ಧಾರವಾಡದಲ್ಲಿ ಆ.6 ರಂದು ದೇಸಿ ನಾಯಿಗಳ ದತ್ತು ಶಿಬಿರ,ಮಾನವ-ನಾಯಿ ಸಂಘರ್ಷ ತಡೆಯಲು ವಿಶೇಷ ಕಾರ್ಯಕ್ರಮ;ಬೆಂಬಲಿಸಿ, ಪ್ರೋತ್ಸಾಹಿಸಲು ಜಿಲ್ಲಾಧಿಕಾರಿ ಮನವಿ

0
92

ಧಾರವಾಡ .04: ಸಾಕುಪ್ರಾಣಿಗಳು ಮಾನಸಿಕ ಶಾಂತಿಯನ್ನು ನೀಡುತ್ತವೆ ಮತ್ತು ಜೀವನದ ಸರಳ, ಸಂತೋಷಗಳನ್ನು ನಮಗೆ ನೆನಪಿಸುತ್ತವೆ. ಸಾಕುಪ್ರಾಣಿಗಳನ್ನು ದತ್ತು ಪಡೆಯುವುದರಿಂದ ನಾಯಿಗಳಿಗೆ ಸುರಕ್ಷಿತ ಆಶ್ರಯವನ್ನು ಒದಗಿಸುತ್ತದೆ ಮತ್ತು ನಿರ್ವಹಿಸದ ನಾಯಿಗಳಿಂದ ಉಂಟಾಗುವ ಮಾನವ-ನಾಯಿ ಸಂಘರ್ಷವನ್ನು ತಡೆಯುತ್ತದೆ. ನಗರದಲ್ಲಿ ಇಂತಹ ಕಾರ್ಯಕ್ರಮಗಳನ್ನು ಬೆಂಬಲಿಸಲು ಮತ್ತು ಪೆÇ್ರೀತ್ಸಾಹಿಸಲು ಮುಂದೆ ಬನ್ನಿ ಎಂದು ಧಾರವಾಡ ಜಿಲ್ಲಾ ಪ್ರಾಣಿ ದಯಾ ಸಂಘದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾನವನ ನಾಯಿಗಳ ಸಂಘರ್ಷವನ್ನು ತಪ್ಪಿಸಲು, ಮಾರಣಾಂತಿಕ ರೇಬೀಸ್ ಇತರ ಝೂನೋಟಿಕ್ ಕಾಯಿಲೆಗಳನ್ನು ನಿಯಂತ್ರಿಸಲು ನಗರಪ್ರದೇಶಗಳಲ್ಲಿ ಬೀದಿನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಅಗತ್ಯವಾಗಿದೆ. ದತ್ತು ತೆಗೆದುಕೊಳ್ಳುವ ಮೂಲಕ ಮತ್ತು ಉತ್ತೇಜಿಸುವ ಮೂಲಕ ಪ್ರಾಣಿಗಳ ಬಗ್ಗೆ ಸಾರ್ವಜನಿಕರು ಸಹಾನುಭೂತಿ ಹೊಂದುವಂತೆ ಮಾಡಲಾಗುತ್ತದೆ. ಈ ಉದ್ದೇಶಕ್ಕಾಗಿ ಧಾರವಾಡ ಜಿಲ್ಲಾ ಪ್ರಾಣಿ ದಯಾ ಸಂಘವು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಪಶುಸಂಗೋಪನೆ, ಪಶುವೈದ್ಯಕೀಯ ಇಲಾಖೆ ಮತ್ತು ಹ್ಯೂಮೇನ್ ಸೊಸೈಟಿ ಇಂಟರ್‍ನ್ಯಾಷನಲ್ ಇಂಡಿಯಾ ಹಾಗೂ ಪ್ರಾಣಿ ಪ್ರೇಮಿಗಳ ಸಹಯೋಗದೊಂದಿಗೆ ಧಾರವಾಡದಲ್ಲಿ ಆಗಸ್ಟ್ 6 ರಂದು ದೇಸಿ ನಾಯಿಗಳ ದತ್ತು ಶಿಬಿರವನ್ನು ಆಯೋಜಿಸಿದೆ.

ಅವಳಿನಗರದಲ್ಲಿ ಮಾನವ-ನಾಯಿ ಸಂಘರ್ಷವನ್ನು ಕಡಿಮೆ ಮಾಡಲು, ಪ್ರತಿಯೊಂದು ಮನೆಯಲ್ಲೂ ದೇಸಿನಾಯಿಗಳನ್ನು ದತ್ತು ಸ್ವೀಕರಿಸುವುದನ್ನು ಉತ್ತೇಜಿಸುವುದು ಈ ದತ್ತು ಶಿಬಿರದ ಉದ್ದೇಶವಾಗಿದೆ.

ಶಿಬಿರದಲ್ಲಿ ದತ್ತು ಪಡೆಯಲು ಇರಿಸಲಾಗಿರುವ ಎಲ್ಲಾ ನಾಯಿಮರಿಗಳಿಗೆ ಜಂತುಹುಳು ನಿವಾರಣೆ ಮತ್ತು ರೇಬೀಸ್, ಕ್ಯಾನೈನ್ಡಿಸ್ಟಂಪರ್, ಪಾರ್ವೊ ಮತ್ತು ಇತರ ರೋಗಗಳ ವಿರುದ್ಧ ಲಸಿಕೆಯನ್ನು ನೀಡಲಾಗಿದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ನಾಯಿಮರಿಗಳನ್ನು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯಲ್ಲಿ ನೋಂದಾಯಿಸಲಾಗುತ್ತದೆ. ಮತ್ತು ಮಾಲೀಕತ್ವದ ಪ್ರಮಾಣಪತ್ರವನ್ನು ಒದಗಿಸಲಾಗುತ್ತದೆ. ಮನೆಯಲ್ಲಿ ಸಾಕುಪ್ರಾಣಿಗಳನ್ನು ಹೊಂದಿರುವುದು ಸಾಕುಪ್ರಾಣಿಗಳು ಮತ್ತು ಅವುಗಳ ಮಾಲೀಕರಿಗೆ ಪ್ರಯೋಜನಕಾರಿಯಾಗಿದೆ.

ಈ ಶಿಬಿರದಲ್ಲಿ ಪಾಲ್ಗೊಂಡು ಲಸಿಕೆ ಮತು ಜಂತುಹುಳು ನಿವಾರಣೆ ಔಷಧಿ ಪಡೆದ ನಾಯಿಮರಿಗಳನ್ನು ದತ್ತು ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಭಾರತದಲ್ಲಿ ಪ್ರಾಣಿಗಳು ಬೀದಿಗಳಲ್ಲಿ ತಿರುಗಾಡುವ ದೃಶ್ಯ ಸಾಮಾನ್ಯವಾಗಿದೆ. ಸಾಕುಪ್ರಾಣಿಗಳಿಗೆ ಅವುಗಳ ಮಾಲೀಕರು ವಿಶೇಷ ಕಾಳಜಿಯನ್ನು ನೀಡುತ್ತಾರೆ. ಆದರೆ ಮಾಲೀಕರಿಲ್ಲದ ಪ್ರಾಣಿಗಳನ್ನು ಎಲ್ಲರೂ ನಿರ್ಲಕ್ಷಿಸುತ್ತಾರೆ. ಪ್ರಾಣಿಗಳು ಮಾನವ ಸಹಜೀವಿಗಳು. ಪ್ರಾಣಿಗಳನ್ನು ರಕ್ಷಿಸಲು ಇದು ಉತ್ತಮ ಸಹಯೋಗದ ಕಾರ್ಯಕ್ರಮವಾಗಿದೆ.

ದೇಸಿ ನಾಯಿಗಳ ದತ್ತು ಶಿಬಿರದಲ್ಲಿ ಭಾಗವಹಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ದತ್ತು ಸ್ವೀಕಾರಕ್ಕೆ ಹೆಸರು ನೋಂದಾಯಿಸಲು ಶಿಬಿರದ ಸಂಯೋಜಕರಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮುಖ್ಯವೈದ್ಯಾಧಿಕಾರಿ ಡಾ.ದಂಡಪ್ಪನವರ್ ಹಾಗೂ ರಮೇಶ ಭಜಂತ್ರಿ ಮೊ: 6358913475 ಗೆ ಸಂಪರ್ಕಿಸಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here