ಧಾರವಾಡ:ಆ.07: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಅಂಜುಮನ್ ಪ್ರೌಢಶಾಲೆಯಲ್ಲಿ ಇಂದು (ಆ.6) ವಿದ್ಯಾರ್ಥಿಗಳಿಗೆ ಕೈ ತೊಳೆದುಕೊಳ್ಳುವ ವಿಧಾನಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಜಿಲ್ಲಾ ಆರ್.ಸಿ.ಹೆಚ್.ಒ ಅಧಿಕಾರಿ ಡಾ.ಎಸ್.ಎಂ ಹೊನಕೇರಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಊಟಕ್ಕೆ ಮೊದಲು ಹಾಗೂ ಶೌಚದ ನಂತರ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು. ಎರಡು ಕೈಗಳನ್ನು ನೀರಿನಿಂದ ಒದ್ದೆ ಮಾಡಿ, ಸಾಬೂನು ಹಚ್ಚಬೇಕು. ಕೈಯನ್ನು ಅಂಗೈ ಒಂದರ ಮೇಲೊಂದಿಟ್ಟು ಸೋಪಿನ ನೊರೆಯೊಂದಿಗೆ ಉಜ್ಜಬೇಕು. ಅಂಗೈಗಳನ್ನು ಹಿಂದು ಮುಂದು ಮಾಡಿ ಮತ್ತು ಬೆರಳುಗಳ ಮಧ್ಯೆ ಉಜ್ಜಬೇಕು. ಉಗುರುಗಳನ್ನು ಇನ್ನೊಂದು ಹಸ್ತಕ್ಕೆ ತಾಕಿಸಿ ಉಜ್ಜಿ, ಎರಡು ಕೈಗಳ ಮಣಿಕಟ್ಟುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಎರಡು ಕೈಗಳನ್ನು ಸಂಪೂರ್ಣವಾಗಿ ನೀರಿನಿಂದ ತೊಳೆದುಕೊಂಡು ಸ್ವಚ್ಛ ಮಾಡಿಕೊಳ್ಳಬೇಕು ಎಂದು ಕೈ ತೊಳೆಯುವ ವಿಧಾನಗಳ ಕುರಿತು ಪ್ರಾತ್ಯಕ್ಷತೆ ಮಾಡಿ ತೋರಿಸಿದರು. ವೈಯಕ್ತಿಕ ಸ್ವಚ್ಛತೆ ಬಗ್ಗೆ ವಿವರವಾಗಿ ತಿಳಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳು, ಇತರ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.