ಬಳ್ಳಾರಿ,ಸೆ.06 : ರಾಷ್ಟ್ರೀಯ ಜಾನುವಾರು ನಿಯಂತ್ರಣಾ ಕಾರ್ಯಕ್ರಮಡಿಯಲ್ಲಿ 4-8 ತಿಂಗಳ ಹೆಣ್ಣು ಕರುಗಳಿಗೆ ಕಂದುರೋಗದ ವಿರುದ್ಧ ಲಸಿಕಾ ಕಾರ್ಯಕ್ರಮ ಸೆ.15ರವರೆಗೆ ನಡೆಯಲಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಬಿ.ಎಲ್.ಪರಮೇಶ್ವರ ನಾಯ್ಕ್ ಅವರು ಹೇಳಿದರು.
ನಗರದ ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
4ರಿಂದ 8 ತಿಂಗಳ ಕರುಗಳಲ್ಲಿ ಕಾಣಿಸುವ ಕಂದುರೋಗವನ್ನು ನಿಯಂತ್ರಿಸಲು ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲೆ ಎಲ್ಲಾ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲೆಯ ಎಲ್ಲಾ ಪಶುವೈದ್ಯಾಧಿಕಾರಿಗಳಿಗೆ ರಾಷ್ಟ್ರೀಯ ಜಾನುವಾರು ನಿಯಂತ್ರಣಾ ಕಾರ್ಯಕ್ರಮಡಿಯಲ್ಲಿ 4-8 ತಿಂಗಳ ಆಕಳು ಮತ್ತು ಎಮ್ಮೆಯ ಕರುಗಳಿಗೆ ಕಂದುರೋಗದ ವಿರುದ್ಧ ಲಸಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು ಎಲ್ಲಾ ರೀತಿಯ ಮಾಹಿತಿಯನ್ನು ಈ ಕಾರ್ಯಾಗಾರದಲ್ಲಿ ನೀಡಲಾಯಿತು.
ಇದೇ ಸಮಯದಲ್ಲಿ ಪಶುಪಾಲನಾ ಇಲಾಖೆಯ(ಜಾಗೃತ ಮತ್ತು ತಾಂತ್ರಿಕ ಲೆಕ್ಕ ತಪಾಸಣೆಯ) ಅಪರ ನಿರ್ದೇಶಕ ಡಾ.ಜೆ.ಪಂಪಾಪತಿ ಅವರು ಲಸಿಕಾ ಕಾರ್ಯಕ್ರಮದ ಪ್ರಚಾರದ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಹಗರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಕೆ.ರಮೇಶ್, ಬಳ್ಳಾರಿ ಪಶುಆಸ್ಪತ್ರೆಯ ವಿಸ್ತರಣಾಧಿಕಾರಿ ಡಾ.ಎಂ.ಮಂಜುನಾಥ ಅವರು ಕಾರ್ಯಾಗಾರದ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಪಶುವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.