ಡಿಕೆಶಿ ಅಂದ್ರೆ ಖುಷಿ ಆಗ್ತಾರೆ ಅಮಿತ್ ಷಾ?

0
169

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಾಡಿದ ಒಂದು ಮಾತು ಪಕ್ಷದಲ್ಲಿ ತಳಮಳವೆಬ್ಬಿಸಿದೆ.
ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸದಸ್ಯರು ಮತ್ತು ಮಂಡಲ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಸಂತೋಷ್ ಒಂದು ಗಂಭೀರ ವಿಷಯವನ್ನು ಹೇಳಿದರಂತೆ.
ಇವತ್ತಿನ ಸ್ಥಿತಿಯಲ್ಲಿ ವಿಧಾನಸಭೆ ಚುನಾವಣೆ ನಡೆದರೆ ನಾವು ಎಂಭತ್ತರಿಂದ ಎಂಭತ್ತೈದು ಕ್ಷೇತ್ರಗಳಲ್ಲಿ ಗೆಲುವು ಗಳಿಸಬಹುದು.ಹೀಗಾಗಿ ನೀವೆಲ್ಲ ಮತ್ತಷ್ಟು ಶ್ರಮ ವಹಿಸಿ ಕೆಲಸ ಮಾಡಿದರೆ ಪಕ್ಷ ನೂರು ಸೀಟುಗಳ ಗಡಿ ದಾಟಬಹುದು ಎಂಬುದು ಸಂತೋಷ್ ಅವರ ಮಾತು.
ಅರ್ಥಾತ್,ಎಷ್ಟೇ ಪ್ರಯತ್ನಿಸಿದರೂ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವ ಇಚ್ಚೆ ರಾಜ್ಯದ ಬಹುತೇಕ ಮತದಾರರಿಗಿಲ್ಲ.ಹೀಗಾಗಿ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ನಾವು ಹರಸಾಹಸ ಮಾಡಬೇಕು ಎಂಬುದು ಸಂತೋಷ್ ಅವರ ಇಂಗಿತ.
ಯಾವಾಗ ಅವರು ಈ ಮಾತುಗಳನ್ನಾಡಿದರೋ?ಇದಾದ ನಂತರ ಬೂದಿ ಮುಚ್ಚಿದ ಕೆಂಡದಂತಿದ್ದ ಒಂದು ವಿಷಯ ಪುನ: ಮೇಲಕ್ಕೆ ಬಂದಿದೆ.ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರಿಗೆ ಈ ಕುರಿತು ವಿವರಿಸಬೇಕು ಎಂಬ ಆಕಾಂಕ್ಷೆ ಯಡಿಯೂರಪ್ಪ ಅವರ ಬೆಂಬಲಿಗರಲ್ಲಿ ಬಂದಿದೆ.
ಅದೆಂದರೆ,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಸ್ಪರ್ಧಿಸುವಂತೆ ನೋಡಿಕೊಳ್ಳಬೇಕು ಎಂಬುದು.
ಅಂದ ಹಾಗೆ ಯಡಿಯೂರಪ್ಪ ಅವರು ಪದೇ ಪದೇ,ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುತ್ತಿದ್ದಾರೆ.ಮತ್ತು ತಾವು ಪ್ರತಿನಿಧಿಸುತ್ತಿದ್ದ ಷಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಬಿಟ್ಟುಕೊಟ್ಟ ಅಂಶವನ್ನು ನೆನಪಿಸುತ್ತಿದ್ದಾರೆ.
ಹಾಗಂತ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸಾಹ ಯಡಿಯೂರಪ್ಪ ಅವರಲ್ಲಿ ಬತ್ತಿ ಹೋಗಿದೆ ಎಂದಲ್ಲ.ಎಷ್ಟೇ ಆದರೂ ಅವರದು ನಿವೃತ್ತಿ ಬಯಸುವ ಮನ:ಸ್ಥಿತಿಯಲ್ಲ.ಇದನ್ನೇ ಅವರ ಪುತ್ರಿ ಅರುಣಾದೇವಿ ಸೂಚ್ಯವಾಗಿ ಹೇಳಿದ್ದಾರೆ.ತಮ್ಮ ತಂದೆ ಯಾವ ಸಪೋರ್ಟೂ ಇಲ್ಲದೆ ಪಟಪಟನೆ ಸ್ಟೇರ್ ಕೇಸ್ ಹತ್ತುತ್ತಾರೆ.ಸದಾ ಕಾಲ ಚಟುವಟಿಕೆಯಿಂದಿರುತ್ತಾರೆ ಎಂದಿದ್ದಾರೆ.
ಇದರರ್ಥ ಬೇರೇನೂ ಅಲ್ಲ,ರಾಜಕಾರಣದಲ್ಲಿ‌ ಕ್ರಿಯಾಶೀಲರಾಗಿರಲು ತಮ್ಮ ತಂದೆ ಶಕ್ತರಿದ್ದಾರೆ ಎಂಬುದು ಅರುಣಾದೇವಿ ಅವರ ಮಾತಿನ ಅರ್ಥ.
ಆದರೆ ಇದಕ್ಕಿರುವ ಒಂದೇ ಅಡ್ಡಿ ಎಂದರೆ ಪ್ರಧಾನಿ ನರೇಂದ್ರಮೋದಿ ಮತ್ತು ಅಮಿತ್ ಷಾ.ಎಪ್ಪತ್ತೈದರ ಗಡಿ ದಾಟಿದವರು ಎಂಬ ಕಾರಣಕ್ಕಾಗಿ ತಾನೇ ಅವರು ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದು?ಇದೇ ಅಂಶ ಟಿಕೆಟ್ ವಿಷಯದಲ್ಲೂ ಲಾಗು ಆಗುತ್ತದೆ.ಇದು ಯಡಿಯೂರಪ್ಪ ಅವರಿಗೂ ಗೊತ್ತು.ಹೀಗಾಗಿ ಅವರು ಬಾಯಿ ಬಿಟ್ಟು ಟಿಕೆಟ್ ಕೇಳುತ್ತಿಲ್ಲ.ಆದರೆ ಮೋದಿ-ಅಮಿತ್ ಷಾ ಜೋಡಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೂಚನೆ ನೀಡಿದರೆ ನಿಶ್ಚಿತವಾಗಿ ಯಡಿಯೂರಪ್ಪ ಫೀಲ್ಡಿಗಿಳಿಯುತ್ತಾರೆ.
ಆದರೆ ಮೋದಿ-ಅಮಿತ್ ಷಾ ಇಂತಹ ಮಾತುಗಳನ್ನು ಹೇಳುವ ಮುನ್ನ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಒಂದು ಕ್ಷೇತ್ರವನ್ನು ನಿಗದಿ ಮಾಡಿ ಯಡಿಯೂರಪ್ಪ ಅವರಿಗೆ ಗ್ರೀನ್ ಸಿಗ್ನಲ್ ನೀಡಬೇಕಾಗುತ್ತದೆ.ಯಾಕೆಂದರೆ ನೀವು ಇಲ್ಲವೇ ನಿಮ್ಮ ಪುತ್ರ ಕಣಕ್ಕಿಳಿಯಬೇಕು ಅಂತ ಮೋದಿ-ಅಮಿತ್ ಷಾ ಈ ಹಿಂದೆಯೇ ಹೇಳಿದ್ದಾರೆ.ಮತ್ತು ಈ ಮಾತಿನ ಆಧಾರದ ಮೇಲೆಯೇ ಯಡಿಯೂರಪ್ಪ ಅವರು ತಮ್ಮ ಪುತ್ರನಿಗೆ ಷಿಕಾರಿಪುರ ಕ್ಷೇತ್ರದ ಟಿಕೆಟು ಕೊಡಿ ಎಂದಿದ್ದಾರೆ.
ಹೀಗೆ ಆಗಿರುವ ಬೆಳವಣಿಗೆಯನ್ನು ಬದಲಿಸಬೇಕು ಎಂದರೆ ಮೋದಿ-ಅಮಿತ್ ಷಾ ಜೋಡಿಯ ತೀರ್ಮಾನ ಬದಲಾಗಬೇಕು.ಅಂದ ಹಾಗೆ ನೀವು ಸ್ಪರ್ಧಿಸಿ ಅಂತ ಯಡಿಯೂರಪ್ಪ ಅವರಿಗೆ ಹೇಳುವ ಮೊದಲು ವಿಜಯೇಂದ್ರ ಅವರ ಭವಿಷ್ಯವನ್ನೂ‌ನಿರ್ಧಾರ ಮಾಡಬೇಕು.ಕುತೂಹಲದ ಸಂಗತಿ ಎಂದರೆ ಇಂತಹ ಸನ್ನಿವೇಶ ಎದುರಾಗಬಹುದು ಎಂಬ ಕಾರಣಕ್ಕಾಗಿ ಯಡಿಯೂರಪ್ಪ ಅವರ ಬೆಂಬಲಿಗರು ವಿಜಯೇಂದ್ರ ಅವರಿಗೆ‌ ಕ್ಷೇತ್ರಗಳನ್ನು ಹುಡುಕಿಟ್ಟಿದ್ದಾರೆ.
ಅರಸೀಕೆರೆ,ಗುಂಡ್ಲುಪೇಟೆ,ಹನೂರು,ಗುಬ್ಬಿ,ಚಾಮರಾಜನಗರ ಸೇರಿದಂತೆ ಲಿಂಗಾಯತರ ಪ್ರಾಬಲ್ಯವಿರುವ ಯಾವುದಾದರೂ ಒಂದು ಕ್ಷೇತ್ರದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ಕೊಟ್ಟರೂ ಸಾಕು ಎಂಬುದು ಯಡಿಯೂರಪ್ಪ ಬೆಂಬಲಿಗರ ವಾದ.
ಯಾವಾಗ ಸಂತೋಷ್ ಅವರು ತುಮಕೂರಿನ ಸಭೆಯಲ್ಲಿ,ನಾವು ಎಂಭತ್ತರಿಂದ ಎಂಭತ್ತೈದು ಸೀಟುಗಳನ್ನು ಮಾತ್ರ ಗೆಲ್ಲಬಹುದು ಎಂದು ಹೇಳಿದರೋ?ಇದಾದ ನಂತರ ಈ ಬೆಂಬಲಿಗರು,ಚುನಾವಣೆಯಲ್ಲಿ ಯಡಿಯೂರಪ್ಪ ಸ್ಪರ್ಧಿಸಿದರೆ ಬಿಜೆಪಿ ಹೆಚ್ಚುವರಿಯಾಗಿ ಇಪ್ಪತ್ತೈದು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಅಂತ ವಾದಿಸತೊಡಗಿದ್ದಾರೆ.
ಯಡಿಯೂರಪ್ಪ ಸ್ಪರ್ಧಿಸುವುದಿಲ್ಲ ಎಂಬ ಕಾರಣಕ್ಕಾಗಿ ಇವತ್ತು ಲಿಂಗಾಯತ ಮತಗಳು ಪಲ್ಲಟಗೊಳ್ಳುತ್ತಿವೆ.ಆದರೆ ಯಡಿಯೂರಪ್ಪ ಅವರ ಸ್ಪರ್ಧೆ ನಿಶ್ಚಿತವಾದರೆ ಈ ಮತಗಳು ಮತ್ತೆ ಕನ್ ಸಾಲಿಡೇಟ್ ಆಗುತ್ತವೆ ಎಂಬುದು ಈ ಬೆಂಬಲಿಗರ ವಾದ.
ಪರಿಣಾಮ?ಸಧ್ಯದಲ್ಲೇ ಈ ಕುರಿತ ಪ್ರಪೋಸಲ್ಲು ಮೋದಿ-ಅಮಿತ್ ಷಾ ಕಿವಿಗೆ ತಲುಪಲಿದೆ.ಮುಂದೇನಾಗುತ್ತದೋ ಗೊತ್ತಿಲ್ಲ.ಆದರೆ ಯಡಿಯೂರಪ್ಪ ಮರಳಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಬಿಜೆಪಿಯ ಗ್ರಾಫು ಮೇಲಕ್ಕೇರುವುದು ಖಚಿತ.

ಡಿಕೆಶಿ ಅಂದ್ರೆ ಅಮಿತ್ ಶಾಗೇಕೆ ಖುಷಿ?

ಇನ್ನು ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಡಾಂತರ ಎದುರಿಸಲಿದ್ದಾರೆ ಅಂತ ಲೆಕ್ಕ ಹಾಕಿದವರಿಗೆ ನಿರಾಶೆ ಆಗಿದೆಯಂತೆ.
ಅಂದ ಹಾಗೆ ಇತ್ತೀಚಿನವರೆಗೆ ಡಿಕೆಶಿಗೆ ಮೇಲಿಂದ ಮೇಲೆ ದಿಲ್ಲಿಯ ಕಿರಿಕಿರಿ ಆಗುತ್ತಿದ್ದುದೇನೋ ನಿಜ.ಆದರೆ ಬರಬರುತ್ತಾ ಇದು ಅತಿಯಾಗಲಿದೆ,ಡಿಕೆಶಿ ಇಕ್ಕಳಕ್ಕೆ ಸಿಲುಕುತ್ತಾರೆ ಅಂತ ಭಾವಿಸಿದ್ದ ಡಿಕೆಶಿ ವಿರೋಧಿಗಳಿಗೆ ಮರ್ಮಾಘಾತವಾಗುವಂತಹ ಸುದ್ದಿ ತಲುಪಿದೆ.
ಕುತೂಹಲದ ಸಂಗತಿ ಎಂದರೆ ಡಿಕೆಶಿ ವಿರೋಧಿಗಳಿಗೆ ಈ ಆಘಾತಕಾರಿ ಸಂಗತಿಯನ್ನು ಹೇಳಿದವರು ಒಬ್ಬ ಮಾಜಿ ಮುಖ್ಯಮಂತ್ರಿ.
ಏನು ಸಾರ್?ಡಿ.ಕೆ.ಶಿವಕುಮಾರ್ ವಿಷಯದಲ್ಲಿ ಏನಾದ್ರೂ ಡೆವಲಪ್ ಮೆಂಟ್ ಇದೆಯಾ?ಅವರನ್ನು ಕಟ್ಟಿ ಹಾಕಿದ್ರೆ ಹಳೆ ಮೈಸೂರು ಭಾಗದಲ್ಲಿ ನಿಮ್ಮ ಪಕ್ಷಕ್ಕೆ ಅನುಕೂಲ ಎಂಬ ಲೆಕ್ಕಾಚಾರ ಇತ್ತಲ್ಲ?ಅಂತ ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರು ಈ ಮಾಜಿ ಮುಖ್ಯಮಂತ್ರಿಗಳನ್ನು ಕೇಳಿದರಂತೆ.
ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಈ ಮಾಜಿ ಮುಖ್ಯಮಂತ್ರಿಗಳು,ನಾವೂ ಹಾಗೆಯೇ ತಿಳಿದುಕೊಂಡಿದ್ವಿ.ಆದರೆ ಮೊನ್ನೆ ನಮ್ಮ ನಾಯಕರೊಬ್ಬರು ಅಮಿತ್ ಷಾ ಅವರಿಗೆ ರಿಪೋರ್ಟು ಕೊಡಲು ಹೋಗಿದ್ದರು.ಹೋದಾಗ ಹಳೆ ಮೈಸೂರು ಭಾಗದ ವಿವರ ಕೊಡುತ್ತಾ ಡಿ.ಕೆ.ವೇಗವನ್ನು ತಡೀಬೇಕು ಸಾರ್ ಎಂದಿದ್ದಾರೆ.
ಆದರೆ ಅವರ ಮಾತನ್ನು ಅಮಿತ್ ಷಾ ಕೇಳಿಯೂ ಕೇಳದವರಂತೆ,ಔರ್ ಕ್ಯಾ ಇನ್ ಫರ್ಮೇಸನ್ ಹೈ?ಅಂತ ಕೇಳಿದರಂತೆ.
ಇವರು ಹೇಳಬೇಕಾದ್ದನ್ನೆಲ್ಲ ಹೇಳಿದ ಮೇಲೆ ಪುನ: ಡಿ.ಕೆ ವಿಷಯ ಪ್ರಸ್ತಾಪಿಸಿದ್ದಾರೆ.
ಆದರೆ ಆ ಬಗ್ಗೆ ಆಸಕ್ತಿ ತೋರದ ಅಮಿತ್ ಷಾ,ಆ ವಿಷಯ ಬಿಡಿ.ಹಳೆ‌ಮೈಸೂರು ಭಾಗದಲ್ಲಿ ಗೆಲ್ಲೋಕೆ ಅವರನ್ನೇಕೆ ತಡೆಯಬೇಕು?ಉಸ್ ಕೋ ಛೋಡ್ ದೋ,ನಮಗೆ ಬೇರೆ ದಾರಿಗಳಿವೆ ಎಂದರಂತೆ.
ಇದ್ದಕ್ಕಿದ್ದಂತೆ ಡಿಕೆಶಿ ವಿಷಯದಲ್ಲಿ ಅಮಿತ್ ಷಾ ಅವರೇಕೆ ನಿರಾಸಕ್ತಿ ತೋರುತ್ತಿದ್ದಾರೋ ಗೊತ್ತಿಲ್ಲ.ಆದರೆ ಮುಂದಿನ ದಿನಗಳಲ್ಲಿ ಡಿಕೆಶಿಗೆ ತೊಂದರೆಯಾಗುವಂತೆ ಕಾಣುತ್ತಿಲ್ಲ ಅಂತ ಈ ಮಾಜಿ ಮುಖ್ಯಮಂತ್ರಿಗಳು ವಿವರಿಸಿದಾಗ ಆ ಕಾಂಗ್ರೆಸ್ ನಾಯಕರು ಪೆಚ್ಚಾದರಂತೆ.

ಗಾಂಧಿನಗರದ ಮೇಲೆ ಸಂತೋಷ್ ಕಣ್ಣು?

ಈ ಮಧ್ಯೆ ಬೆಂಗಳೂರಿನ ಗಾಂಧಿನಗರ ಸೇರಿದಂತೆ ಕೆಲ ಕಾಂಗ್ರೆಸ್ ಕ್ಷೇತ್ರಗಳ ಮೇಲೆ ಸಂತೋಷ್ ಕಣ್ಣು ಬಿದ್ದಿದೆ.
ಅನಂತಕುಮಾರ್ ಅವರ ಕಾಲದಿಂದಲೂ ಈ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ಮಾಡಿಕೊಳ್ಳುತ್ತಿರುವ ಒಳಹೊಂದಾಣಿಕೆಗಳೇ‌ ಕಾಂಗ್ರೆಸ್ ಗೆಲುವಿಗೆ ಕಾರಣವಾಗುತ್ತಿವೆ ಎಂಬುದು ಸಂತೋಷ್ ಅವರ ಸಿಟ್ಟು.
ಹೀಗಾಗಿ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ದಿನೇಶ್ ಗುಂಡೂರಾವ್ ಅವರನ್ನು ಸೋಲಿಸಲು ಸಂಘ ಪರಿವಾರದ ಕಟ್ಟಾ ಕಾರ್ಯಕರ್ತ ಎ.ಎಲ್.ಶಿವಕುಮಾರ್ ಅವರನ್ನು ಕಣಕ್ಕಿಳಿಸಲು ಸಂತೋಷ್ ಬಯಸಿದ್ದಾರಂತೆ.
ಅಂದ ಹಾಗೆ ಎ.ಎಲ್.ಶಿವಕುಮಾರ್ ಅವರಿಗೆ ಹಣ ಬಲವಿಲ್ಲ ಎಂಬುದೇನೋ ನಿಜ.ಆದರೆ ಕ್ಷೇತ್ರದಲ್ಲಿ ಅವರಿಗೆ ದೊಡ್ಡ ಸೈಜಿನ‌ ಜನಬಲವಿದೆ.ಹೀಗಾಗಿ ಅವರ ಬೆನ್ನ ಹಿಂದೆ ನಿಲ್ಲಲು ಸಂತೋಷ್ ನಿರ್ಧರಿಸಿದ್ದಾರೆ.
ಈ ಮಧ್ಯೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಯಡಿಯೂರಪ್ಪ ಅವರ ಬೆಂಬಲದಿಂದ ಗಾಂಧಿನಗರದ ಟಿಕೆಟ್ ಪಡೆಯುವ ಕನಸು ಕಾಣುತ್ತಿದ್ದರೆ,ಸಪ್ತಗಿರಿಗೌಡರು ಸಚಿವರಾದ ಅಶೋಕ್ ಮತ್ತು ಅಶ್ವಥ್ಥನಾರಾಯಣ ಅವರ ಬೆಂಬಲದಿಂದ ಸೀಟು ಪಡೆಯುವ ಕನಸು ಕಾಣುತ್ತಿದ್ದಾರೆ.
ಉಳಿದಂತೆ ಜಯನಗರ ಮತ್ತಿತರ ಕ್ಷೇತ್ರಗಳ ಮೇಲೂ ಸಂತೋಷ್ ಕಣ್ಣು ಬಿದ್ದಿದೆ.ಅಂದ ಹಾಗೆ ಬೆಂಗಳೂರಿನಲ್ಲಿ ಇಪ್ಪತ್ತು ಕ್ಷೇತ್ರಗಳನ್ನು ಗೆಲ್ಲಬೇಕು ಅಂತ ಅಮಿತ್ ಷಾ ನಿಗದಿ ಮಾಡಿರುವ ಗುರಿ ಏನಿದೆ?ಇದನ್ನು ಸಾಧಿಸಬೇಕೆಂದರೆ ಬಿಜೆಪಿ ನಾಯಕರು ಕಾಂಗ್ರೆಸ್ ಜತೆ ನಡೆಸುತ್ತಿರುವ ಹೊಂದಾಣಿಕೆಗೆ ಬ್ರೇಕ್ ಬೀಳಬೇಕು ಎಂಬುದು ಸಂತೋಷ್ ಯೋಚನೆ.

ಫೀಲ್ಡಿಗಿಳಿದ ಕೆಸಿಆರ್ ಪಡೆ

ಇನ್ನು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರ ಪಡೆ ಕರ್ನಾಟಕದ ಫೀಲ್ಡಿಗಿಳಿದಿದೆ.
ಹೈದ್ರಾಬಾದ್-ಕರ್ನಾಟಕ ಭಾಗದ ಇಪ್ಪತ್ತಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಹೋರಾಡುವುದು ಈ ಪಡೆಯ ಉದ್ದೇಶ.
ಹೀಗಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಸಿಆರ್ ಸಂಪುಟದ ಒಬ್ಬ ಸಚಿವರು ಇಲ್ಲವೇ ಟಿ.ಆರ್.ಎಸ್ ಪಕ್ಷದ ಪ್ರಬಲ ಶಾಸಕರು ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗಾಗಿ ಕೆಸಿಆರ್ ಒದಗಿಸಿದ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಲಿರುವ ಈ ಸಚಿವರು ಮತ್ತು ಶಾಸಕರು ಈಗಾಗಲೇ‌ ಒಂದು ಮಟ್ಟದಲ್ಲಿ ಹವಾ ಎಬ್ಬಿಸಿದ್ದಾರೆ.
ಅಂದ ಹಾಗೆ ಕರ್ನಾಟಕದ ರಾಜಕಾರಣದಲ್ಲಿ ಗಣನೀಯ ಪಾತ್ರ ವಹಿಸಲು ಬಯಸಿದ್ದ ಕೆ.ಸಿ.ಚಂದ್ರಶೇಖರರಾವ್ ಅವರು ಅಸೆಂಬ್ಲಿ ಎಲೆಕ್ಷನ್ನಿನಲ್ಲೇ ಜೆಡಿಎಸ್-ಟಿ.ಆರ್.ಎಸ್ ನಡುವೆ ಮೈತ್ರಿ ಏರ್ಪಡಲಿ.ನಮಗೂ ಇಪ್ಪತ್ತು,ಮೂವತ್ತು ಕ್ಷೇತ್ರಗಳನ್ನು ಕೊಡಿ ಅಂತ ಕುಮಾರಸ್ವಾಮಿ ಅವರ ಮುಂದೆ ಪ್ರಸ್ತಾಪವಿಟ್ಟಿದ್ದರಂತೆ.
ಆದರೆ ಇಂತಹ ಮೈತ್ರಿಕೂಟ ಸ್ಪರ್ಧೆಗಿಳಿದರೆ ಭಾಷಾ ವಿಚಾರ ಮೇಲಕ್ಕೆ ಬಂದು ಸಮಸ್ಯೆಯಾಗಬಹುದು ಅಂತ ಕುಮಾರಸ್ವಾಮಿ ವಿವರಿಸಿದರಂತೆ.
ಆದರೆ ಈ ರೀತಿ ಮೈತ್ರಿ ಬ್ಯಾಡ್ವೇ ಬ್ಯಾಡ ಎಂದರೆ ಚಂದ್ರಶೇಖರರಾವ್ ಬೇಸರ ಮಾಡಿಕೊಳ್ಳುವುದಿಲ್ಲವೇ?ಹೀಗಾಗಿ ಬೇರೆ ಪ್ರಪೋಸಲ್ಲು ಮುಂದಿಟ್ಟ ಕುಮಾರಸ್ವಾಮಿ ಪರಿಸ್ಥಿತಿಯನ್ನು ತಿಳಿಯಾಗಿಸಿದರಂತೆ.
ಸಾರ್,ಹೇಗಿದ್ದರೂ ಮುಂದಿನ ವರ್ಷ ಪಾರ್ಲಿಮೆಂಟಿಗೆ ಚುನಾವಣೆ ನಡೆಯುತ್ತದೆ.ನೀವು ಕಟ್ಟಿರುವ ಬಿ.ಆರ್.ಎಸ್ ವತಿಯಿಂದ ಕರ್ನಾಟಕದ ಆರು ಕ್ಷೇತ್ರಗಳಲ್ಲಿ ಕ್ಯಾಂಡಿಡೇಟುಗಳನ್ನು ಕಣಕ್ಕಿಳಿಸಿ.ನಮ್ಮ-ನಿಮ್ಮ ಶಕ್ತಿ ಸೇರಿದರೆ ಬೀದರ್,ಗುಲ್ಬರ್ಗ ಸೇರಿದಂತೆ ಆರು ಕ್ಷೇತ್ರಗಳನ್ನು ಗೆಲ್ಲುವುದು ಕಷ್ಟವಲ್ಲ.ಎಲ್ಲಕ್ಕಿಂತ ಮುಖ್ಯವಾಗಿ ನಿಮಗೆ ಬೇಕಿರುವುದು ಪಾರ್ಲಿಮೆಂಟ್ ಪವರ್ ಅಲ್ಲವೇ?ಅಂತ ಕುಮಾರಸ್ವಾಮಿ ಹೇಳಿದಾಗ ಕೆಸಿಆರ್ ಫುಲ್ಲು ಖುಷಿಯಾದರಂತೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here