ಕಲಬುರಗಿ,ನ.26 – ಗುಲಬರ್ಗಾ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕು ಎಂದು ಕ್ಷೇತ್ರದ ಸಾಮಾನ್ಯ ಚುನಾವಣಾ ವೀಕ್ಷಕರಾಗಿರುವ ಆರ್ಥಿಕ ಇಲಾಖೆಯ (ವೆಚ್ಚ) ಸರ್ಕಾರದ ಕಾರ್ಯದರ್ಶಿ ಪಿ.ಸಿ.ಜಾಫರ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ಜಿಲ್ಲಾಡಳಿತದ ಇತರೆ ಹಿರಿಯ ಅಧಿಕಾರಿಗಳೊಂದಿಗೆ ಚುನಾವಣೆ ಕುರಿತು ಕರೆದ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಸೇರಿದಂತೆ ಚುನಾವಣಾ ಆಯೋಗವು ಕಾಲ-ಕಾಲಕ್ಕೆ ಹೊರಡಿಸಿರುವ ಪ್ರತಿಯೊಂದು ನಿರ್ದೇಶನಗಳನ್ನು ಚಾಚುತಪ್ಪದೆ ಪಾಲಿಸಬೇಕು. ರಾಜಕೀಯ ಪಕ್ಷಗಳಿಂದ ಯಾವುದೇ ಆರೋಪಗಳು ಬಾರದಂತೆ ತುಂಬಾ ಎಚ್ಚರ ಮತ್ತು ಜಾಗೃಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಉಪಯೋಗಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾಲೆಟ್ ಬಾಕ್ಸ್ಗಳು ಸರಿಯಾಗಿವೆ ಎಂಬುದನ್ನು ತಾಲೂಕಿನ ತಹಶೀಲ್ದಾರರು ಖುದ್ದಾಗಿ ಪರಿಶೀಲಿಸಬೇಕು. ಕಣದಲ್ಲಿರುವ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯದ ಮತ ನೀಡಬೇಕಾಗಿರುವುದರಿಂದ ಪುರಸ್ಕøತ ಮತ್ತು ತಿರಸ್ಕøತ ಮತಗಳ ಬಗ್ಗೆ ಮತ ಎಣಿಕೆ ಸಿಬ್ಬಂದಿಗಳಿಗೆ ತರಬೇತಿ ನೀಡಬೇಕೆಂದರು.
ಕ್ಷೇತ್ರದ ಗಡಿಯಲ್ಲಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ನಲ್ಲಿ ಪ್ರತಿನಿತ್ಯ ವಾಹನಗಳ ತಪಾಸಣೆ ನಡೆಸಬೇಕು. ಹಿರಿಯ ಪೊಲೀಸ್ ಅಧಿಕಾರಿಗಳ ಇದರ ಮೇಲೆ ನಿಗಾ ಇಡಬೇಕು. ಅಕ್ರಮ ಮದ್ಯ ಸಾಗಾಟ ಆಗದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಚುನಾವಣಾ ವೀಕ್ಷಕರು ನಿರ್ದೇಶನ ನೀಡಿದರು.
ಮತದಾನ ಮತ್ತು ಮತ ಎಣಿಕೆ ದಿನದಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಿರುವ ಕೋವಿಡ್ ಶಿಷ್ಠಾಚಾರ ಮಾರ್ಗಸೂಚಿಯನ್ನು ತಪ್ಪದೆ ಪಾಲಿಸಬೇಕು. ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.
ಚುನಾವಣೆÉ ಸಂಬಂಧ ರಚಿಸಿರುವ ವಿವಿಧ ತಂಡಗಳು, ನೋಡೆಲ್ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ವಹಿಸಿರುವ ಜವಾಬ್ದಾರಿಯನು ಎಲ್ಲರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ ಚುನಾವಣೆಯ ವಿವಿಧ ಹಂತದ ಕೆಲಕ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ಒಟ್ಟಾರೆ 20 ಅಧಿಕಾರಿಗಳನ್ನು ನೋಡೆಲ್ ಅಧಿಕರಿಗಳನ್ನಾಗಿ ನೇಮಿಸಿ ಜವಾಬ್ದಾರಿ ನೀಡಲಾಗಿದೆ. ಈಗಾಗಲೆ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ 25 ವಿಕಲಚೇತನರು ಸೇರಿದಂತೆ ಒಟ್ಟಾರೆ 7098 ಮತದಾರರಿದ್ದಾರೆ. 391 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮತಗಟ್ಟೆಯಲ್ಲಿ ಕುಡಿಯುವ ನೀರು, ರ್ಯಾಂಪ್, ಶೌಚಾಲಯ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಕನಿಷ್ಟ ಮೂಲಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವೆಲೆನ್ಸ್ ಟೀಂ, ವಿಡಿಯೋ ವೀವಿಂಗ್ ಟೀಂ, ಸ್ಟಾಟಿಕ್ ಸರ್ವಿಲಿಯನ್ಸ್ ಟೀಂ ರಚಿಸಿದ್ದು, ಎಂ.ಸಿ.ಸಿ. ಕಟ್ಟುನಿಟ್ಟಾಗಿ ಪಾಲನೆಗೆ 4-5 ಗ್ರಾಮ ಪಂಚಾಯತಿಗಳಿಗೆ ಒಬ್ಬರನ್ನು ಸೆಕ್ಟರ್ ಅಧಿಕಾರಿಗಳನ್ನಾಗಿಯೂ ನೇಮಿಸಲಾಗಿದೆ. ಮತದಾನಕ್ಕೆ 587 ಸಿಬ್ಬಂದಿಗಳನ್ನು ಗುರುತಿಸಿದ್ದು, ಮತ ಎಣಿಕೆ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಣಾಗದಲ್ಲಿ ನಡೆಯಲಿದೆ ಎಂದು ಅವರು ವಿವರಿಸಿದರು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ ಮತ್ತು ಎಸ್.ಪಿ. ಇಶಾ ಪಂತ್ ಅವರು ಮಾತನಾಡಿ ಚುನಾವಣೆ ಶಾಂತಿ ಮತ್ತು ಸುವ್ಯವಸ್ಥೆಯಿಂದ ನೆರವೇರಲು ಕೈಗೊಂಡಿರುವ ಭದ್ರತಾ ಕಾರ್ಯಗಳ ಬಗ್ಗೆ ವಿವರಿಸಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಎಂ.ಸಿ.ಸಿ. ನೋಡೆಲ್ ಅಧಿಕಾರಿ ಡಾ.ದಿಲೀಷ್ ಶಶಿ ಮಾತನಾಡಿ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದ್ದು, ತಾಲೂಕಾ ಹಂತದಲ್ಲಿಯೂ ಇ.ಓ. ಗಳನ್ನು ಎಂ.ಸಿ.ಸಿ. ನೋಡೆಲ್ ಅಧಿಕಾರಿಗಳನ್ನಾಗಿ ಮಾಡಲಾಗಿದೆ. ಸ್ವೀಪ್ ಚಟುವಟಿಕೆ ಭಾಗವಾಗಿ ಮತದಾರರಾಗಿರುವ ಎಲ್ಲಾ ಗ್ರಾ.ಪಂ ಸದಸ್ಯರಿಗೆ ಮತದಾನ ಪ್ರಕ್ರಿಯೆ ಕುರಿತು ಅರಿವು ನೀಡಲಾಗಿದೆ ಎಂದ ಅವರು ಇಂದಿನ ವರೆಗೆ ಕ್ಷೇತ್ರದಲ್ಲಿ ಯಾವುದೇ ಎಂ.ಸಿ.ಸಿ. ಉಲ್ಲಂಘನೆ ಪ್ರಕರಣ ವರದಿಯಾಗಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ದುರಗೇಶ ರುದ್ರಾಕ್ಷಿ, ಸಹಾಯಕ ಆಯುಕ್ತೆ ಮೋನಾ ರೋಟ್, ಸುರೇಖಾ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ತಹಶೀಲ್ದಾರರು ಹಾಜರಿದ್ದರು.