ಅಗತ್ಯ ವಸ್ತು, ಆಹಾರ ಸಾಮಗ್ರಿಗಳ ಅಕ್ರಮ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ -ಮಹಾಂತೇಶ್ ಬೀಳಗಿ

0
125

ದಾವಣಗೆರೆ : ಕೋವಿಡ್ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮೇ. 12 ರವರೆಗೆ ಕಠಿಣ ನಿರ್ಬಂಧಗಳನ್ನು ಹೇರಿದ್ದು, ಪರಿಸ್ಥಿತಿಯ ದುರ್ಬಳಕೆಗೆ ಜನರಿಗೆ ಅಗತ್ಯವಿರುವ ದಿನಬಳಕೆ ವಸ್ತುಗಳು, ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರನ್ನು ಪತ್ತೆಹಚ್ಚಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಕೋವಿಡ್ ಸಂಬಂಧಿಸಿದಂತೆ ಸರ್ಕಾರದ ನೂತನ ಮಾರ್ಗಸೂಚಿ ಹಾಗೂ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೋವಿಡ್‍ನ 2ನೇ ಅಲೆ ನಿಯಂತ್ರಿಸಿ, ಸೋಂಕು ವ್ಯಾಪಕವಾಗಿ ಹರಡುವ ಚೈನ್‍ಲಿಂಕ್ ಮುರಿಯಲು, ಸರ್ಕಾರ ಮೇ. 12 ರವರೆಗೆ ಕಠಿಣ ನಿರ್ಬಂಧ ವಿಧಿಸಿದೆ, ಅಲ್ಲದೆ ಜಿಲ್ಲೆಯಾದ್ಯಂತ ಕಲಂ 144 ರನ್ವಯ ನಿಷೇಧಾಜ್ಞೆ, ನಿತ್ಯ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 06 ರವರೆಗೆ ಕಫ್ರ್ಯೂ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ದಿನಬಳಕೆಯ ಅಗತ್ಯ ವಸ್ತು, ಆಹಾರ ಸಾಮಗ್ರಿ, ತರಕಾರಿ ಹೂವು ಹಣ್ಣು ಇತ್ಯಾದಿಗಳನ್ನು ಖರೀದಿಸಲು ಬೆಳಿಗ್ಗೆ 06 ರಿಂದ 10 ರವರೆಗೆ ಅವಕಾಶ ಕಲ್ಪಿಸಿದೆ. ಆದರೆ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಳ್ಳಲು ದಿನಬಳಕೆ ವಸ್ತುಗಳು, ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರನ್ನು ಪತ್ತೆಹಚ್ಚುವ ಸಲುವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ಈಗಾಗಲೆ ರಚಿಸಲಾಗಿದ್ದು, ಕಾಳದಂಧೆಕೋರರನ್ನು ಪತ್ತೆಹಚ್ಚಿ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.

ಕೋವಿಡ್ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜು :

ಜಿಲ್ಲೆಯಲ್ಲಿ ಕೋವಿಡ್ ಗೆ ಸಂಬಂಧಿಸಿದಂತೆ ಸದ್ಯ ಜನರು ಭಯ ಬೀಳುವ ಪರಿಸ್ಥಿತಿ ಇಲ್ಲ. ಕೋವಿಡ್ ನಿರ್ವಹಣೆಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸಜ್ಜಾಗಿವೆ. ಕೋವಿಡ್ ಕೇರ್ ಸೆಂಟರ್ ಕೂಡ ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ 1766 ಸಕ್ರಿಯ ಪ್ರಕರಣಗಳಿದ್ದು, ಬೆಡ್ ವ್ಯವಸ್ಥೆ, ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಯಾವುದೇ ಸಮಸ್ಯೆ ಇಲ್ಲ. ಹೆಚ್ಚಿನ ಪ್ರಮಾಣದಲ್ಲಿ ಕೇಸ್ ಬಂದರೂ, ನಿರ್ವಹಣಿಸುವ ರೀತಿಯಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಚಾಚುತಪ್ಪದೆ ಪಾಲಿಸುವ ಮೂಲಕ ಕೋವಿಡ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಸಹಕರಿಸಬೇಕು ಎಂದರು.

ಮಾರ್ಗಸೂಚಿ ಜನರಿಗೆ ತೊಂದರೆ ಕೊಡಲು ಅಲ್ಲ :

ಕೋವಿಡ್ ಸಾಂಕ್ರಾಮಿಕ ಸೋಂಕು ರೋಗ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಹಾಗೂ ಸೋಂಕು ಹರಡುವ ಸರಪಳಿಯನ್ನು ಮುರಿಯಲು, ಸಾರ್ವಜನಿಕರ ಓಡಾಟ, ಜನಸಂದಣಿಯನ್ನು ತಡೆಗಟ್ಟುವ ಸಲುವಾಗಿಯೇ ಸರ್ಕಾರ ಕಠಿಣ ನಿರ್ಬಂಧಗಳನ್ನು ವಿಧಿಸಿ ಮೇ. 12 ರವರೆಗೆ ಅನ್ವಯವಾಗುವಂತೆ ಮಾರ್ಗಸೂಚಿಯನ್ನು ಹೊರಡಿಸಿದೆ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಸಾರ್ವಜನಿಕರಿಗೆ ತೊಂದರೆ ಕೊಡಲು ಅಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ವಿನಾಕಾರಣ ಹೊರಗಡೆ ಓಡಾಡಿ, ಜನರಿಗೆ ಹಾಗೂ ತಮ್ಮ ಕುಟುಂಬಕ್ಕೆ ತಾವೇ ಕಂಟಕ ತಂದುಕೊಳ್ಳಬಾರದು. ಸಾರ್ವಜನಿಕರು ತಪ್ಪದೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹೆಚ್ಚು ಹೆಚ್ಚು ಜನ ಒಂದೆಡೆ ಸೇರಬಾರದು. ಮದುವೆಗಳಲ್ಲಿ 50 ಜನಕ್ಕಿಂತ ಹೆಚ್ಚು ಸೇರಬಾರದು. ಅಧಿಕಾರಿಗಳು ಮದುವೆ ನಡೆಯುವ ಸ್ಥಳಕ್ಕೆ ತೆರಳಿ, ವಿಡಿಯೋ ಮಾಡಿಕೊಂಡು, ಉಲ್ಲಂಘನೆ ಕಂಡುಬಂದಲ್ಲಿ, ಕರ್ನಾಟಕ ಸಾಂಕ್ರಾಮಿಕ ರೋಗ ನಿರ್ವಹಣಾ ಕಾಯ್ದೆಯಡಿ ಎಫ್‍ಐಆರ್ ದಾಖಲಿಸುವರು ಅಲ್ಲದೆ, ದಂಡವನ್ನೂ ವಿಧಿಸುವರು. ಹೀಗಾಗಿ ಯಾರೂ ಕಾನೂನು ಉಲ್ಲಂಘನೆ ಮಾಡುವ ದುಸ್ಸಾಹಸಕ್ಕೆ ಕೈಹಾಕಬೇಡಿ, ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರೂ ಕೂಡ ಸಹಕರಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಗ್ರಾಮಗಳಲ್ಲಿ ಡಂಗುರ :

ಕೋವಿಡ್ ಸೋಂಕು ಹೆಚ್ಚು ಇರುವ ರಾಜ್ಯ, ಜಿಲ್ಲೆಗಳಿಂದ ನಿಮ್ಮ ಊರಿಗೆ, ಓಣಿಗೆ, ಮನೆ ಪಕ್ಕಕ್ಕೆ ಯಾರಾದರೂ ಬಂದಿದ್ದಲ್ಲಿ, ಅಂತಹವರಲ್ಲಿ ರೋಗ ಲಕ್ಷಣಗಳಿರುವುದು ಕಂಡುಬಂದಲ್ಲಿ ಕೂಡಲೆ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಅಂತಹವರಿಗೆ ಕೋವಿಡ್ ಟೆಸ್ಟ್ ಮಾಡಿ, ಅಗತ್ಯ ಚಿಕಿತ್ಸೆ ಕೊಡಲಾಗುವುದು. ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸಬೇಕು’ ಎಂಬುದಾಗಿ ಈಗಾಗಲೆ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಡಂಗುರ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಕೃಷಿ ಚಟುವಟಿಕೆಗೆ ಗ್ರೀನ್ ಪಾಸ್ :

ಮೇ. 12 ರವರೆಗೆ ಕಠಿಣ ನಿರ್ಬಂಧ ಜಾರಿಯಾಗಿರುವುದರಿಂದ ರೈತರಿಗೆ ಕೃಷಿ ಚಟುವಟಿಕೆ, ಕೃಷಿ ಪರಿಕರಗಳ ಲಭ್ಯತೆ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ವಸ್ತುಗಳ ಸೇವೆಯಡಿ ಕೃಷಿ ಪರಿಕರಗಳಾದ ಬಿತ್ತನೆಬೀಜ, ಗೊಬ್ಬರ, ಪೀಡೆನಾಶಕ, ಕೃಷಿ ಯಂತ್ರೋಪಕರಣಗಳು ಸೇರಿರುವುದರಿಂದ, ರೈತ ಸಂಪರ್ಕ ಕೇಂದ್ರಗಳು, ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಸುರಕ್ಷಿತಾ ಕ್ರಮಗಳನ್ನು ಪಾಲಿಸಿ, ಅಗತ್ಯ ಪರಿಕರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೃಷಿ ಪರಿಕರ ವಿತರಣೆಗಾಗಿ ಗ್ರೀನ್ ಪಾಸ್ (ಅನುಮತಿ ಪತ್ರ ) ಗಳನ್ನು ಅಗತ್ಯವಿದ್ದಲ್ಲಿ ಅಧಿಕೃತ ಮಾರಾಟಗಾರರು, ವಿತರಕರಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ನೀಡಿರುವ ಸೂಚನೆಗಳು ಹಾಗೂ ಸುರಕ್ಷಿತಾ ಕ್ರಮಗಳನ್ನು ಉಲ್ಲಂಘಿಸುವ ಮಾರಾಟಗಾರರು, ವಿತರಕರ ಪರವಾನಗಿ ಅಮಾನತುಗೊಳಿಸುವುದು ಅಥವಾ ರದ್ದುಗೊಳಿಸಲು ಕ್ರಮ ವಹಿಸಲಾಗುವುದು ಎಂದು ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹೇಳಿದರು.

ಕಟ್ಟಡ ಕಾರ್ಮಿಕರಿಗೆ ಅವಕಾಶ :

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಮಾತನಾಡಿ, ಮೇ. 12 ರವರೆಗಿನ ನಿರ್ಬಂಧಿತ ಅವಧಿಯಲ್ಲಿ ಕಟ್ಟಡ ಕಾರ್ಮಿಕರು, ಸರ್ಕಾರಿ ರಸ್ತೆ, ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು ತಮ್ಮ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಲಾಗುವುದು. ಅಂತಹ ಕಾರ್ಮಿಕರು ಕಟ್ಟಡ ಕಾಮಗಾರಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದಿರುವ ಅನುಮತಿ ಪತ್ರದ ದಾಖಲೆ ಪ್ರತಿ ಹೊಂದಿರಬೇಕು. ಸರ್ಕಾರಿ ರಸ್ತೆ, ಕಟ್ಟಡ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು, ಆಯಾ ಕಾಮಗಾರಿ ಟೆಂಡರ್ ಗುತ್ತಿಗೆ ಪಡೆದಿರುವವರು ಹೊಂದಿರುವ ಕಾರ್ಯಾದೇಶ ಪತ್ರದ ಪ್ರತಿ ದಾಖಲೆ ತೋರಿಸಿದಲ್ಲಿ ಕಾರ್ಮಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ಕೃಷಿ, ತೋಟಗಾರಿಕೆ ಉತ್ಪನ್ನಗಳು, ಕೃಷಿ ಪರಿಕರಗಳ ಸಾಗಾಣಿಕೆಗೆ ಯಾವುದೇ ಅಡ್ಡಿ ಇರುವುದಿಲ್ಲ. ವಿದೇಶಕ್ಕೆ ಅಥವಾ ಬೇರೆ ರಾಜ್ಯಗಳಿಗೆ ಪ್ರಯಾಣಿಸುವವರು ಸಂಬಂಧಪಟ್ಟ ಟಿಕೇಟ್ ಹೊಂದಿರಬೇಕು. ಮೆಡಿಕಲ್, ಇಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕಾಲೇಜುಗಳ ಬೊಧಕರು ಆನ್‍ಲೈನ್‍ನಲ್ಲಿ ಪಾಠ ಮಾಡುವ ಸಲುವಾಗಿ ಕಾಲೇಜುಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗುವುದು, ಇದಕ್ಕಾಗಿ ಅವರು ಸಂಬಂಧಪಟ್ಟ ಸಂಸ್ಥೆಯಿಂದ ಪಡೆದಿರುವ ಅನುಮತಿ ಮತ್ತು ಗುರುತಿನ ಪತ್ರವನ್ನು ತೋರಿಸಬೇಕಾಗುತ್ತದೆ ಎಂದರು. ಕೋವಿಡ್ ಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಈ ಬಾರಿ ಯಾವುದೇ ಪಾಸ್ ನೀಡುವ ವ್ಯವಸ್ಥೆ ಇರುವುದಿಲ್ಲ. ಆಸ್ಪತ್ರೆ, ಕಾರ್ಖಾನೆ ಮತ್ತಿತರ ಸೇವೆಗೆ ಅಡ್ಡಿ ಇರುವುದಿಲ್ಲ. ಎಪಿಎಂಸಿ ವ್ಯಾಪ್ತಿಯಲ್ಲಿ ಟ್ರೇಡಿಂಗ್ ಲೋಡಿಂಗ್, ಅನ್‍ಲೋಡಿಂಗ್ಗೆ ಅವಕಾಶ ಕಲ್ಪಿಸಲಾಗುವುದು. ಅನಾವಶ್ಯಕವಾಗಿ ಓಡಾಟ ಮಾಡುವವರು, ವಾಹನಗಳಲ್ಲಿ ಸಂಚರಿಸುವವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗ ನಿರ್ವಹಣಾ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಇಂತಹ ಕ್ರಮಕ್ಕೆ ಅವಕಾಶ ನೀಡದೆ, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಆರ್‍ಟಿಒ ಶ್ರೀಧರ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ದೂಡಾ ಆಯುಕ್ತ ಕುಮಾರಾಸ್ವಾಮಿ, ಆಹಾರ ಇಲಾಖೆ ಜಂಟಿನಿರ್ದೇಶಕ ಮಂಟೆಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here