ಬಳ್ಳಾರಿ,ಡಿ.04 : ಕಾರ್ಮಿಕ ಇಲಾಖೆಯ ಇ-ಶ್ರಮ ಯೋಜನೆಯಡಿಯಲ್ಲಿ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೆಟಾಬೇಸ್ (ಓಆUW) ಜಾರಿಗಾಗಿ ನೋಂದಣಿ ಅಭಿಯಾನ ಕೈಗೊಳ್ಳಲಾಗಿದ್ದು, ನಮ್ಮ ರಾಜ್ಯಕ್ಕೆ 1.89 ಲಕ್ಷ ಗುರಿ ನಿಗಧಿಪಡಿಸಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ನಿಗದಿಪಡಿಸಲಾದ 77832 ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ ಗುರಿಯನ್ನು ಇದೇ ತಿಂಗಳ 30ರೊಳಗೆ ತಲುಪಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಮಿಕ ಇಲಾಖೆಯ ಇ-ಶ್ರಮ ಯೋಜನೆಯಡಿಯಲ್ಲಿ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೆಟಾಬೇಸ್ (ಓಆUW) ಜಾರಿಗಾಗಿ ನೋಂದಣಿ ಅಭಿಯಾನ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆಯಡಿಯಲ್ಲಿ ಕಟ್ಟಡ ಕಾಮಗಾರಿಗಳಲ್ಲಿ ನಿರ್ಮಾಣ ವೆಚ್ಚದ ಶೇ.1ರಷ್ಟು ಕಾರ್ಮಿಕರ ಸುಂಕವನ್ನು ಕಡಿತಗೊಳಿಸುವ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಮ್ಮ ಅಧಿನದಲ್ಲಿ ಬರುವ ಅಸಂಘಟಿತ ಕಾರ್ಮಿಕರನ್ನು ಹಾಗೂ ಸಂಘಟನೆಗಳಿಗೆ ತಮ್ಮ ಸಮಾಜ ಹಾಗೂ ಸಂಘಟನೆಗಳ ಕಾರ್ಮಿಕರನ್ನು ಡಿಸೆಂಬರ್ 30 ರ ಒಳಗಾಗಿ ನೋಂದಾಯಿಸಿ ನಿಗಧಿತ ಗುರಿ ತಲುಪಬೇಕು ಎಂದು ಸೂಚನೆ ನೀಡಿದ ಡಿಸಿ ಮಾಲಪಾಟಿ ಅವರು ಅಸಂಘಟಿತ ವಲಯದ ಕಾರ್ಮಿಕರು ಇ-ಶ್ರಮ ಕಾರ್ಡನ್ನು ಪಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನೀಡುವ ವಿವಿಧ ಧನಹಾಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಇರುವ ಅಸಂಘಟಿತ ಕಾರ್ಮಿಕರನ್ನು ಸಿ.ಎಸ್.ಸಿ ಮೂಲಕ ನೋಂದಾಯಿಸಲು ಇದೇ ಸಂದರ್ಭದಲ್ಲಿ ಸೂಚಿಸಿದರು.ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್ ಮೂಲಕ ಈ ತಿಂಗಳೊಳಗೆ ನೋಂದಣಿ ಮಾಡಿಸಲು ಸೂಚಿಸಿದರು.
ಕಾರ್ಮಿಕ ಇಲಾಖೆಯಿಂದ ಡಿ.10ರವರೆಗೆ ಕಾರ್ಮಿಕರ “ಸುಂಕ ಅಭಿಯಾನ”ವನ್ನು ಕೈಗೊಂಡಿದ್ದು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸುಂಕ ಕಾಯ್ದೆಯಡಿಯಲ್ಲಿ 10 ಲಕ್ಷ ವೆಚ್ಚ ಮೀರಿದ ಯಾವುದೇ ಕಟ್ಟಡ & ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಅಂದಾಜು ವೆಚ್ಚವದ ಶೇ.1ರಷ್ಟು ಕಾರ್ಮಿಕರ ಸುಂಕವನ್ನು ಕಡಿತಗೊಳಿಸಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ತಪ್ಪದೆ ಪಾವತಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
2007-08 ರಿಂದ ಇದುವರೆಗೆ ಸುಂಕ ಕಡಿತಗೊಳಿಸಿ ಮಂಡಳಿಗೆ ಪಾವತಿಸದೆ ಇರುವ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಡಿ.10ರೊಳಗೆ ಪಾವತಿಸಿ ಮಾಹಿತಿ ನೀಡುವಂತೆ ತಿಳಿಸಿದರು.
ಈ ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್,ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಕಮಲ್ಷಾಅಲ್ತಾಪ್ ಅಹ್ಮದ್ ಮಾರಿಕಾಂಬ ಹುಲಕೋಟಿ, ಕಾರ್ಮಿಕ ನಿರೀಕ್ಷರಾದ ಎಂ.ರವಿದಾಸ, ರಾಜೇಶ.ಸಿ.ಎನ್, ಭೂಪಾಲ್, ಎಂ.ಅಶೋಕ ಹಾಗೂ ಹಾಗೂ ಅಸಂಘಟಿತ ವಲಯ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರು ಇದ್ದರು.