ಸಾಕ್ಷರತೆ ಬದುಕಿಗೆ ಸಾರ್ಥಕತೆ ತಂದುಕೊಡುತ್ತದೆ
-ಜಿ.ಪಂ.ಸಿಇಓ ಡಾ.ಸುರೇಶ ಇಟ್ನಾಳ

0
90

ಧಾರವಾಡ : ಏ.19: ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಹೆಣ್ಣು ಮಕ್ಕಳು ಶಿಕ್ಷಿತರಾದರೆ ಇಡೀ ಕುಟುಂಬದ ಚಿತ್ರಣವೇ ಬದಲಾಗಲು ಸಾಧ್ಯ.ಶಿಕ್ಷಣದಿಂದ ನಮ್ಮ ಹಕ್ಕುಗಳಿಗೆ ಧ್ವನಿ ದೊರೆತು ಬದುಕನ್ನು ಸಾರ್ಥಕಪಡಿಸಿಕೊಳ್ಳಬಹುದು, ವಯೋಮಿತಿ,ಲಿಂಗ ತಾರತಮ್ಯವಿಲ್ಲದೇ ಪ್ರತಿಯೊಬ್ಬರೂ ಸಾಕ್ಷರರಾಗಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.

ಲೋಕ ಶಿಕ್ಷಣ ನಿರ್ದೇಶನಾಲಯ,ಜಿಲ್ಲಾ ಪಂಚಾಯತ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ,ಕ್ಲಾಸಿಕ್ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಇಂದು ಏರ್ಪಡಿಸಿದ್ದ ಬೋಧಕರ ಪುನಶ್ಚೇತನ ತರಬೇತಿ ಶಿಬಿರ , ಸ್ಲೇಟು,ಪೆನ್ಸಿಲ್ ಹಾಗೂ ಪಾಠೋಪಕರಣಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳ ಅವಧಿಯಲ್ಲಿ ದೇಶ ಶೇ.80 ರಷ್ಟು ಸಾಕ್ಷರವಾಗಿದೆ. ಸಂವಿಧಾನದ 21 ನೇ ವಿಧಿಯನ್ವಯ ಉಚಿತ ಶಿಕ್ಷಣ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಲ್ಲಿದೆ.ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ ಎಂದರೆ ಕೇವಲ ಅಕ್ಷರ ಕಲಿಕೆ ಮಾತ್ರವಲ್ಲ,ಅದು ನಮ್ಮನ್ನು ಜ್ಞಾನಸಂಪನ್ನರಾಗಿಸಿ ಹಕ್ಕುಗಳ ತಿಳುವಳಿಕೆ ನೀಡುತ್ತದೆ.ಸ್ವಾಮಿ ವಿವೇಕಾನಂದರೂ ಕೂಡ ಶಿಕ್ಷಣದಿಂದ ಸದೃಢ ಮನಸ್ಸು, ಧೈರ್ಯಶೀಲರನ್ನಾಗಿಸುತ್ತದೆ ಎಂದು ಹೇಳಿರುವುದು ಶಿಕ್ಷಣದ ಮಹತ್ವ ಸಾರುತ್ತದೆ. ಮಹಿಳೆಯರು ಶಿಕ್ಷಣ ಪಡೆಯಲು ಮುಂದಾದಾಗ ಅಕ್ಷರ ಕ್ರಾಂತಿಯಾಗುತ್ತದೆ.ಬಾಲ್ಯ ವಿವಾಹ ,ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಉಚಿತ ಕರೆ ಮಾಡಿ ಮಾಹಿತಿ ನೀಡಿದರೆ,ಸಂಬಂಧಿಸಿದ ಇಲಾಖೆಯವರು ಬಾಲ್ಯವಿವಾಹ ತಡೆಯುತ್ತಾರೆ,ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದು ಎಂದರು.

ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಮಾತನಾಡಿ,ವಿದ್ಯೆಯು ಯಾರೂ ಕಸಿದುಕೊಳ್ಳಲಾಗದ ಸಂಪತ್ತು,ಅದನ್ನು ಪ್ರತಿಯೊಬ್ಬರೂ ತಮ್ಮದಾಗಿಸಿಕೊಳ್ಳಲು ಅಕ್ಷರಾಭ್ಯಾಸ ಮಾಡಬೇಕು.ಕಲಿಕೆಗೆ ವಯೋಮಿತಿ ನಿಬರ್ಂಧ ಇಲ್ಲ.ಪ್ರಜಾಪ್ರಭುತ್ವ ಯಶಸ್ವಿಗೆ ಅನಕ್ಷರಸ್ಥರ ಪ್ರಮಾಣ ಅಧಿಕವಾಗಿರುವುದು ಮುಖ್ಯ.ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸುವುದು ದೊಡ್ಡ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಮಾತನಾಡಿ,ಮೂಲ ಸಾಕ್ಷರತೆ ಹಾಗೂ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗಿರುವ 15 ವರ್ಷ ಮೇಲ್ಟಟ್ಟ ಜಿಲ್ಲೆಯ ಆಯ್ದ ಗ್ರಾಮಗಳ 5685 ಅನಕ್ಷರಸ್ಥರಿಗೆ ಪ್ರಸಕ್ತ ಸಾಲಿನಲ್ಲಿ ಸಾಕ್ಷರರನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ.ವಿದ್ಯೆಗೆ ಹೆಸರಾಗಿರುವ ಧಾರವಾಡ ಜಿಲ್ಲೆಯಲ್ಲಿ ಶೇ.80 ರಷ್ಟು ಸಾಕ್ಷರರಿದ್ದಾರೆ,ಉಳಿದ ಶೇ.20 ರಷ್ಟು ಜನರನ್ನೂ ಕೂಡ ಸಾಕ್ಷರರಾಗಿಸಲು ಪಣತೊಟ್ಟು ಕಾರ್ಯೋನ್ಮುಖರಾಗಿದ್ದೇವೆ ಎಂದರು.

ಸಮಾರಂಭದ ಸಾನಿಧ್ಯವಹಿಸಿದ್ದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ದೇಶವೆಂದರೆ ಅಲ್ಲಿ ಬೆಟ್ಟ, ಗುಡ್ಡ, ಚಿನ್ನ, ಲೋಹದ ಗಣಿ ಸಂಪತ್ತು ಹೇರಳವಾಗಿದ್ದರೂ ಅದು ಬಲಿಷ್ಠ ರಾಷ್ಟ್ರವೆನಿಸಲಾರದು. ಸಾಕ್ಷರರು, ವಿಚಾರವಂತ ಪ್ರಜೆಗಳಿರುವ ರಾಷ್ಟ್ರ ಸದೃಢ ರಾಷ್ಟ್ರವೆನಿಸಿಕೊಳ್ಳುತ್ತದೆ. ವಿಪುಲ ಜನಸಂಖ್ಯೆ ಹೊಂದಿರುವ ಭಾರತದ ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕು.ಸುಶಿಕ್ಷಿತರು ಜಗತ್ತನ್ನು ಹೆಚ್ಚು ಅರ್ಥ ಮಾಡಿಕೊಳ್ಳಬಲ್ಲರು. ಅನಕ್ಷರಸ್ಥರಲ್ಲಿ ಅಪಾರ ಜೀವನಾನುಭವ ಇರುತ್ತದೆ.ಅವರಿಗೆ ಅಕ್ಷರ ಕಲಿಸುವ ಮೂಲಕ ಅವರ ಅನುಭವದ ಪಾಠಗಳನ್ನೂ ನಾವು ಆಲಿಸಬೇಕು ಎಂದರು. ನವಲಗುಂದ ಬಿಇಓ ಬಸವರಾಜ ಮಾಯಾಚಾರ್ಯ ಮಾತನಾಡಿದರು.

ವಯಸ್ಕರ ಶಿಕ್ಷಣದ ನೋಡಲ್ ಅಧಿಕಾರಿಗಳನ್ನು, ದಾನಿ ಬಸವರಾಜ ಕಣದಾಳಿ ಅವರನ್ನು ಸತ್ಕರಿಸಿ,ಗೌರವಿಸಲಾಯಿತು.

ಡಯಟ್ ಪ್ರಾಚಾರ್ಯೆ ಜಯಶ್ರೀ ಕಾರೇಕಾರ್, ಕ್ಲಾಸಿಕ್ ಸಮೂಹ ಸಂಸ್ಥೆಗಳ ಸಂಗಮೇಶ್ ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ, ಉಮೇಶ ಬೊಮ್ಮಕ್ಕನವರ, ಅಶೋಕ ಸಿಂದಗಿ, ಉಮಾ ಬಸಾಪೂರ, ಜಿ.ಎಸ್. ಮಠಪತಿ, ಬಸವರಾಜ ಮಾಯಾಚಾರ್ಯ, ಶಿಕ್ಷಣ ಉಪಸಮನ್ವಯಾಧಿಕಾರಿ ಎಸ್.ಎಂ.ಹುಡೇದಮನಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ವಯಸ್ಕರ ಶಿಕ್ಷಣ ಕಾರ್ಯಕ್ರಮ ಸಹಾಯಕ ಶ್ರೀಶೈಲ ರಾಚಣ್ಣವರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎಸ್.ಸಿ.ಶಾನವಾಡ ಕಾರ್ಯಕ್ರಮ ನಿರೂಪಿಸಿದರು.ಡಾ.ರಾಮು ಮೂಲಗಿ ಸಾಕ್ಷರತಾ ಗೀತೆಗಳನ್ನು ಪ್ರಸ್ತುತ ಪಡಿಸಿದರು.ನಾಗೇಶನಾಯಕ ವಂದಿಸಿದರು.

LEAVE A REPLY

Please enter your comment!
Please enter your name here