ಬಳ್ಳಾರಿ,ನ.25 : ಬಳ್ಳಾರಿ ತಾಲೂಕಿನ ರೂಪನಗುಡಿಯ ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ, ತಂಬಾಕು ನಿಯಂತ್ರಣ ಕೋಶ ವತಿಯಿಂದ ಗುಲಾಬಿ ಆಂದೋಲನ ಕಾರ್ಯಕ್ರಮವು ರೂಪನಗುಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ನಡೆಯಿತು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವೀರೇಂದ್ರ ಕುಮಾರ್ ಹಾಗೂ ಎನ್.ಸಿ.ಡಿ ವೈದ್ಯಾಧಿಕಾರಿ ಡಾ.ಹೆಚ್.ನಿಜಾಮುದ್ದೀನ್ ಅವರು ಕಾರ್ಯಕ್ರಮದ ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾವು ರೂಪನಗುಡಿ ಗ್ರಾಮದ ಬೀದಿಗಳಲ್ಲಿ,ಬಸ್ ನಿಲ್ದಾಣದಲ್ಲಿ,ಗ್ರಾಮ ಪಂಚಾಯಿತಿಯಲ್ಲಿ ಸಂಚರಿಸಿ ತಂಬಾಕುವಿನಿಂದ ಉಂಟಾಗುವ ಕಾಯಿಲೆಗಳ ಬಗ್ಗೆ ಹಾಗೂ ಅದನ್ನು ನಿವಾರಿಸುವ ಬಗ್ಗೆ ಅರಿವು ಮೂಡಿಸಲಾಯಿತು.
ರೂಪನಗುಡಿ ಗ್ರಾಮದ ಮಧ್ಯ ಭಾಗದಲ್ಲಿ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಎನ್.ಸಿ.ಡಿ ಸಿಬ್ಬಂದಿ ವರ್ಗದವರಿಂದ ವೃತ್ತವನ್ನು ರಚಿಸಿ ಘೋಷಣೆ ಕೂಗುವುದರ ಮೂಲಕ ಜನರಲ್ಲಿ ಅರಿವು ಮೂಡಿಸಲಾಯಿತು
ಧೂಮಪಾನ ಮಾಡುವವರಿಗೆ,ತಂಬಾಕು ಸೇವನೆ ಮಾಡುವವರಿಗೆ,ಗುಲಾಬಿ ಹೂವನ್ನು ಕೊಟ್ಟು ಧೂಮಪಾನ ಮತ್ತು ತಂಬಾಕು ಸೇವನೆಯ ಅಪಾಯದ ಬಗ್ಗೆ ತಿಳಿಸಿ ಅದನ್ನು ನಿಲ್ಲಿಸುವಂತೆ ಮನವಿ ಮಾಡಲಾಯಿತು.
ಈ ಜಾಥಾದಲ್ಲಿ ಜಾಥಾದಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳು,ಆರೋಗ್ಯ ಕಾರ್ಯಕರ್ತರು,ಆಶಾ ಕಾರ್ಯಕರ್ತೆಯರು,ಎನ್.ಸಿ.ಡಿ ಸಿಬ್ಬಂದಿ ವರ್ಗದವರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.