ಕೊಟ್ಟೂರು:ಜೂನ್:28:-ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇತ್ತೀಚೆಗೆ ವೈದ್ಯರ ದರ್ಪ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಸರಿಯಾದ ಸಮಯಕ್ಕೆ ಬರದೇ ತಮಗೆ ಬೇಕಾದ ಅವಧಿಗೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುತ್ತಿದ್ದಾರೆ.
ಸಾರ್ವಜನಿಕರು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಾಗ ಅವರ ಮೇಲೆ ದರ್ಪದಿಂದ ಮಾತನಾಡುವುದು, ಸಿಟ್ಟಾಗುವುದು,ರೇಗಾಡುವುದು ಹೆಚ್ಚಾಗಿದೆ. ಬಂದ ರೋಗಿಗಳನ್ನು ಮಾತನಾಡಿಸುವ ರೀತಿಯೇ ವೈದ್ಯರಿಗೆ ಗೊತ್ತಿಲ್ಲ ಎಂದು ರೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಾ.ಸುಲೋಚನಮ್ಮ ಇವರು ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ತಮ್ಮೆಲ್ಲಾ ಸಿಟ್ಟುಗಳನ್ನು ರೋಗಿಗಳ ಮೇಲೆ ವ್ಯಕ್ತಪಡಿಸುತ್ತಿದ್ದಾರೆಂದು ದೂರುಗಳು ಕೇಳಿಬಂದಿವೆ. ರೋಗಿಗಳು ತಮ್ಮ ಆರೋಗ್ಯದ ಕಾರಣಕ್ಕಾಗಿ ತಪಾಸಣೆಗೆ ಬಂದರೆ ಅವರ ಮೇಲೆಯೇ ರೇಗಾಡುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ವೈದ್ಯರು ರೋಗಿಗಳ ಮೇಲೆ ದಬಾಯಿಸುತ್ತಿರುವುದು ಎಷ್ಟು ಸರಿ? ಡಿ ದರ್ಜೆ ನೌಕರರಿಂದ ಪುಸ್ತಕದಲ್ಲಿ ಎಂಟ್ರಿ ಮಾಡಿಸುತ್ತಿದ್ದಾರೆ. ಕೇಳಿದರೆ ಡಾಕ್ಟರ್ ಹೇಳಿದ್ದನ್ನು ನಾವು ಮಾಡಲೇ ಬೇಕು ಎಂದು ಉತ್ತರಿಸಿದ್ದಾರೆ. ಈ ಹಿಂದೆ ಡಾ.ಸುಲೋಚನಮ್ಮ ಇವರ ಬಗ್ಗೆ ಹಲವಾರು ಬಾರಿ ಪತ್ರಿಕೆಗಳಲ್ಲಿ ಬಂದಿದ್ದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಈ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ಬದ್ಯನಾಯ್ಕ ಅವರನ್ನು ಸಂಪರ್ಕಿಸಿದರೆ, ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆ ಇದ್ದು, ಮಕ್ಕಳ ತಜ್ಞರು, ಪೆಡಿಯಾಟ್ರಿಕ್ಸ್ ಎಸೆನ್ಸಿವ್ನಲ್ಲಿ ಡಾ.ಸುಲೋಚನಮ್ಮ ಅವರು ಬಂದಿದ್ದಾರೆ. ಇರುವ ಒಬ್ಬರೇ ಡಾಕ್ಟರ್ ಕೂಡಾ ಹೋದರೆ ತುಂಬಾ ತೊಂದರೆಯಾಗುತ್ತದೆ ಎಂದು ಉತ್ತರಿಸಿದರು. ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆ ನೀಗಿಸಿಕೊಳ್ಳದೇ ಆಸ್ಪತ್ರೆಗೆ ಬಂದ ರೋಗಿಗಳ ಮೇಲೆ ತಮ್ಮ ಸಿಟ್ಟು ಹೊರಹಾಕುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಡಿ ಗ್ರೂಪ್ ಸಿಬ್ಬಂದಿಗಳಿಂದ ಬರೀ ಸ್ವಚ್ಛತಾ ಕಾರ್ಯವನ್ನು ಮಾತ್ರ ಮಾಡಿಸುವುದು ಇಲಾಖಾ ನಿಯಮ. ಹಾಗಾಗಿ ಅವರನ್ನು ಪುಸ್ತಕ ಬರೆಯುವ ಕೆಲಸಕ್ಕೆ ನೇಮಿಸಿರುವುದಿಲ್ಲ.
-ಆಸ್ಪತ್ರೆಯ ಅಧೀಕ್ಷಕ
ನಾವು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದರೆ ವೈದ್ಯರು ರೇಗಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು
-ಭರಮಪ್ಪ,
(ರೈತ ಸಂಘದ ರಾಜ್ಯ ಉಪಾಧ್ಯಕ್ಷರು)
ವರದಿ: ಶಿವರಾಜ್ ಕನ್ನಡಿಗ