ಸಂಡೂರು:ಜೂನ್:27:-ತಾಲೂಕಿನ ಬಂಡ್ರಿ ಕೆಪಿಎಸ್ ಶಾಲೆಯಲ್ಲಿ ಮಕ್ಕಳು ತಿನ್ನುವ ಅನ್ನ ಹಾಗೂ ಚಿಪ್ಸ್ (ಕುರ್ ಕುರೆ)ನ್ನು ಮಕ್ಕಳಿಗೆ ಮೊದಲು ನೀಡದೇ ತಾವುಗಳೇ ಮೊದಲೇ ಎಲ್ಲವನ್ನು ತೆಗೆದಿಟ್ಟುಕೊಳ್ಳುವ ಶಿಕ್ಷಕರು ಹೆಚ್ಚಾಗಿದ್ದು, ಇದರಿಂದ ಮಕ್ಕಳಿಗೆ ಶಾಲೆಯಲ್ಲಿ ಒಳ್ಳೆಯ ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂದು ಸಾರ್ವಜನಿಕರು,ಮಕ್ಕಳ ಪೋಷಕರು ದೂರಿದ್ದಾರೆ.
ಬಂಡ್ರಿ ಕೆಪಿಎಸ್ ಶಾಲೆಯಲ್ಲಿ ಸರ್ಕಾರದಿಂದ ಮಕ್ಕಳಿಗೆ ಎಲ್ಲಾ ಸೌಲಭ್ಯವನ್ನು ನೀಡುತ್ತಿದೆ, ಆದರೆ ಅದನ್ನು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ತಲುಪಿಸುವ ವ್ಯವಸ್ಥೆಯಲ್ಲಿ ಬಾರಿ ಅನ್ಯಾಯವಾಗುತ್ತಿದೆ.ಇದರ ಬಗ್ಗೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಶ್ರೀಧರ್ ಮೂರ್ತಿಯವರಿಗೆ ಸಾಕ್ಷಿ ಸಮೇತವಾಗಿ ಮಾಹಿತಿಯನ್ನು ನೀಡಿದ್ದರು ಸಹ ಯಾವುದೇ ಕ್ರಮವನ್ನು ಕೈಗೊಂಡಿಲ್ಲವೆಂದು ಸಾರ್ವಜನಿಕರು ತಿಳಿಸಿದರು
ಹಾಗೇ ಸಾರ್ವಜನಿಕರು,ಮಕ್ಕಳ ಪೋಷಕರು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಕರೊನಾ ಸಮಯದಲ್ಲಿನ ಇದೇ 2022ನೇ ವರ್ಷದ ಜನವರಿಯಿಂದ ಮೇ ತಿಂಗಳಿನವರೆಗೆ ಮಕ್ಕಳಿಗೆ ಕೊಡುವ ರೇಷನ್ ಪದಾರ್ಥಗಳಾದ ಅಕ್ಕಿ-ಬೇಳೆ- ಎಣ್ಣೆ-ಉಪ್ಪು ಹಾಲಿನಪುಡಿ ಸೇರಿದಂತೆ ಒಟ್ಟು 41 ದಿನಗಳ ರೇಷನ್ ಸುಮಾರು 75 ಚೀಲ ಅಕ್ಕಿ(50 ಕೆಜಿ ತೂಕದ್ದು) ಬೇಳೆ,ಉಪ್ಪು, ಎಣ್ಣೆ, ಹಾಲಿನಪುಡಿ ಪಾಕೇಟ್ ಮಕ್ಕಳಿಗೆ ಕೊಡದೇ ಹಾಗೇ ಶಾಲೆಯಲ್ಲಿ ಇಟ್ಟುಕೊಂಡು ಮುಗ್ದ ಮಕ್ಕಳಿಗೆ,ಇಲಾಖೆಗೆ ಹಾಗೂ ಸರ್ಕಾರಕ್ಕೆ ದ್ರೋಹ ಮಾಡಿದ್ದಾರೆ.ರೇಷನ್ ನ್ನು ಮಕ್ಕಳಿಗೆ ಕೊಡದೇ ಹಾಗೇ ಇಟ್ಟುಕೊಂಡಿರುವುದಾದರ ಮೂಲ ಉದ್ದೇಶವಾದರು ಏನಿರಬಹುದು.!?
ಈ ಕೆಪಿಎಸ್ ಶಾಲೆಯ ಮಕ್ಕಳಿಗೆ ರೇಷನ್ ಹಂಚಿಕೆಯ ಜವಾಬ್ದಾರಿಯನ್ನು ಯಾವ ಶಿಕ್ಷಕರಿಗೆ ವಹಿಸಿದ್ದರು, ಅ ಜವಾಬ್ದಾರಿಯನ್ನು ವಹಿಸಿಕೊಂಡ ಶಿಕ್ಷಕರು ಯಾರು.? ಹಾಗೂ ಜನವರಿ ತಿಂಗಳಿನಿಂದ ನಾವು ಎಲ್ಲಾ ಮಕ್ಕಳಿಗೆ ರೇಷನ್ ಹಂಚಿದ್ದೇವೆ ಎಂದು ಅಕ್ಷರ ದಾಸೋಹ ಇಲಾಖೆಗೆ ಪ್ರತಿನಿತ್ಯ ಕಳುಹಿಸುವ ಮೆಸೇಜ್ ನ್ನು ಸಹ ಕಳುಹಿಸಿದ್ದಾರೆ ಇದರಿಂದ ಇಲಾಖೆಗೆ ತಪ್ಪು ಮಾಹಿತಿಯನ್ನು ನೀಡಿ ತಪ್ಪೆಸಗಿದ್ದಾರೆ. ಇದರ ಬಗ್ಗೆ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ.
ದಿನಾಂಕ:22.06.2022ರಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀಧರ್ ಮೂರ್ತಿ ಯವರು ಶಾಲೆಗೆ ಭೇಟಿಯನ್ನು ನೀಡಿ ಪರಿಶೀಲನೆಯನ್ನು ಮಾಡಿದ್ದು ಉಳಿದ ರೇಷನ್ ನ್ನು ಮಕ್ಕಳಿಗೆ ಯಾವ ಕಾರಣಕ್ಕಾಗಿ ನೀಡಿಲ್ಲ ಎಂದು ಸ್ಪಷ್ಟವಾದ ಸ್ಪಸ್ಟಿಕರಣವನ್ನು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡದೇ ಸಂಬಂಧಪಟ್ಟ ಶಿಕ್ಷಕರ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳದೇ ಬಿಇಓ, ಡಿಡಿಪಿಐ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಯವರಿಗೆ ಮಾಹಿತಿ ಹಾಗೂ ವರದಿಯನ್ನು ಒಪ್ಪಿಸದೇ ಇರುವುದು ನೋಡಿದರೇ ಈ ಪ್ರಕರಣವನ್ನು ಮುಚ್ಚಿಹಾಕಲು ಮೀನಮೇಷ ಮಾಡುತ್ತಿದ್ದಾರೆಂಬ ಗುಮಾನಿಯು ಅನುಮಾನಕ್ಕೆ ಆಸ್ಪದ ಹೆಡೆ ಮಾಡಿಕೊಡುತ್ತಿದೆ.
ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀಧರ್ ಮೂರ್ತಿಯನ್ನು ಈ ವಿಷಯದ ಸಂಪರ್ಕಿಸಿ ಮಾತನಾಡಿಸಿದಾಗ, ಶಾಲೆಯಲ್ಲಿ 41 ದಿನಗಳ ರೇಷನ್ ನ್ನು ನೀಡದೇ ಹಾಗೆಯೇ ರೂಮಿನಲ್ಲಿ ಇಟ್ಟಿರುವುದು ನನ್ನ ಗಮನಕ್ಕೆ ಬಂದಿದೆ ಖುದ್ದು ನಾನೇ ಹೋಗಿ ಪರಿಶೀಲನೆ ಮಾಡಿದ್ದೇನೆ, ಎಂದು ಹೇಳುತ್ತಾರೆ.ಆದರೆ ಸಂಬಂದಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುತ್ತಿಲ್ಲ, ಇದರಿಂದ ತಪ್ಪಿತಸ್ಥರನ್ನು ಬಚಾವ್ ಮಾಡುವ ಉದ್ದೇಶದಿಂದ ಮೌನವಹಿಸಿದ್ದಾರೆ.
ರೇಷನ್ ಶಾಲೆಗೆ ಸರಬರಾಜಾಗಿ 6 ತಿಂಗಳಾಗಿದ್ದು ಅವು ಮಕ್ಕಳಿಗೆ ಹಂಚಿಕೆ ಮಾಡಲು ಯೋಗ್ಯವಾಗಿವೆಯಾ..? ಅವುಗಳ ಗುಣಮಟ್ಟವನ್ನು ಆರೋಗ್ಯ ಇಲಾಖೆಯವರಿಂದ ಪರಿಶೀಲಿಸಿ ಹಂಚಿಕೆಯನ್ನು ಮಾಡಬೇಕಾಗುತ್ತದೆ, ಯೋಗ್ಯವಲ್ಲದ ಧಾನ್ಯಗಳನ್ನು ಮಕ್ಕಳಿಗೆ ಹಂಚಿಕೆ ಮಾಡಿದರೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮವಾಗಬವುದು ಅ ನಿಟ್ಟಿನಲ್ಲಿ ಸಂಬಂಧಪಟ್ಟ ಡಿಡಿಪಿಐ, ತಹಶೀಲ್ದಾರರು, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಪಂಚಾಯಿತಿ ಇಓ, ಖುದ್ದು ಕೆಪಿಎಸ್ ಪ್ರೌಢ ಶಾಲೆಗೆ ಭೇಟಿ ನೀಡಿ ಮುಖ್ಯಗುರುಗಳು ಮತ್ತು ರೇಷನ್ ಹಂಚಿಕೆಯನ್ನು ಮಾಡಲು ಜವಾಬ್ದಾರಿಯನ್ನು ವಹಿಸಿಕೊಂಡ ಶಿಕ್ಷಕರ ಮೇಲೆ KCSR ನಿಯಮಗಳಾನುಸಾರ ಸೂಕ್ತ ಕ್ರಮವನ್ನು ಕೈಗೊಡು ಅವರನ್ನು ಸೇವೆಯಿಂದ ವಜಮಾಡಿ ಮುಗ್ದ ಮಕ್ಕಳಿಗೆ ರೇಷನ್ ಸಿಗುವಂತಾಗಲು ನ್ಯಾಯ ದೊರಕಿಸಿಕೊಡಬೇಕೆಂದು ಸಾರ್ವಜನಿಕರು ಮತ್ತು ಮಕ್ಕಳ ತಂದೆ/ತಾಯಿಗಳ/ಪೋಷಕರು ಅಗ್ರಹವಾಗಿದೆ.
ಆದರೆ ದಿನಾಂಕ:06.07.2022 ರಂದು ಬುಧವಾರ ಏಕಾಏಕಿ ಶಾಲೆಯ ಮುಖ್ಯಗುರುಗಳು, ಪ್ರಾಂಶುಪಾಲರು ಸೇರಿಕೊಂಡು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಆಹಾರ ಇಲಾಖೆಯಿಂದ ಸ್ಟಾಕ್ ಇಟ್ಟಂತಹ ರೇಷನ್ ನ ಗುಣಮಟ್ಟ ಪರೀಕ್ಷೆಯ ದೃಡೀಕರಣ ಪತ್ರ ಬರೋದಿಕ್ಕು ಮುಂಚೆ ಸಂಬಂದಪಟ್ಟ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೂ ತರದೆ ಮಾಹಿತಿಯನ್ನು ನೀಡದೇ ಸಿಕ್ಕ ಸಿಕ್ಕ ಮಕ್ಕಳಿಗೆ ಸಿಕ್ಕಷ್ಟು ರೇಷನ್ ಕೊಟ್ಟು ಕಳಿಸಿರುವುದು ನೋಡಿದರೆ ನಾವು ಎಲ್ಲರೂ ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂಬ ಭಯದಲ್ಲಿ ಹಂಚಿಕೆ ಮಾಡಿಬಿಟ್ಟಿದ್ದಾರೆ
ಹಾಗಾದರೆ ಅಕ್ಷರ ದಾಸೋಹದ ಅಧಿಕಾರಿಗಳು ಬಂದು ನಾಮಕಾವಸ್ಥೆ ತನಿಖೆಯನ್ನು ಮಾಡಿ ವರದಿಯನ್ನು ಮಾಡಿಕೊಂಡು ಹೋಗಿದ್ದು ಜನರ ಕಣ್ಣಿಗೆ ಮಣ್ಣೆರಚುವ ಸಲುವಾಗಿನಾ.?
5 ತಿಂಗಳ ರೇಷನ್ ಮಕ್ಕಳಿಗೆ ಹಂಚಿಕೆ ಮಾಡದೆ ಗುಪ್ತವಾಗಿ ಇಟ್ಟಿರುವವರ ಮೇಲೆ ಯಾವ ಕ್ರಮವನ್ನು ಕೈಗೊಳ್ಳದೇ ಇರುವುದು ನಿಗೂಢ ರಹಸ್ಯವಾಗಿದೆ