ಶಿವಮೊಗ್ಗ, ನವೆಂಬರ್ 17: ಪ್ರವಾಹ, ಭೂಕುಸಿತದಂತಹ ಇತರೆ ಪ್ರಕೃತಿ ವಿಪತ್ತು ಪರಿಸ್ಥಿತಿಯ ನಿರ್ವಹಣೆ ಕುರಿತು ಅರಿವು ಮೂಡಿಸಲು ಕಮಾಂಡಂಟ್ 10 ಬೆಟಾಲಿಯನ್ ಎನ್ಡಿಆರ್ಎಫ್(ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್)ವಿಜಯವಾಡ, ಆಂಧ್ರಪ್ರದೇಶ ಇವರ ವತಿಯಿಂದ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ನ.17 ರಂದು ತಂಡವು ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಶ್ರೀ ಮಾರುತಿ ಶಿಕ್ಷಣ ಟ್ರಸ್ಟ್ನಲ್ಲಿ ಶಾಲಾ ಸುರಕ್ಷತಾ ಕಾರ್ಯಕ್ರಮವನ್ನು ನಡೆಸಿತು.
ಈ ಕಾರ್ಯಕ್ರಮದಲ್ಲಿ 10 ಬಿಎನ್ ಎನ್ಡಿಆರ್ಎಫ್ ಅಧೀನ ಅಧೀನ ಇನ್ಸ್ಪೆಕ್ಟರ್ ವೇಲೂರು ರಮೇಶ್ ಮತ್ತು ತಂಡವು ಮೂಲಭೂತ ಜೀವನ ಬೆಂಬಲ ತಂತ್ರಗಳು, ತುರ್ತು ಸ್ಥಳಾಂತರಿಸುವ ವಿಧಾನಗಳು, ವಿವಿಧ ವಿಪತ್ತುಗಳಿಗೆ ಬದುಕುಳಿಯುವ ತಂತ್ರಗಳು, ಫ್ಯಾಮಿಲಿ ಎಮರ್ಜೆನ್ಸಿ ಕಿಟ್ ಅನ್ನು ಹೇಗೆ ತಯಾರಿಸುವುದು ಮತ್ತು ಸುಧಾರಿತ ತೇಲುವ ವಸ್ತುಗಳನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ಪ್ರದರ್ಶಿಸಲಾಯಿತು.
ಇದೇ ವೇಳೆ ಶಾಲೆಯ ಸುರಕ್ಷತೆ ಮತ್ತು ಶಾಲಾ ವಿಪತ್ತು ನಿರ್ವಹಣಾ ಯೋಜನೆ ಕುರಿತು ವಿವರಿಸಲಾಯಿತು. ಹಾಗೂ ಪ್ರವಾಹದ ಸನ್ನಿವೇಶದಲ್ಲಿ ಅಣಕು ಡ್ರಿಲ್ ನಡೆಸಲಾಯಿತು ಮತ್ತು ಶಾಲೆಯಲ್ಲಿನ ವಿಪತ್ತು ಪ್ರತಿಕ್ರಿಯೆ ತಂಡಗಳ ಬಗ್ಗೆ ವಿವರಣೆ ನೀಡಲಾಯಿತು.