ದಾವಣಗೆರೆ ಸೆ.23: ದಾವಣಗೆರೆ ಜಿಲ್ಲೆ ಹಳೇಬಾತಿ ಗ್ರಾಮದ ಎಸ್.ಡಿ.ಎಂ.ಸಿ ಸಮಿತಿಯವರು, ಸರ್ಕಾರಿ ಶಾಲೆ ಸುತ್ತ-ಮುತ್ತ ಜಾಲಿ ಗಿಡಗಳು ಬೆಳೆದಿರುವುದರಿಂದ ಶಾಲೆಯ ಒಳಗೆ ಹಾವುಗಳು ಬರುತ್ತಿವೆ ಎಂದು ಲೋಕಸಭಾ ಸದಸ್ಯರಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಗುರುವಾರದಂದು ಹಳೇಬಾತಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಶಾಲಾ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಕೊಡಲು ತಹಶೀಲ್ದಾರ್ ಅವರಿಗೆ ಸೂಚಿಸಿದರು. ಹಾಗೂ ಅಲ್ಲಿನ ಮಕ್ಕಳೂಂದಿಗೆ ಚರ್ಚಿಸಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪರಿಶೀಲಿಸಿದರು.
ಶಾಲಾ ಶಿಕ್ಷಕರು ಪ್ರಸ್ತುತ ಕಾಲ ಮಾನಕ್ಕೆ ತಕ್ಕಂತೆ ಮಕ್ಕಳಿಗೆ ಇಂಗ್ಲೀಷ್ ಶಿಕ್ಷಣದ ಜ್ಞಾನ, ಬೋಧನೆ ಹಾಗೂ ವ್ಯಾಕರಣ ಕಲಿಕೆ ಅತ್ಯಗತ್ಯವಾಗಿದ್ದು, ಇಂಗ್ಲೀಷ್ ಶಿಕ್ಷಕರು ಮಕ್ಕಳಿಗೆ ಕನ್ನಡ ಭಾಷೆಯ ಜೊತೆಜೊತೆಗೆ ಇಂಗ್ಲೀಷ್ ಭಾಷೆಯಲ್ಲಿಯೂ ಪಾಠಗಳನ್ನು ಬೋಧಿಸಬೇಕು ಎಂದರು.
ಶಾಲಾ ಕಾಂಪೌಂಡ್ ಅಳತೆ ಮತ್ತು ದುರಸ್ಥಿ ಕಾರ್ಯ ತಕ್ಷಣ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆಯಲ್ಲಿ ಡಿಡಿಪಿಐ ಪರಮೇಶ್ವರಪ್ಪ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್, ಹಾಗೂ ಶಾಲೆಯ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.