ಕಾಂಗ್ರೆಸ್ ಕೈ ಕೆಸರಾದರೆ ಜೆಡಿಎಸ್ ಬಾಯಿಗೆ ಮೊಸರು

0
103

ರಾಜ್ಯದಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶ ಯಡಿಯೂರಪ್ಪ ನೇತೃತ್ವದ ಸರ್ಕಾರದ ಮೇಲೆ ಯಾವ ಪರಿಣಾಮವನ್ನೂ ಬೀರದಿರಬಹುದು.ಆದರೆ ಅದು ಕರ್ನಾಟಕದ ರಾಜಕೀಯ ಭವಿಷ್ಯವನ್ನು ಸಂಕೇತಿಸುವಂತಿರುತ್ತದೆ ಎಂಬುದು ಮಾತ್ರ ನಿಶ್ಚಿತ.
ಅಂದ ಹಾಗೆ ಬೆಳಗಾವಿ ಲೋಕಸಭೆ ಕ್ಷೇತ್ರ ಮತ್ತು ಬಸವಕಲ್ಯಾಣ,ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಫಲಿತಾಂಶ ಆಡಳಿತಾರೂಢ ಬಿಜೆಪಿಯ ಮೇಲೆ ನಿರ್ಣಾಯಕ ಪರಿಣಾಮ ಬೀರುವುದಿಲ್ಲ ಎನ್ನುವುದಕ್ಕೆ ಕಾರಣಗಳಿವೆ.
ಯಾಕೆಂದರೆ ಉಪಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷಕ್ಕೆ ಸಹಜವಾಗಿಯೇ ಹೆಚ್ಚಿನ ಶಕ್ತಿ ಇರುತ್ತದೆ.ಅದರಲ್ಲೂ ಉಪಚುನಾವಣೆಗಳ ಕಣದಲ್ಲಿ ಎದುರಾಳಿಗಳನ್ನು ಕಂಗಾಲು ಮಾಡುವ ಕಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಿದೆ.
2008 ರಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಿಂದ ಹಿಡಿದು ಈಗಿನವರೆಗೆ ಸುಮಾರು ಐವತ್ತರಷ್ಟು ವಿಧಾನಸಭಾ ಕ್ಷೇತ್ತಗಳಲ್ಲಿ ಉಪಚುನಾವಣೆಗಳನ್ನು ನೋಡಿರುವ ಯಡಿಯೂರಪ್ಪ ಕೂಡಾ ಒಂಥರಾ ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿ ಹೋಗಿದ್ದಾರೆ.
ಹೀಗಾಗಿ ಈ ಸಲ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯೇ ಇರಬಹುದು,ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳೇ ಇರಬಹುದು,ಪಕ್ಷದ ಗೆಲುವಿಗಾಗಿ ಯಡಿಯೂರಪ್ಪ ರೂಪಿಸಿದ ತಂತ್ರಗಳು ಎದುರಾಳಿಗಳನ್ನು ಕಂಗೆಡಿಸಿವೆ.
ಆದ್ದರಿಂದ ಈ ಉಪಚುನಾವಣೆಗಳಲ್ಲಿ ಬಿಜೆಪಿಯ ಗೆಲುವು ಸರ್ಕಾರದ ಮೇಲೆ ದೊಡ್ಡ ಪರಿಣಾಮವನ್ನು ಬೀರುವುದಿಲ್ಲ.ಹಾಗೊಂದು ವೇಳೆ ಉಪಚುನಾವಣೆಗಳಲ್ಲಿ ಬಿಜೆಪಿ ನಿರೀಕ್ಷಿತ ಫಲಿತಾಂಶವನ್ನು ಕಾಣದಿದ್ದರೂ ಸರ್ಕಾರದ ಮೇಲೆ ಆಗುವ ಪರಿಣಾಮಗಳೇನಿಲ್ಲ.
ಆದರೆ ಇದೇ ಮಾತನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿಷಯದಲ್ಲಿ ಹೇಳಲು ಸಾಧ್ಯವಿಲ್ಲ.ಕುತೂಹಲದ ಸಂಗತಿ ಎಂದರೆ ಉಪಚುನಾವಣೆಗಳಲ್ಲಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ,ಒಂದು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಗಳಿಸಲು ಕಾಂಗ್ರೆಸ್ ಪಕ್ಷ ದೊಡ್ಡ ಪ್ರಯತ್ನ ನಡೆಸಿದೆ.
ಹಾಗೆ ಗೆದ್ದರೆ ತನಗೆ ಭವಿಷ್ಯ ಎಂಬುದು ಕಾಂಗ್ರೆಸ್ ನಂಬಿಕೆ.ಆದರೆ ಜೆಡಿಎಸ್ ಹಾಗಲ್ಲ,ಅದಕ್ಕೆ ಗೆಲುವು ಮುಖ್ಯವೇ ಅಲ್ಲ,ಬದಲಿಗೆ ಕಾಂಗ್ರೆಸ್ ಪಕ್ಷದ ಸೋಲಿನಲ್ಲೇ ಅದರ ಭವಿಷ್ಯ ಅಡಗಿದೆ.ಒಂದು ವೇಳೆ ಕಾಂಗ್ರೆಸ್ ಪಕ್ಷವೇನಾದರೂ ಒಂದು,ಎರಡು ಕ್ಷೇತ್ರಗಳಲ್ಲಿ ಗೆಲುವು ಗಳಿಸಿದರೆ ಅದು ತನ್ನ ಭವಿಷ್ಯಕ್ಕೆ ಮಾರಕ ಎಂಬುದು ಜೆಡಿಎಸ್ ನಂಬಿಕೆ.
ಹೀಗಾಗಿ ಅದು ಉಪಚುನಾವಣೆಗಳ ವಿಷಯದಲ್ಲಿ ತನ್ನದೇ ತಂತ್ರ ರೂಪಿಸಿದೆ.ಮೊದಲನೆಯದಾಗಿ ಬಸವಕಲ್ಯಾಣ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಅದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಸಲುವಾಗಿಯೇ ಕಣಕ್ಕಿಳಿಸಿದೆ.
ಹೀಗೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮೇಲೆ ಅದಕ್ಕಿರುವ ಕಣ್ಣು ಉಳಿದಂತೆ ಬೆಳಗಾವಿ ಲೋಕಸಭೆ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಮೇಲಿಲ್ಲ.ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಕಣಕ್ಕಿಳಿದರೆ ಬಿಜೆಪಿಯ ಪ್ರತಾಪ್ ಗೌಡ ಪಾಟೀಲರಿಗೆ ಹೊಡೆತ ಬಿದ್ದು,ಕಾಂಗ್ರೆಸ್ ಕ್ಯಾಂಡಿಡೇಟ್ ಗೆ ಅನುಕೂಲವಾಗಬಹುದು ಎಂಬುದು ಅದರ ಯೋಚನೆ.
ವಾಸ್ತವವಾಗಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಬಲಿಯಾಗಿ,ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರಲ್ಲಿ ಪ್ರತಾಪ್ ಗೌಡ ಪಾಟೀಲ್ ಕೂಡಾ ಒಬ್ಬರು.ಆದರೆ ಉಪಚುನಾವಣೆಗಳು ಘೋಷಣೆಯಾದಾಗಿ ಅವರಿಗಿಂತ ಕಾಂಗ್ರೆಸ್ ಅಭ್ಯರ್ಥಿ ಮುಂದಿರುವಂತೆ ಭಾಸವಾಗಿತ್ತು.
ಪರಿಸ್ಥಿತಿ ಹೀಗಿದ್ದಾಗ ಜೆಡಿಎಸ್ ವತಿಯಿಂದ ಪ್ರಬಲ ಕ್ಯಾಂಡಿಡೇಟ್ ಕಣಕ್ಕಿಳಿದರೆ ಅದು ಪ್ರತಾಪ್ ಗೌಡ ಪಾಟೀಲರಿಗೆ ಹೊಡೆತ ಕೊಟ್ಟು ಕಾಂಗ್ರೆಸ್ ಗೆ ಅನುಕೂಲ ಮಾಡಿಕೊಡುತ್ತದೆ ಎಂಬುದು ಕುಮಾರಸ್ವಾಮಿ ಅವರ ಲೆಕ್ಕಾಚಾರ.
ಹೀಗಾಗಿ ಕಾಂಗ್ರೆಸ್ ಗೆಲುವಿಗೆ ಅವಕಾಶ ಮಾಡಿಕೊಡುವ ಕೆಲಸವನ್ನು ನಾವೇಕೆ ಮಾಡಬೇಕು?ಅಂತ ಮಸ್ಕಿ ಕ್ಷೇತ್ರದ ವಿಷಯದಲ್ಲಿ ಜೆಡಿಎಸ್ ಜಾಣ ಮೌನ ವಹಿಸಿತು.ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ವಿಷಯದಲ್ಲೂ ಅಷ್ಟೇ.ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಬೇಕು ಎಂಬುದೇ ಜೆಡಿಎಸ್ ನ ಪರಮಗುರಿ.ಹೀಗಾಗಿ ಆ ಕ್ಷೇತ್ರಗಳ ಕಡೆ ಅದು ಹೆಚ್ಚು ಗಮನ ಕೊಡಲಿಲ್ಲ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನೇ ನೋಡಿ.ಶುರುವಿನಲ್ಲಿ ಅಲ್ಲಿ ಬಿಜೆಪಿಯ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ.ಯಾಕೆಂದರೆ ತಮಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿಯ ಮಲ್ಲಿಕಾರ್ಜುನ ಖೂಬಾ ಬಂಡಾಯವೆದ್ದಿದ್ದರು.
ಹೀಗೆ ಬಂಡಾಯವೆದ್ದ ಅವರು ಪಕ್ಷದ ಅಧಿಕೃತ ಅಭ್ಯರ್ಥಿ ಶರಣು ಸಲಗಾರ್ ಅವರ ವಿರುದ್ಧ ಸ್ಪರ್ಧಿಸಿದರು.ಇದರಿಂದಾಗಿ ತ್ರಿಕೋನಸ್ಪ ರ್ಧೆಗೆ ಕ್ಷೇತ್ರ ಮಿತಗೊಂಡಿದ್ದರೆ ಕಾಂಗ್ರೆಸ್ ನ ಮಲ್ಲಮ್ಮ ನಾರಾಯಣರಾವ್ ಅವರ ಗೆಲುವು ಸುಲಭವಾಗುತ್ತಿತ್ತು.ಮತ್ತು ಬಿಜೆಪಿ ಸೋಲುವ ಸಾಧ್ಯತೆ ಹೆಚ್ಚಿತ್ತು.
ಆದರೆ ಅಲ್ಲಿ ಜೆಡಿಎಸ್ ಈಗ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಕಿರಿಕಿರಿಯಾಗಿದೆ.ಅಷ್ಟೇ ಅಲ್ಲ,ಜೆಡಿಎಸ್ ನ ಈ ಸ್ಪರ್ಧೆ ಬಿಜೆಪಿಗೆ ವರಪ್ರಾಯವಾಗುವ ಸಾಧ್ಯತೆಗಳು ಹೆಚ್ಚಿವೆ.
ಅಲ್ಲಿಗೆ ರಾಜ್ಯದ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೂ ಪರವಾಗಿಲ್ಲ,ಆದರೆ ಕಾಂಗ್ರೆಸ್ ಗೆಲ್ಲಕೂಡದು ಎಂಬುದು ಜೆಡಿಎಸ್ ಏಕ ಸಾಲಿನ ನಿರ್ಣಯ.ಅದು ಹೀಗೆ ಬಯಸಲೂ ಕಾರಣವಿದೆ.ಅದೆಂದರೆ ವಿಧಾನಸಭಾ ಚುನಾವಣೆಗಳಲ್ಲಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುವ ಶಕ್ತಿ ಅದಕ್ಕಿಲ್ಲ.
1999 ರಲ್ಲಿ ಜನತಾ ಪರಿವಾರ ಒಡೆದು ಎರಡು ಹೋಳಾಯಿತಲ್ಲ?ಆ ಅ ಸಂದರ್ಭದಲ್ಲಿ ಅದರ ಗರ್ಭದಿಂದ ಸಂಯುಕ್ತ ಜನತಾದಳ ಮತ್ತು ಜಾತ್ಯಾತೀತ ಜನತಾದಳ ಜನ್ಮ ತಾಳಿದವು.ಈ ಪೈಕಿ ಸಂಯುಕ್ತ ಜನತಾ ದಳದ ಬಹುತೇಕ ನಾಯಕರು ಬಿಜೆಪಿಯಲ್ಲಿ ಲೀನವಾದರು.
ಹೀಗೆ ಜನತಾಪರಿವಾರದ ಗರ್ಭದಿಂದ ಜನ್ಮ ತಾಳಿದ ಎರಡು ಶಕ್ತಿಗಳ ಪೈಕಿ ಒಂದು ಶಕ್ತಿ ಬಿಜೆಪಿಯಲ್ಲಿ ಲೀನವಾದ ಮೇಲೆ ಉಳಿದಿದ್ದು ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ ಮಾತ್ರ.ಜನತಾ ಪರಿವಾರ ಒಗ್ಗಟ್ಟಾಗಿದ್ದಾಗ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಕನಸು ಕಾಣಬಹುದಿತ್ತು.ಆದರೆ ಈಗ ಉಳಿದುಕೊಂಡಿರುವ ಜೆಡಿಎಸ್ ಅಂತಹ ಕನಸನ್ನು ಕಾಣುವುದು ಕಷ್ಟ.
ಹೀಗಾಗಿ ಅದು ಇಪ್ಪತ್ತು ವರ್ಷಗಳಿಗೂ ಹಿಂದೆ ಒಂದು ತೀರ್ಮಾನಕ್ಕೆ ಬಂತು.ಅದೆಂದರೆ:ತಾನು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಾಗದೇ ಇರಬಹುದು.ಆದರೆ ತನ್ನನ್ನು ಹೊರತು ಪಡಿಸಿ ಬೇರೆಯವರು ಸರ್ಕಾರ ರಚಿಸಲೂ ಸಾಧ್ಯವಾಗಬಾರದು ಎಂಬುದು ಅದರ ತೀರ್ಮಾನ.
ಅದರ ಈ ತೀರ್ಮಾನಕ್ಕೆ ಅನುಗುಣವಾದ ತೀರ್ಪು ಬರಲು ಬಹುಕಾಲ ಬೇಕಾಗಲಿಲ್ಲ.2004 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಬಂದರೆ,ಕಾಂಗ್ರೆಸ್ ಪಕ್ಷ ಅರವತ್ತೈದು ಸೀಟುಗಳೊಂದಿಗೆ ಎರಡನೇ ಸ್ಥಾನಕ್ಕಿಳಿಯಿತು.
ಆ ಸಂದರ್ಭದಲ್ಲಿ ಜೆಡಿಎಸ್ ಪಡೆದಿದ್ದು ಐವತ್ತೆಂಟು ಸ್ಥಾನ ಮಾತ್ರ.ಆದರೆ ಅವತ್ತು ಜೆಡಿಎಸ್ ಪಕ್ಷವನ್ನು ಬಿಟ್ಟು ಸರ್ಕಾರ ರಚಿಸುವ ಸ್ಥಿತಿಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳೂ ಇರಲಿಲ್ಲ.ಪರಿಣಾಮ?ಅವತ್ತು ಧರ್ಮಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂತು.
ಇದಾದ ನಂತರ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷವನ್ನು ಮುಗಿಸಲು ಹೊರಟಿದೆ ಎಂದು ಆರೋಪಿಸಿ ದೇವೇಗೌಡರ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿಕೂಟ ಸರ್ಕಾರವನ್ನು ಉರುಳಿಸಿ ಬಿಜೆಪಿಯ ಜತೆ ಕೈ ಜೋಡಿಸಿ ಸರ್ಕಾರ ರಚಿಸಿದರು.
ಮುಂದೆ 2008 ಮತ್ತು 2013 ರಲ್ಲಿ ಜೆಡಿಎಸ್ ಬಯಕೆ ಈಡೇರಲಿಲ್ಲ ಎಂಬುದು ನಿಜವಾದರೂ 2018 ರ ಚುನಾವಣೆಯಲ್ಲಿ ಅದರ ಬಯಕೆಗೆ ತಕ್ಕ ಫಲಿತಾಂಶ ಬಂತು.ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಒಂದೇ ಕಾರಣಕ್ಕಾಗಿ ಕೈ ಪಾಳೆಯದ ನಾಯಕರೇ ದೇವೇಗೌಡರ ಮನೆ ಮುಂದೆ ಪೆರೇಡ್ ನಡೆಸಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದರು.ಈ ಸರ್ಕಾರ ಹೇಗೆ ಉರುಳಿ ಬಿತ್ತು?ಎಂಬುದು ರಹಸ್ಯವೇನಲ್ಲ.
ಅದರೆ ಮುಂದಿನ ಚುನಾವಣೆಯಲ್ಲಿ ಪುನ; ಕರ್ನಾಟಕದಲ್ಲಿ ಅತಂತ್ರ ವಿದಾನಸಭೆ ರೂಪುಗೊಳ್ಳಲಿ ಎಂದು ಜೆಡಿಎಸ್ ತವಕಿಸುತ್ತಿದೆ.ಮತ್ತು ಅದರ ತವಕಕ್ಕೆ ಪೂರಕವಾದ ಪರಿಸ್ಥಿತಿಯೂ ಸೃಷ್ಟಿಯಾಗುತ್ತಿದೆ.
ಉದಾಹರಣೆಗೆ ಬಿಜೆಪಿಯನ್ನೇ ತೆಗೆದುಕೊಳ್ಳಿ.ಮುಂದಿನ ಚುನಾವಣೆಯ ವೇಳೆಗೆ ಆ ಪಕ್ಷದ ಮುಂಚೂಣಿಯಲ್ಲಿ ಯಡಿಯೂರಪ್ಪ ನಿಂತಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.ದಿನ ಕಳೆದಂತೆ ಯಡಿಯೂರಪ್ಪ ಅವರ ವಿರುದ್ಧ ಸ್ವಪಕ್ಷೀಯರೇ ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ.
ಕಳೆದ ಚುನಾವಣೆಯ ತನಕ ಸುಭದ್ರವಾಗಿದ್ದ ಲಿಂಗಾಯತ ಮತ ಬ್ಯಾಂಕ್ ಈಗ ಅದೇ ಸ್ಥಿತಿಯಲ್ಲಿಲ್ಲ.ಪಂಚಮಸಾಲಿ ಸಮುದಾಯದ ಹೋರಾಟದಿಂಧ ಹಿಡಿದು,ಹಲವು ಕಾರಣಗಳಿಗಾಗಿ ಯಡಿಯೂರಪ್ಪ ಅವರ ಶಕ್ತಿ ಕ್ರಮೇಣ ಕುಗ್ಗುತ್ತಿದೆ.
ಹೀಗಿರುವಾಗ ಮುಂದಿನ ಚುನಾವಣೆಯ ವೇಳೆಗೆ ಬಿಜೆಪಿ ಸೈನ್ಯದ ಮುಂದೆ ಅವರು ಕಾಣದೆ ಹೋದರೆ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿರುತ್ತದೆ.ಯಾರೇನೇ ಹೇಳಲಿ,ಆದರೆ ಇವತ್ತಿಗೂ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಪರ್ಯಾಯವಾದ ನಾಯಕತ್ವ ಇಲ್ಲ.
ಇದು ಗೊತ್ತಿದ್ದರೂ ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ ತೀವ್ರವಾಗಿದೆ.ಪರಿಣಾಮ?ಮುಂದಿನ ಚುನಾವಣೆಯ ತನಕ ಯಡಿಯೂರಪ್ಪ ಅವರು ಪಕ್ಷದ ನೇತೃತ್ವ ವಹಿಸಿಕೊಂಡಿರುತ್ತಾರೆ ಎಂದು ಹೇಳುವ ಸ್ಥಿತಿ ಇಲ್ಲ.
ಪರಿಣಾಮ?ಮುಂದಿನ ಚುನಾವಣೆಯಲ್ಲಿ ಗೆದ್ದು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುವ ಶಕ್ತಿ ಬಿಜೆಪಿಗೆ ಇರುವುದಿಲ್ಲ.ಇನ್ನು ಕಾಂಗ್ರೆಸ್ ನಲ್ಲೂ ಅಂತ:ಕಲಹದ ಬೆಂಕಿ ಉರಿಯುತ್ತಲೇ ಇದೆ.ಅಲ್ಲಿ ಭವಿಷ್ಯದ ಮುಖ್ಯಮಂತ್ರಿಗಳಾಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪೈಪೋಟಿ ನಡೆಯುತ್ತಲೇ ಇದೆ.
ಹೀಗಾಗಿ ಕಾಂಗ್ರೆಸ್ ಪಕ್ಷ ಕೂಡಾ ಸ್ವಯಂ ಬಲದ ಮೇಲೆ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯುವುದು ಕಷ್ಟ.ಅಂತಹ ಪರಿಸ್ಥಿತಿಯನ್ನು ಊಹಿಸಿರುವ ದೇವೇಗೌಡ ಮತ್ತು ಕುಮಾರಸ್ವಾಮಿ ಆ ಪರಿಸ್ಥಿತಿಯಲ್ಲಿ ತಾವೇನು ಮಾಡಬಹುದು?ಎಂಬುದನ್ನು ಲೆಕ್ಕ ಹಾಕುತ್ತಿದ್ದಾರೆ.
ಅದಕ್ಕಿರುವ ಅನುಕೂಲವೆಂದರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಗೊಂದಲ.ಕಾಂಗ್ರೆಸ್ ನಲ್ಲಿ ಜಮೀರ್ ಅಹ್ಮದ್ ಅವರನ್ನು ಅಲ್ಪಸಂಖ್ಯಾತ ನಾಯಕರನ್ನಾಗಿಸಲು ಹೊರಟಿರುವ ಸಿದ್ಧರಾಮಯ್ಯ ವಿರುದ್ಧ,ಅವರ ಪಕ್ಕದಿಂದಲೇ ಸಿ.ಎಂ.ಇಬ್ರಾಹಿಂ ಅವರನ್ನು ಎಳೆದುಕೊಳ್ಳಲು ಜೆಡಿಎಸ್ ಹೊರಟಿದೆ.
ಯಾರೇನೇ ಹೇಳಿದರೂ ಮುಸ್ಲಿಂ ನಾಯಕರ ಪೈಕಿ ಇವತ್ತಿಗೂ ಜನಪ್ರಿಯರಾಗಿರುವ ಸಿ.ಎಂ.ಇಬ್ರಾಹಿಂ ಜೆಡಿಎಸ್ ಪಾಳೆಯಕ್ಕೆ ಕಾಲಿಟ್ಟ ನಂತರ ಆ ಪಕ್ಷದ ರಾಜ್ಯಾಧ್ಯಕ್ಷರಾಗಲಿದ್ದಾರೆ.ಮತ್ತು ಸಹಜವಾಗಿಯೇ ಮುಸ್ಲಿಂ ಸಮುದಾಯದ ಮತಗಳು ಒಂದು ಪ್ರಮಾಣದಲ್ಲಿ ಜೆಡಿಎಸ್ ನತ್ತ ವಾಲಿಕೊಳ್ಳಲಿವೆ.
ಹಾಗಾದಾಗ ಸಹಜವಾಗಿಯೇ ಜೆಡಿಎಸ್ ಗಳಿಕೆ ಐವತ್ತು ಸೀಟುಗಳ ಆಸು,ಪಾಸಿಗೆ ತಲುಪಲಿದೆ.ಹಾಗೇನಾದರೂ ಆಗಿ,ಬಿಜೆಪಿ ಮತ್ತು ಕಾಂಗ್ರೆಸ್ ಗಳಿಕೆ ಎಪ್ಪತ್ತು,ಎಂಭತ್ತು ಸ್ಥಾನಗಳ ಅಕ್ಕ ಪಕ್ಕ ನಿಂತರೆ ಅನುಮಾನವೇ ಬೇಡ.ಮುಂದಿನ ಚುನಾವಣೆಯ ನಂತರ ಕರ್ನಾಟಕ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರವನ್ನು ನೋಡಬೇಕಾಗುತ್ತದೆ.
ಜೆಡಿಎಸ್ ನಾಯಕರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಕಣ್ಣ ಮುಂದಿರುವ ಭವಿಷ್ಯದ ಚಿತ್ರ ಇದು.ಆದರೆ ಇಂತಹ ಚಿತ್ರ ರೂಪುಗೊಳ್ಳಬೇಕೆಂದರೆ ಅಲ್ಲಿಯ ತನಕ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದಲ್ಲಿ ಮೇಲೇಳದಂತೆ ಅದು ನೋಡಿಕೊಳ್ಳಬೇಕು.
ಹಾಗೆ ಕಾಂಗ್ರೆಸ್ ಪಕ್ಷ ಮೇಲೇಳದಂತೆ ನೋಡಿಕೊಳ್ಲುವ ಸಲುವಾಗಿಯೇ ಇತ್ತೀಚಿನ ಎಲ್ಲ ಉಪಚುನಾವಣೆಗಳಲ್ಲೂ ಅದು ಬಿಜೆಪಿಯ ಗೆಲುವಿಗೆ ಸಹಕಾರ ನೀಡಿದೆ.ರಾಜರಾಜೇಶ್ವರಿ ನಗರದಿಂದ ಹಿಡಿದು ಎಲ್ಲ ಕಡೆ ಅದು ನೀಡಿದ ಸಹಕಾರ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಮಾಡಿಕೊಟ್ಟಿದೆ.
ಹೀಗೆ ಅದು ಬಯಸಿದಂತೆ ಆಟ ಸಾಗುತ್ತಾ ಹೋದರೆ ಅನುಮಾನವೇ ಬೇಡ,ಮುಂದಿನ ವಿಧಾನಸಭಾ ಚುನಾವಣೆಯ ನಂತರ ಕುಮಾರಸ್ವಾಮಿ ಅವರು ಮೂರನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ತಮ್ಮ ಕನಸಿನ ಹೊಸ್ತಿಲಲ್ಲಿ ನಿಂತಿರುತ್ತಾರೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here