ಅಂಜೂರು ಬೆಳೆ ಪ್ರದೇಶ ವಿಸ್ತರಣೆ ಮತ್ತು ಸಂಸ್ಕರಣೆ ಕುರಿತು ಕುರುಗೋಡಿನಲ್ಲಿ ವಿಚಾರ ಸಂಕಿರಣ,ಒಂದು ಜಿಲ್ಲೆ ಒಂದು ಉತ್ಪನ್ನದ ಸದಾವಕಾಶಗಳು ಬಳಸಿಕೊಳ್ಳಿ: ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಪಿ.ಭೋಗಿ

0
76

ಬಳ್ಳಾರಿ,ಏ.28 : ತೋಟಗಾರಿಕೆ ಇಲಾಖೆ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಿಸಾನ್ ಭಾಗಿದಾರಿ ಪ್ರಾಥಮಿಕ ಹಮಾರಿ ಆಂದೋಲನ ಮತ್ತು ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣೆ ನಿಯಮಬದ್ಧಗೊಳಿಸುವಿಕೆ ಹಾಗೂ ಒಂದು ಜಿಲ್ಲೆ ಒಂದು ಉತ್ಪನ್ನ ಆಶಯದಂತೆ ಕುರುಗೋಡು ಪಟ್ಟಣದ ವಾಲ್ಮೀಕಿ ಭವನದಲ್ಲಿ ಅಂಜೂರ ಬೆಳೆಯ ಪ್ರದೇಶ ವಿಸ್ತರಣೆ ಹಾಗೂ ಸಂಸ್ಕರಣೆ ಕುರಿತು ಗುರುವಾರ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.
ಈ ವಿಚಾರ ಸಂಕಿರಣದ ಮುಖ್ಯ ಉದ್ದೇಶವು ಅಂಜೂರ ಬೆಳೆಯ ಪ್ರದೇಶ ವಿಸ್ತರಿಸುವುದರ ಮೂಲಕ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಿ ತನ್ಮೂಲಕ ಸಂಸ್ಕರಣೆಯಲ್ಲಿ ತೊಡಗಿಸೊಕೊಳ್ಳುವ ರೈತ ಭಾಂದವರಿಗೆ ತಾಂತ್ರಿಕ ನೆರವು ನೀಡುವುದಾಗಿದೆ.
ಈ ನಿಟ್ಟಿನಲ್ಲಿ ತಾಂತ್ರಿಕ ಅಧಿವೇಶನವನ್ನು ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಅಂಜೂರ ಬೆಳೆಯ ಹೊಸ ಅನುಶೋಧನೆಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಅಂಜೂರ ಬೆಳೆಗಾರರಿಗೆ ಮತ್ತು ಪ್ರಗತಿಪರ ಬೆಳೆಗಾರರಿಗೆ ಈ ವಿಚಾರ ಸಂಕಿರಣದಲ್ಲಿ ತಿಳಿಸಿಕೊಡಲಾಯಿತು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಎಸ್.ಪಿ.ಭೋಗಿ ಅವರು ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿ, ಬಳ್ಳಾರಿಯ ಅಂಜೂರ ತಳಿಯ ವಿಶಿಷ್ಟತೆ ಬಗ್ಗೆ ಉಲ್ಲೇಖಿಸಿದರು. ಸದರಿ ತಳಿಯನ್ನು ಬೆಳೆಸಿ, ಉಳಿಸಿ, ಪೋಷಿಸುವ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು.
ಒಂದು ಜಿಲ್ಲೆ ಒಂದು ಉತ್ಪನ್ನದಡಿ ಲಭ್ಯವಿರುವ ಆರ್ಥಿಕ ನೆರವು ಹಾಗೂ ಸದಾವಕಾಶಗಳನ್ನು ಉಪಯೋಗಿಸಿಕೊಳ್ಳುವ ಬಗ್ಗೆ ರೈತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಯೋಗೇಶ್ವರ್ ಅವರು,ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಹಾಗೂ ಅಂಜೂರ ಹಣ್ಣಿನ ಉತ್ತೇಜನಕ್ಕಾಗಿ, ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳ ಬಗ್ಗೆ ವಿವರಿಸಿದರು.
ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಡಾ.ಜಯಪ್ರಕಾಶ ನಾರಾಯಣ ಅವರು ಅಂಜೂರ ಬೆಳೆಯ ಬೇಸಾಯದ ತಾಂತ್ರಿಕತೆ ಬಗ್ಗೆ ಮಾಹಿತಿ ನೀಡಿದರು.
ವಿಚಾರ ಸಂಕಿರಣದಲ್ಲಿ ಡಾ.ಗೋವಿಂದಪ್ಪ, ಡಾ.ಶಿಲ್ಪ.ಹೆಚ್, ಕುರುಗೋಡಿನ ಅಂಜೂರ ಬೆಳೆಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ಸಂತೋಷರೆಡ್ಡಿ ಹಾಗೂ ರೈತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here