸೇರಿಸಿ ಮೂಲಭೂತ ಸೌರ್ಕರ್ಯ ವೃದ್ದಿ ಉದ್ದೇಶದಿಂದ ಸೇರ್ಪಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಫ್ತು ಮತ್ತು ಕೈಗಾರಿಕಾಭಿವೃದ್ದಿಗೆ ಅತಿ ಅವಶ್ಯವಾಗಿರುವ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲಿ 3200 ಮೀಟರ್ ಅತಿ ಉದ್ದನೆಯ ರನ್‍ವೇ ನಿರ್ಮಾಣ ಬರುವ ಏಪ್ರಿಲ್‍ನಲ್ಲಿ ಪೂರ್ಣಗೊಂಡು ಜೂನ್ ಹೊತ್ತಿಗೆ ಏರ್‍ಪೋರ್ಟ್ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ಇದ್ದು ಆ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ
ಉಡಾನ್ ಯೋಜನೆಯಡಿ ಶೇ.50 ಸಬ್ಸಿಡಿ ಯಡಿ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಮಂಗಳೂರು-ಶಿವಮೊಗ್ಗ, ದೆಹಲಿ-ಶಿವಮೊಗ್ಗ, ಮುಂಬೈ-ಶಿವಮೊಗ್ಗ ಸೇರಿದಂತೆ ಐದು ರೂಟ್‍ಗಳನ್ನು ನೀಡಲಾಗಿದೆ. ಜೊತೆಗೆ ಇತರೆ ಫ್ಲೈಟ್‍ಗಳಿಗೆ ಸಹ ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗದಲ್ಲಿ ವಿಶೇಷವಾಗಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಇದರ ನಂತರ ಕೈಗಾರಿಕೆಗೆ ನೀಡಲಾಗಿದೆ. ಕೈಗಾರಿಕಾ ಇತಿಹಾಸವನ್ನೇ ಹೊಂದಿರುವ ಶಿವಮೊಗ್ಗದಲ್ಲಿ ಬೃಹತ್, ಮಧ್ಯಮ ಮತ್ತು ಸಣ್ಣ ಕೈಗಾರಿಕಾ ಘಟಕಗಳು ಇದ್ದು ಜಿಲ್ಲೆಯಲ್ಲಿ ಒಟ್ಟಾರೆ 20,294 ಕೈಗಾರಿಕೆಗಳು ಘಟಕಗಳು 2646 ಕೋಟಿ ಬಂಡವಾಳ ಹೂಡಿಕೆ, ಒಂದು ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಕೆಲಸ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ. ಕೈಗಾರಿಕಾ ನೀತಿ ಮತ್ತು ನಿಯಮಗಳು ಕೈಗಾರಿಕೋದ್ಯಮಿಗಳಿಗೆ ಸುಲಭವಾಗಿರಬೇಕು. ಆರ್ಥಿಕ ನೆರವು ಮತ್ತು ಉತ್ತೇಜನದ ಬಗ್ಗೆಯೂ ಇಂದು ಚರ್ಚೆ ನಡೆಯಲಿದೆ.
ಕಾರ್ಖಾನೆಗಳ ಪುನರಾರಂಭಕ್ಕೆ ಪ್ರಯತ್ನ : ಸರ್ ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಂಪೆನಿ, ಎಂಪಿಎಂ ಪೇಪರ್ ಮಿಲ್‍ಗಳನ್ನು ಪುನರಾರಂಭಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಸಾಕಷ್ಟು ಸಭೆಗಳನ್ನು ನಡೆಸಿದ್ದು ನೀತಿ ಆಯೋಗ ಸಹ ವಿಶ್ವೇಶ್ವರಯ್ಯ ಕಬ್ಬಿಣ ಕಾರ್ಖಾನೆ ಪುನರಾರಂಭದ ಕುರಿತು ಧನಾತ್ಮಕ ಸೂಚನೆ ನೀಡಿದ್ದು. ಎಂಪಿಎಂ ಕಾರ್ಖಾನೆ ಪುನರಾರಂಭಕ್ಕೆ ಸಹ ಪ್ರಯತ್ನಿಸಲಾಗುತ್ತಿದೆ. 400 ರಿಂದ 500 ಕೋಟಿ ಅಡಮಾನ ಸಾಲದಿಂದ ಕಾರ್ಖಾನೆ ಹೊರಬರಲು ನಿಕಟಪೂರ್ವ ಮುಖ್ಯಮಂತ್ರಿಗಳು ಶ್ರಮಿಸಿದ್ದಾರೆ ಎಂದ ಅವರು ಹೀಗೆ ಮುಖ್ಯವಾದ ಕಾರ್ಖಾನೆಗಳು ಸಂಕಷ್ಟದಲ್ಲಿರುವ ಸಮಯದಲ್ಲಿ ಶಿವಮೊಗ್ಗದ ಶಾಹಿ ಕಂಪೆನಿಯವರು ಸುಮಾರು 18 ರಿಂದ 20 ಸಾವಿರ ಉದ್ಯೋಗಿಗಳಿಗೆ ಉದ್ಯೋಗ ನೀಡಿದ್ದಾರೆ. ಜಿಲ್ಲೆಯ ಕೈಗಾರಿಕೋದ್ಯಮಿಗಳು ಉತ್ತಮ ಸಾಧನೆ ತೋರಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಬೈಂದೂರಿನಲ್ಲಿ ಬಂದರು ನಿರ್ಮಾಣ : ಶಿವಮೊಗ್ಗದಿಂದ 80 ರಿಂದ 90 ಕಿ.ಮೀ ದೂರದಲ್ಲಿರುವ ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದು ಅಲ್ಲಿ ಬಂದರು ನಿರ್ಮಿಸಿ ದೇಶಾಂತರಗಳಿಂದ ರಫ್ತು ವಿಶೇಷ ಕ್ರೂಸ್‍ಗಳ ಓಡಾಡಕ್ಕೆ ಅವಕಾಶ ಮಾಡುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಮಂಗಳೂರು ಬಿಟ್ಟರೆ ಬೈಂದೂರಿನಲ್ಲಿ ಮಾತ್ರ ಈ ವ್ಯವಸ್ಥೆ ಇರಲಿದೆ.
ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಡಿ.ಎಸ್.ಅರುಣ್ ಮಾತನಾಡಿ, ಹಿಂದೆಲ್ಲ ಕೈಗಾರಿಕಾ ಕೇಂದ್ರಗಳು ಎಂದರೆ ಲಾಭ ಮಾಡಿಕೊಳ್ಳುವ ಸಂಸ್ಥೆಳೆಂದು ನೋಡಲಾಗುತ್ತಿತ್ತು. ಕೈಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರ ಯೋಜನೆಗಳನ್ನು ರೂಪಿಸಿದ್ದರೂ ಅದರ ಪರಿಣಾಮಕಾರಿ ಅನುಷ್ಟಾನದ ಕೊರತೆ ಹೆಚ್ಚಿತ್ತು.
ಕೈಗಾರಿಕೆಗಳಿಗೆ ಅತಿ ಮುಖ್ಯವಾಗಿ ಬೇಕಿರುವು ಆರ್ಥಿಕ ಸಹಕಾರ. ಸರ್ಕಾರ ಮತ್ತು ಹಣಕಾಸಿನ ಸಂಸ್ಥೆಗಳು ಇದನ್ನು ಒದಗಿಸಿದಲ್ಲಿ ಕೈಗಾರಿಕಾಭಿವೃದ್ದಿ ಅಕ್ಷರಶಃ ಸಾಧ್ಯವಾಗುತ್ತದೆ ಎಂದರು.
ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೈಗಾರಿಕೆಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಉತ್ತಮ ಯೋಜನೆಗಳು ಜಾರಿಗೆ ತಂದಿದ್ದು, ಅನುಷ್ಟಾನಕ್ಕೆ ಸಹ ಶ್ರಮಿಸುತ್ತಿದೆ. 2020-25 ರ ಕೈಗಾರಿಕಾ ನೀತಿ ಜಾರಿಗೊಳಿಸಿದೆ. ಆದರೆ ಯಾವುದೇ ನೀತಿ ಜಾರಿಗೆ ಮುನ್ನ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚಿಸುವುದು ಒಳಿತು ಎಂದು ಅಭಿಪ್ರಾಯಪಟ್ಟರು.
ನಗರದಲ್ಲಿ ಏರ್‍ಪೋರ್ಟ್ ಇಲ್ಲದ ಕಾರಣ ರಫ್ತಿಗೆ ಉತ್ತೇಜನ ಕಡಿಮೆ ಇತ್ತು. ಆದರೆ ನಮ್ಮ ಕ್ಷೇತ್ರದ ಸಂಸದರ ಕೃಪೆಯಿಂದ ಇನ್ನು 8 ರಿಂದ 10 ತಿಂಗಳಲ್ಲಿ ನಗರದಲ್ಲಿ ಏರ್‍ಪೋರ್ಟ್ ಕಾರ್ಯಾರಂಭಗೊಳ್ಳಿಲಿದ್ದು ಇದರಿಂದ ಕೈಗಾರಿಕಾಭಿವೃದ್ದಿ, ರಫ್ತು ಮತ್ತು ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಚುರುಕು ಪಡೆಯಲಿವೆ ಎಂದರು.
ಜಿಎಸ್‍ಟಿ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಎದುರಾಗಿದ್ದವು. ಜಿಎಸ್‍ಟಿ ಬಗ್ಗೆ ಅತಿ ಹೆಚ್ಚಿನ ಜಾಗೃತಿ ಮತ್ತು ಅರಿವು ಮೂಡಿಸುವಲ್ಲಿ ಜಿಲ್ಲೆಯ ಕೈಗಾರಿಕೋದ್ಯಮಿಗಳ ಪಾತ್ರ ಇದೆ. ಜಿಎಸ್‍ಟಿ ಅನುಷ್ಟಾನ, ಸಮಸ್ಯೆಗಳು ಮತ್ತು ಈ ಸಮಸ್ಯೆಗಳನ್ನು ಸರಿದೂಗಿಸುವ ಬಗ್ಗೆ ಕೂಡ ಕೆಲಸ ಛೇಂಬರ್ ಆಫ್ ಕಾಮರ್ಸ್‍ನ ಸದಸ್ಯರು ಮಾಡಿದ್ದಾರೆ. ಇವರ ಕಾರ್ಯವನ್ನು ಅಭಿನಂದಿಸಲು ಅ.30 ರಂದು ನಗರಕ್ಕೆ ಆಗಮಿಸಲಿರುವ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‍ರವರಿಂದ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್ ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಸರ್ಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 20 ರಿಂದ 26 ರವರೆಗೆ ವಾಣಿಜ್ಯ ಸಪ್ತಾಹವನ್ನು ಪ್ರತಿ ಜಿಲ್ಲೆಯಲ್ಲಿ ಏರ್ಪಡಿಸಿದ್ದು ಅದರಲ್ಲಿ ಒಂದು ದಿನ ರಫ್ತು ಉತ್ತೇಜನ ಕುರಿತು ಕಾರ್ಯಕ್ರಮ ಆಯೋಜಿಸಲು ಸೂಚಿಸಿರುವ ಅನ್ವಯ ಕಾರ್ಯಕ್ರಮ ಆಯೋಜಿಸಿದ್ದು ಸರ್ಕಾರದ ಆಶಯದಂತೆ ಪ್ರತಿ ಜಿಲ್ಲೆ ಕೂಡ ರಫ್ತು ಕೇಂದ್ರವಾಗುವ ನಿಟ್ಟಿನಲ್ಲಿ ಕೆಲಸಗಳನ್ನು ಕೈಗೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಕೈಗಾರಿಕೆಯಲ್ಲಿ ಉತ್ತಮ ಸಾಧನೆ ತೋರಿದ ಶಾಂತಲಾ ಮತ್ತು ಮಲೆನಾಡು ಅಲಾಯ್ಸ್ ಕಂಪೆನಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್ ಸ್ವಾಗತಿಸಿದರು. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿ ಎಂ.ಎ.ರಮೇಶ್ ಹೆಗ್ಡೆ, ಮಂಡ್ಲಿ-ಕಲ್ಲೂರು ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಘೇವರ್‍ಚಂದ್.ವಿ, ಸಾಗರ ರಸ್ತೆ ಕೈಗಾರಿಕಾ ವಸಾಹತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಉಮೇಶ್ ಶಾಸ್ತ್ರಿ ಮತ್ತು ಇತರೆ ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ರಫ್ತು ಅವಕಾಶ ಮತ್ತು ನಿಯಮಗಳ ಬಗ್ಗೆ ಮಾಹಿತಿ, 2020-25 ರ ಕೈಗಾರಿಕಾ ನೀತಿಯ ಬಗ್ಗೆ ಮಾಹಿತಿ, ಹಣಕಾಸು ಸಂಸ್ಥೆಗಳಿಂದ ಆರ್ಥಿಕ ಸೌಲಭ್ಯದ ಬಗ್ಗೆ ಮಾಹಿತಿಯ ತಾಂತ್ರಿಕ ಅಧಿವೇಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here