ಮಂಡ್ಯ.ಡಿ 02- ಸರ್ಕಾರದ ಆದೇಶದನ್ವಯ ವಯಸ್ಸಾದ, ಅನುತ್ಪಾದಕ ರೋಗಗ್ರಸ್ತ, ಪ್ರಕೃತಿಯು ವಿಕೋಪ ಗಳಿಂದ ಅಂಗವಿಕಲತೆಗೆ ಒಳಗಾಗಿರುವ ಬೀಡಾಡಿ ಜಾನುವಾರಗಳ ಪುನರ್ವಸತಿಗಾಗಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆಯೊಂದನ್ನು ಸ್ಥಾಪಿಸಲು ಕ್ರಮವಹಿಸಬೇಕಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು
ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ಜಾರಿಗೊಳಿಸಿರುವುದರಿಂದ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ನಿರ್ಮಿಸಲು ರೂ 48.38 ಲಕ್ಷಗಳನ್ನು ನಿಗದಿಪಡಿಸಲಾಗಿದೆ ಎಂದರು.
ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾಹಿತಿ ಪಡೆದು ಗೋಶಾಲೆ ನಿರ್ಮಾಣಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಶಿಫಾರಸ್ಸು ಮಾಡಿದರು.
ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಚಟುವಟಿಕೆಗಳು ತಾಲೂಕು ಮಟ್ಟದಲ್ಲಿ ಜಾಗೃತಿ ಮೂಡಿಸಲು ಶಾಲಾ ಮಕ್ಕಳಿಗೆ ಬಹುಮಾಧ್ಯಮ ಜಾಗೃತಿ ಅಭಿಯಾನ ವಿಚಾರ ಸಂಕಿರಣದ ಮೂಲಕ ಪ್ರಾಣಿಗಳಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿಸಬೇಕು ಎಂದರು.
ನರೇಗಾ ಯೋಜನೆಯಡಿಯಲ್ಲಿ ಗರಿಷ್ಠ ಪ್ರಮಾಣ ಕಾಮಗಾರಿ ಕೈಗೊಂಡು ನೀರಿನ ತೊಟ್ಟಿ ಮಾಡುವುದು, ಶೇಖರಣೆ ಮಾಡುವುದು, ದನದ ಕೊಟ್ಟಿಗೆ, ಕೃಷಿಹೊಂಡ ಮೇವು ಉತ್ಪಾದನೆ ಇತ್ಯಾದಿ ಯೋಜನೆಗಳನ್ನು ಒಮ್ಮುಖ ಗೊಳಿಸುವ ಬಗ್ಗೆ ಜಿಲ್ಲಾ ಪಂಚಾಯಿತಿ ಮತ್ತು ಇತರೆ ಏಜೆನ್ಸಿ ಗಳೊಂದಿಗೆ ಸಮಾಲೋಚಿಸಬೇಕು ಎಂದರು.
ಸಭೆಯಲ್ಲಿ ಪಶುಪಾಲನ ಇಲಾಖೆಯ ಉಪನಿರ್ದೇಶಕರಾದ ಡಾ. ಮಂಜುನಾಥ್ ಮತ್ತು ಪಶುಪಾಲನ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.