ಕೊಟ್ಟೂರು:ಜೂನ್:09:-ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸಮರ್ಪಕ ಅನುಷ್ಠಾನದ ಕೊರತೆಯಿಂದ ಯೋಜನೆಗಳು ವಿಫಲವಾಗುತ್ತಿವೆ ಎಂಬುದಕ್ಕೆ ಚಪ್ಪರದಹಳ್ಳಿ ಗ್ರಾಮ ಕೂಡ ಒಂದು ಸಾಕ್ಷಿ.
ತಾಲ್ಲೂಕಿನ ಕೆ.ಅಯ್ಯನಹಳ್ಳಿ ಗ್ರಾಮ ಪಂಚಾಯ್ತಿ ಅಡಿಯಲ್ಲಿ ಬರುವ ಚಪ್ಪರದಹಳ್ಳಿ ಗ್ರಾಮದ ಜನಸಂಖ್ಯೆ 2043 ಇದೆ.
ಈ ಗ್ರಾಮದ ಬಗ್ಗೆ ಹೇಳಬೇಕೆಂದರೆ ಇಲ್ಲಿ ಯಾವುದೂ ವ್ಯವಸ್ಥಿತವಾಗಿಲ್ಲ. ಚರಂಡಿಗಳು ಸ್ವಚ್ಛತೆ ಕಾಣದೇ ವರ್ಷಗಳೇ ಉರುಳಿವೆ. ಅದರ ಪರಿಣಾಮ ರಸ್ತೆ ಮೇಲೆಲ್ಲಾ ಗಲೀಜು ನೀರು ಹರಿಯುತ್ತದೆ. ಚರಂಡಿಗಳಿಂದ ಸೊಳ್ಳೆ ಕಾಟ ಹೆಚ್ಚಾಗಿದ್ದು, ಜನ ಬೇಸತ್ತು ಹೋಗಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕಗಳು ತ್ಯಾಜ್ಯದಿಂದ ಸುತ್ತುವರಿದಿವೆ. ಸೂಕ್ತ ನಿರ್ವಹಣೆ ಇಲ್ಲದೇ ಘಟಕ ಮುಚ್ಚಿದೆ. ನೀರಿನ ಸಂಗ್ರಹ ತೊಟ್ಟಿಗಳಿಗೆ ನಳ ಇಲ್ಲದಿರುವುದರಿಂದ ನೀರು ಸದಾ ಹರಿದು ಹೋಗುತ್ತಿರುತ್ತದೆ. ಈ ಕುರಿತು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥ ಶಿವರಾಜ್ ಕರಡಿ
ಶಾಲೆಯ ಆವರಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಅಂಗನವಾಡಿ ಕಟ್ಟಡ ಶಿಥಿಲಗೊಂಡಿದೆ. ಪರಿಸರ ಸರಿಯಿಲ್ಲದ ಕಾರಣ ಮಕ್ಕಳು ಅನಾರೋಗ್ಯಕರ ವಾತಾವರಣದಲ್ಲಿ ಬೆಳೆಯುವಂತಾಗಿದೆ ಎನ್ನುತ್ತಾರೆ ನಾಗರಾಜ್.
ವರದಿ: ಶಿವರಾಜ್ ಕನ್ನಡಿಗ