ಹಗರಿಬೊಮ್ಮನಹಳ್ಳಿ:ಆ:02:- ಮಹಾತ್ಮಗಾಂಧಿಜೀ ಅವರು ಕಂಡಿದ್ದ ಆಶಯಗಳನ್ನು ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಸರ್ಕಾರ ಸಾಕಾರಗೊಳಿಸುತ್ತಿದೆ ಎಂದು ಬಿಜೆಪಿ ಪಕ್ಷದ ವಿಭಾಗೀಯ ಉಸ್ತುವಾರಿಗಳು, ಮಾಜಿ ಶಾಸಕರು ಆದ ಕೆ. ನೇಮಿರಾಜನಾಯ್ಕ್ ಹೇಳಿದ್ದಾರೆ.
ಶನಿವಾರ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಗಾಂಧಿ ಜಯಂತಿ ಆಚರಣಾ ಸಮಿತಿ ಅಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮೋದಿ ಅವರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ
ಆಡಳಿತದಲ್ಲಿ ಪಾರದರ್ಶಕತೆಗೆ ಒತ್ತು ಕೊಟ್ಟು, ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತಕ್ಕೆ ಅಂಕುಶ ಹಾಕುವ ಕೆಲಸವನ್ನು ಪರಿಣಾಮಕಾರಿ ಆಗಿ ಮಾಡುತ್ತಿದ್ದಾರೆ. ಅತ್ಯಂತ ಸರಳ, ಸ್ವಚ್ಛ, ದಕ್ಷವಾದ ಆಡಳಿತವನ್ನು ನೀಡುವ ಮೂಲಕ ಮಹಾತ್ಮ ಗಾಂಧಿ ಅವರು ಕಂಡಿದ್ದ ಸ್ವಚ್ಛ ಆಡಳಿತವನ್ನು ರಾಷ್ಟ್ರದ ಜನತೆಗೆ ನೀಡುತ್ತಿದ್ದಾರೆಂದರು.
ಮಹಾತ್ಮಗಾಂಧಿ ಅವರು ಕಂಡಿದ್ದ ಗ್ರಾಮ ಸ್ವರಾಜ್ಯ, ರಾಮರಾಜ್ಯದ ಪರಿಕಲ್ಪನೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿಯೇ ಇವತ್ತು ದೆಹಲಿ ಮತ್ತು ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರಗಳು ಒತ್ತು ನೀಡಿವೆ. ಹೀಗಾಗಿ ಜನರಿಗೆ ಹೊರೆಯಾಗದ ರೀತಿಯ ಆಡಳಿತ ವ್ಯವಸ್ಥೆ ಸಿಗುವಂತಾಗಿದೆ ಎಂದು ನೇಮಿರಾಜನಾಯ್ಕ್ ಕೇಂದ್ರ,ರಾಜ್ಯ ಸರ್ಕಾರಗಳ ಆಡಳಿತ ವೈಖರಿಯ ಗುಣಗಾನ ಮಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತೊರಗಣಿಕೆಗೆ ಗಾಂಧಿ ಜಪ ಮಾಡುತ್ತಿತ್ತು. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಅಸ್ತಿತ್ವಕ್ಕೆ ಬಂದ ಬಳಿಕ ಸರ್ಕಾರದ ಆಡಳಿತದ ಪ್ರತಿ ಹಂತದಲ್ಲೂ ಮತ್ತು ಸರ್ಕಾರ ದಿಂದ ಕಾರ್ಯಕ್ರಮ,ಯೋಜನೆಗಳನ್ನು ರೂಪಿಸುವಾಗ ಮಹಾತ್ಮಗಾಂಧಿ ಅವರ ತತ್ವದರ್ಶಗಳಿಗೆ ಮೊದಲ ಪ್ರಾಶಸ್ತ್ಯ ನೀಡುವ ಪರಂಪರೆಗೆ ಒತ್ತು ನೀಡಲಾಗುತ್ತಿದೆಂದರು.
ಇದಕ್ಕೆ ಮಹಾತ್ಮ ಗಾಂಧಿ ನರೇಗಾದ ಯಶಸ್ಸೇ ಜೀವಂತ ಉದಾಹರಣೆ ಆಗಿದೆ. ಕೊರೊನಾದಂತಹ ಸಂಕಷ್ಟದಲ್ಲೂ ಜನರನ್ನು ಕೈ ಹಿಡಿದಿದ್ದು ನರೇಗಾ. ಗಾಂಧಿಜೀ ಅವರ ಸರಳತೆ, ಸೌಮ್ಯತೆ, ಭ್ರಷ್ಟಾಚಾರ ರಹಿತವಾದ ಆಡಳಿತ ಪರಿಕಲ್ಪನೆಯನ್ನು ನರೇಂದ್ರ ಮೋದಿ ಕೇಂದ್ರಲೂ, ಕರ್ನಾಟಕದಲ್ಲಿ ಬಸವರಾಜಬೊಮ್ಮಾಯಿ ಅವರು ಪಾಲಿಸುತ್ತಿದ್ದಾರೆಂದು ನೇಮಿರಾಜನಾಯ್ಕ್ ಹೇಳಿದರು.
ಎಲ್ಲರೂ ಗಾಂಧಿ ಟೋಪಿ ಹಾಕಿಕೊಳ್ಳುತ್ತಿದ್ದಾರೆ. ಆದರೆ ಮಹಾತ್ಮರು ತೊಟ್ಟಿದ್ದ ಗಾಂಧಿ ಟೋಪಿಯನ್ನು ಹಾಕಿಕೊಳ್ಳಲು ಯೋಗ್ಯತೆ ಇರಬೇಕು ಎಂದ ಅವರು ಇವತ್ತು ಐಪಿಎಲ್ ಬೆಟ್ಟಿಂಗ್ ದಂಧೆಯನ್ನು ಬೆಂಬಲಿಸುವರು, ಆಕ್ರಮ ಮದ್ಯ ಮಾರಾಟ ಹಾಗೂ ಮರಳುಗಾರಿಕೆಗೆ ಬೆಂಗಾವಲಾಗಿ ನಿಂತವರು, ಕಳಪೆ ಕಾಮಗಾರಿಗಳಿಗೆ ಆಶ್ರಯ ಧಾತರಾದವರೆಲ್ಲರೂ ಗಾಂಧಿ ಟೋಪಿ ಹಾಕಿಕೊಂಡು, ಆ ಟೋಪಿಗೆಗೆ ಇರುವ ಮಾರ್ಯಾದೆಯನ್ನು ಕಳೆಯುತ್ತಿದ್ದಾರೆಂದು ಮಾಜಿ ಶಾಸಕ ನೇಮಿರಾಜನಾಯ್ಕ್ ವಿಷಾದ ವ್ಯಕ್ತಪಡಿಸಿದರು.
ಗಾಂಧಿ ಜಯಂತಿ ಆಚರಣಾ ಸಮಿತಿ ತಾಲೂಕ ಘಟಕದ ಸಂಚಾಲಕರಾದ ಪಿ.ರಾಜಲಿಂಗಪ್ಪ, ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಬಡಿಗೆರ ಬಸವರಾಜ, ಕೊರಗಲ್ ಗಿರೀಶ್, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಕೆ.ರೋಹಿತ್, ಎಪಿಎಂಸಿ ನಿರ್ದೇಶಕ ಎಕೆ.ರಾಮಣ್ಣ, ಬಿಜೆಪಿ ಮುಖಂಡರಾದ ನಾಗಯ್ಯಸ್ವಾಮಿ, ಮೋಹನಶೆಟ್ಟಿ, ಬಿಜಿ.ಬಡಿಗೆರ್, ಚಿತವಾಡ್ಗಿ ಪ್ರಕಾಶ, ಬಂಟರ ಹುಲುಗಪ್ಪ, ಬಿ.ಶ್ರೀನಿವಾಸ,
ನಗರ ಯುವಘಟಕದ ಅಧ್ಯಕ್ಷ ಜಗದೀಶ, ರಾಜುಪಾಟೀಲ್, ಕನಕಪ್ಪ, ಕುರುಬರ ವೆಂಕಟೇಶ ಸೇರಿದಂತೆ ಹಲವರು ಭಾಗವಹಿಸಿದ್ದರು.
ಗಾಂಧಿ ಜಯಂತಿ ಆಚರಣಾ ಸಮಿತಿ ಸಂಚಾಲಕ ಬಡಿಗೆರ ಬಸವರಾಜ ನಿರೂಪಿಸಿದರು.
ಹುಳ್ಳಿಪ್ರಕಾಶ
ಸಂಪಾದಕರು
ಬಳ್ಳಾರಿ ಸುನಾಮಿಪತ್ರಿಕೆ
9448234961