ಬಳ್ಳಾರಿ, ಡಿ.04 : ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಜಿಲ್ಲಾ ವಕೀಲರ ಸಭಾಂಗಣದಲ್ಲಿ ವಕೀಲರ ದಿನವನ್ನು ಶುಕ್ರವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್.ಪುಷ್ಪಾಂಜಲಿದೇವಿ ಅವರು ಮಾತನಾಡಿ,
ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡವರು ಹೆಚ್ಚು ಹೆಚ್ಚು ಅಧ್ಯಯನಶೀಲರಾಗಿ ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು. ಅಂದಾಗ ಮಾತ್ರ ಕಕ್ಷಿದಾರನಿಗೆ ನ್ಯಾಯ ಕೊಡಿಸಲು ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಭಾರತದ ಪ್ರಥಮ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಮೊದಲು ವಕೀಲ ವೃತ್ತಿ ಯನ್ನು ಪ್ರಾರಂಭಿಸಿ ನ್ಯಾಯವಾದಿಗಳಾಗಿ ಸೇವೆ ಮಾಡಿದ ನೆನಪಿಗಾಗಿ ಅವರ ಜನ್ಮದಿನವನ್ನು ವಕೀಲರ ದಿನವನ್ನು ಆಚರಿಸಲಾಗುತ್ತಿದೆ.ಸಂವಿಧಾನದ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ ರವರು ಒಬ್ಬ ವಕೀಲರಾಗಿ ಸೇವೆ ಮಾಡಿದ ನಾಡಿನಲ್ಲಿ ನಾವು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನಾವು ನೀವೆಲ್ಲರೂ ಧನ್ಯರು ಮತ್ತು ಹೆಮ್ಮೆಯ ಸಂಗತಿ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಯರ್ರೇಗೌಡ ಅವರು ಮಾತನಾಡಿ ಹಿರಿಯ ಕಿರಿಯ ನ್ಯಾಯವಾದಿಗಳು ಹೊಸ ಹೊಸ ಬಗೆಯ ಪ್ರಕರಣಗಳನ್ನು ಅಧ್ಯಯನ ಮಾಡಬೇಕು ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಭಾಗಿಯದಾಗ ಮಾತ್ರ ಸ್ವಾಸ್ಥ್ಯ ಸಮಾಜವನ್ನು ಕಟ್ಟಬಹುದು ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ನಾಗರಾಜ್ ನಾಯಕ್, ಕಾರ್ಯದರ್ಶಿ ರವೀಂದ್ರ ನಾಥ್, ಜಂಟಿ ಕಾರ್ಯದರ್ಶಿ ತ್ರಿವೇಣಿ ಪತ್ತಾರ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ.ಟಿ.ಆರ್.ವಿಜಯ್ ಕುಮಾರ್, ಮುರುಳಿ ಮೋಹನ್ ನ್ಯಾಯವಾದಿಗಳು ಭಾಗವಹಿಸಿದ್ದರು. ವೀರೇಶ ವಂದಿಸಿದರು.