ವಿಜಯನಗರ:28:-ಕೊಟ್ಟೂರು ಪಟ್ಟಣದ ರೇಣುಕ ಬಡಾವಣೆಯ ಎಸ್.ಬಿ.ಐ ಬ್ಯಾಂಕಿನ ಹಿಂಬಾಗದ ಮನೆಯ ನಿವಾಸಿ ವಕೀಲ ಸಿದ್ದೇಶ ಅವರ ಮನೆಗೆ ಬುಧವಾರ ರಾತ್ರಿ ಕಳ್ಳರು ನುಗ್ಗಿ 3.50 ಲಕ್ಷ ರೂ ನಗದು, 8 ಗ್ರಾಂ ಚಿನ್ನ, 5 ತೊಲ ಬೆಳ್ಳಿಯನ್ನು ಕದ್ದು ಪಲಾಯನ ಗೈದಿರುವ ಘಟನೆ ನಡೆದಿದೆ.
ವಕೀಲ ಸಿದ್ದೇಶ ಮೂಲತಃ ಹರಾಳು ಗ್ರಾಮದವರಾಗಿದ್ದು ಅವರು ಮತ್ತು ಕುಟುಂಬದವರು ಮನೆಗೆ ಬೀಗ ಹಾಕಿ ಊರಿಗೆ ಹೋಗಿರುವುದನ್ನು ಮನಗಂಡ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
ಇದೇ ಕಳ್ಳರು ಎಸ್.ಬಿ.ಐ ಬ್ಯಾಂಕ್ನಲ್ಲಿನ ಶಂಕ್ರಿ ಭದ್ರಿ ಮನೆಗೂ ನುಗ್ಗಿ ಅಲ್ಲಿಯೂ ಸಹ ಬೆಳ್ಳಿ ಚೈನು ಮತ್ತು ನಗದು 7ರಿಂದ 8 ಸಾವಿರ ರೂಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಮನೆ ನಿವಾಸಿ ಬದ್ರಿ ಪತ್ರಿಕೆಗೆ ತಿಳಿಸಿದ್ದಾರೆ. ಇವರ ಮನೆಯವರು ಸಹ ಹೊರ ಊರಿಗೆ ಹೋಗಿದ್ದರಿಂದ ಬೀಗ ಹಾಕಲಾಗಿತ್ತು ಎಂದು ಹೇಳಲಾಗಿದೆ.
ಕಳ್ಳತನದ ವಿಷಯ ತಿಳಿಯುತ್ತಿದ್ದಂತೆ ಕೊಟ್ಟೂರು ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿ, ಶ್ವಾನದಳ ತಂಡವನ್ನು ಕರೆಸಿಕೊಂಡು ಕಳ್ಳರ ಚಲನವಲನಗಳ ಗುರ್ತು ಕಾರ್ಯ ಕೈಗೊಂಡರು. ಪೊಲೀಸ್ ಶ್ವಾನಗಳು ಮುನಿ ಮಿರ್ಚಿ ಹೋಟಲ್ ಪಕ್ಕದ ಎಟಿಎಂ ತನಕ ಬಂದು ಹೋಗಿವೆ ಎಂದು ಗೊತ್ತಾಗಿದೆ. ಡಿವೈಎಸ್ಪಿ ಜಿ.ಹರೀಶ,ಸರ್ಕಲ್ ಇನ್ಸ್ಪೆಕ್ಟರ್ ಸೋಮಶೇಖರ್ ಎಚ್.ಕೆಂಚಾರೆಡ್ಡಿ,ಸಬ್ಇನ್ಸ್ಪೆಕ್ಟರ್ ವಿಜಯಕೃಷ್ಣ ಆಗಮಿಸಿ ಕಳ್ಳತನವಾದ ಸ್ಥಳವನ್ನು ಪರಿಶೀಲಿಸಿದರು.
ವರದಿ: ಶಿವರಾಜ್ ಗಡ್ಡಿ