ಕೊಟ್ಟೂರು:ಜೂನ್:24:-ಸಂವಿಧಾನತ್ಮಕವಾಗಿ ಬೇಡ ಜಂಗಮರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ದೊರಕಿಸಿ ಕೊಡಲು ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ವೀರಶೈವ ಬೇಡ ಜಂಗಮ ಬಾಂಧವರು ನಡೆಸುವ ಹೋರಾಟಕ್ಕೆ ಕೆಲ ಸ್ವಹಿತಾಸಕ್ತಿಗಳು ವಿರೋದಿಸುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಪ್ರತಿಯೊಬ್ಬರಿಗೆ ಅವರ ಹಕ್ಕುಗಳನ್ನು ಪಡೆಯಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಯಾರೊಬ್ಬರು ಯಾರ ಹಕ್ಕನ್ನು ಮೊಟಕುಗೊಳಿಸಲಾಗದು ಎಂದು ಕೆ.ಅಯ್ಯನಹಳ್ಳಿ ಪುರವರ್ಗದ ಮಠಾಧ್ಯಕ್ಷ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕೆ.ಅಯ್ಯನಹಳ್ಳಿ ಹಿರೇಮಠದ ಆವರಣದಲ್ಲಿ ಗುರುವಾರ ಸಂಜೆ ವೀರಶೈವ ಬೇಡ ಜಂಗಮ ಬಾಂಧವರಿಗೆ ಗುರುತಿನ ಚೀಟಿಯನ್ನು ವಿತರಿಸಿ ಅವರು ಮಾತನಾಡಿದರು.
ಬೇಡ ಜಂಗಮ ಹೋರಾಟವನ್ನು ಮತ್ತಷ್ಟು ಪ್ರಜ್ವಲಗೊಳಿಸಲು ಹಿರಿಯ ವಕೀಲ ಬಿ.ಡಿ.ಹಿರೇಮಠ ರವರು ಜೂನ್ 3೦ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೇಡ ಜಂಗಮರ ಸತ್ಯಾ ಪ್ರತಿಪಾದನ ಸತ್ಯಾಗ್ರಹದಲ್ಲಿ ಪ್ರತಿ ಜಂಗಮರು ಪಾಲ್ಗೊಳ್ಳುವ ಮೂಲಕ ಮತ್ತಷ್ಟು ಸರ್ಕಾರದ ಮೇಲೆ ಒತ್ತಡ ಹೇರೋಣ ಈ ಕಾರಣಕ್ಕಾಗಿ ಕೆ.ಅಯ್ಯನಹಳ್ಳಿಯಿಂದ 2೦೦ಕ್ಕೂ ಹೆಚ್ಚು ಜಂಗಮ ಬಾಂಧವರು ಬೆಂಗಳೂರಿಗೆ ತೆರಳಲು ಸಿದ್ದವಾಗಿದ್ದಾರೆ ಎಂದರು.
ವೀರಶೈವ ಬೇಡ ಜಂಗಮ ಕ್ಷೇಮಾಭಿವೃದ್ದಿ ಸಂಘದ ಕೆ.ಅಯ್ಯನಹಳ್ಳಿ ಅಧ್ಯಕ್ಷ ಎಂ.ಜಿ.ಕೊಟ್ರಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವರದಿ: ಶಿವರಾಜ್ ಕನ್ನಡಿಗ