ವರ್ಷ ಕಳೆದರೂ ಬೊಮ್ಮಾಯಿಗೆ ಹರ್ಷವಿಲ್ಲ

0
101

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ನೆಮ್ಮದಿ ಕಳೆದುಕೊಂಡಿದ್ದಾರೆ.
ಹಿಂದೂ‌ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಅವರ ನೆಮ್ಮದಿಯನ್ನು ಕಸಿದುಕೊಂಡಿದೆ ಅಂತ ಮೇಲ್ನೋಟಕ್ಕೆ ಅನ್ನಿಸಿದರೂ ಆಳದ ಕಾರಣಗಳು ಬೇರೆಯೇ‌ ಇವೆ.
ಅಂದ ಹಾಗೆ ಅಧಿಕಾರಕ್ಕೆ ಬಂದಾಗಿನಿಂದ ಬೊಮ್ಮಾಯಿ ಅವರು ತಮ್ಮ ಪದಚ್ಯುತಿಯ ಮಾತುಗಳನ್ನು ಕೇಳುತ್ತಲೇ ಇದ್ದಾರೆ.
ತಮ್ಮ ಕೆಲಸಗಳಾಗುತ್ತಿಲ್ಲ ಎಂದು ಪಕ್ಷದ ಶಾಸಕರು ಅಸಮಾಧಾನ ತೋಡಿಕೊಳ್ಳಲು ಶುರು ಮಾಡಿದ ನಂತರ ಇಂತಹ ಮಾತುಗಳು ನಿರಂತರವಾಗಿ ಕೇಳುತ್ತಲೇ ಬಂದವು.
ಒಂದು ಹಂತದಲ್ಲಿ ಬೊಮ್ಮಾಯಿ ಅವರ ಅನ್ನು ಬದಲಿಸಲು ಆರೆಸ್ಸೆಸ್ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಶಿಫಾರಸು ಮಾಡಿದರೆಂಬ ವಿಷಯ ಭಾರೀ ಕುತೂಹಲ ಕೆರಳಿಸಿತ್ತು.
ಆದರೆ ಈ ಕುರಿತು ತಮಗೆ ಬಂದ ಶಿಫಾರಸನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪಲಿಲ್ಲ ಎಂಬಲ್ಲಿಗೆ ಬೊಮ್ಮಾಯಿ ಬದಲಾವಣೆಯ ಮಾತುಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು.
ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರಕ್ಕೆ ಒಂದು ವರ್ಷ ಪೂರ್ಣವಾಗುವ ಸಂದರ್ಭದಲ್ಲಿ ಜನೋತ್ಸವ ಕಾರ್ಯಕ್ರಮ ನಡೆಸಲು ಬೊಮ್ಮಾಯಿ ನಿರ್ಧರಿಸಿದ್ದರು.
ಆದರೆ ಅವರ ನಿರ್ಧಾರದ ಬೆನ್ನಲ್ಲಿ ಅವರೇ ಊಹಿಸದಂತಹ ಬೆಳವಣಿಗೆಗಳು ನಡೆಯತೊಡಗಿದವು.
ಈ ಎಲ್ಲ ಬೆಳವಣಿಗೆಗಳ ಮೂಲದಲ್ಲಿ, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಹುದ್ದೆಯಿಂದ ಇಳಿಸಬೇಕು ಎಂಬುದೊಂದೇ‌ ಮುಖ್ಯ ಉದ್ದೇಶವಾಗಿತ್ತು.

ಅಂದ ಹಾಗೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬೇಕಿಲ್ಲ ಅಂತ ಖುದ್ದು ಪ್ರಧಾನಿಯವರೇ ಬಯಸಿದರೂ ಅದನ್ನು ಒಪ್ಪದ ಒಂದು ಗುಂಪು ಕರ್ನಾಟಕದಲ್ಲಿ ಸಕ್ರಿಯವಾಗಿದೆ.
ಈ ಗುಂಪಿಗೆ ದೆಹಲಿಯಿಂದಲೇ ಶಕ್ತಿ ತುಂಬುವ ವ್ಯಕ್ತಿಗಳೂ ಇದ್ದಾರೆ.
ಏನೇ ಇರಲಿ,ಆದರೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ನಮ್ಮದಲ್ಲ ಎಂಬುದು ಈ ಗುಂಪಿನ ಭಾವನೆ.
ಕಾಂಗ್ರೆಸ್ ಮತ್ತು ಜನತಾಪರಿವಾರಗಳಿಂದ ಬಂದವರು ಸರ್ಕಾರದ ಮೇಲೆ ಅಧಿಪತ್ಯ ಸ್ಥಾಪಿಸಿರುವಾಗ ಅದು ಹೇಗೆ ತಮ್ಮ ಸರ್ಕಾರವಾಗುತ್ತದೆ?
ಎಷ್ಟೇ ಆದರೂ ಕಾಂಗ್ರೆಸ್ ಮತ್ತು ಜನತಾಪರಿವಾರಗಳಿಂದ ಬಂದವರು ದಶಕಗಳ ಕಾಲ ಸೆಕ್ಯುಲರಿಸಂ ಮಂತ್ರ ಜಪಿಸುತ್ತಾ ಬಂದವರು.
ಅಂತವರು ಈಗ ಬಿಜೆಪಿಗೆ ಬಂದು ಅಧಿಕಾರ ಹಿಡಿದ ಕೂಡಲೇ ಹಿಂದೂಪರ‌ ನೀತಿಗೆ ಅಂಟಿಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ಗುಂಪಿನ ದೂರು.
ಯಾವಾಗ ಸುಳ್ಯದ ಬೆಳ್ಳಾರೆಯಲ್ಲಿ ಹಿಂದೂ‌ ಕಾರ್ಯಕರ್ತ ಪ್ರವೀಣ್ ನೆಟ್ಟರು ಹತ್ಯೆಯಾಯಿತೋ?ಇದಾದ ನಂತರ ಈ ಗುಂಪು ಎದ್ದು ಕುಳಿತು ಬಿಟ್ಟಿದೆ.
ನಾವು ಹೇಳುತ್ತಾ ಬಂದಿದ್ದು ನಿಜ ಅಲ್ವಾ?ಪ್ರವೀಣ್ ಹತ್ಯೆಯ ನಂತರ ಹಂತಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದರ ಜತೆಗೆ,ಹಿಂದೂ ವಿರೋಧಿ ಶಕ್ತಿಗಳು ಹೆದರುವ ಸ್ಥಿತಿಯನ್ನು ಸೃಷ್ಟಿಸಬೇಕಿತ್ತು
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂತಹ ಕೆಲಸ ಮಾಡುತ್ತಿದ್ದಾರೆ.
ಹೀಗಾಗಿ ನಮಗೂ ಉತ್ತರ ಪ್ರದೇಶ ಮಾದರಿಯ ಸರ್ಕಾರ ಬೇಕು.ಅದಾಗಬೇಕೆಂದರೆ ಮೊದಲು ಬೊಮ್ಮಾಯಿ ಅವರನ್ನು ಬದಲಿಸಬೇಕು ಎಂದು ಈ ಗುಂಪು ಪ್ರತಿಪಾದಿಸತೊಡಗಿತು.
ಕುತೂಹಲದ ಸಂಗತಿ ಎಂದರೆ ಈ ಮಾತು ಕೇಳುತ್ತಿರುವಾಗಲೇ ರಾಜ್ಯ ಬಿಜೆಪಿ ಪಾಳೆಯದಲ್ಲಿ ಮತ್ತೊಂದು ಸುದ್ದಿ ಹರಿದಾಡತೊಡಗಿದೆ.
ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆಗಳ ಮೇಲೆ‌ ಕಣ್ಣಿಟ್ಟಿರುವ ಸಂಘ ಪರಿವಾರದ ಪ್ರಮುಖರಾದ ಮುಕುಂದ್,ತಿಪ್ಪೇಸ್ವಾಮಿ,ನಾಗರಾಜ್ ಅವರೆಲ್ಲ ಸಭೆ ನಡೆಸಿ,ಬೊಮ್ಮಾಯಿ ದಕ್ಷರಲ್ಲ.ಹೀಗಾಗಿ ಅವರನ್ನು ಕೆಳಗಿಳಿಸಿ ಎಂದು ವರಿಷ್ಟರಿಗೆ ಸಂದೇಶ ರವಾನಿಸಿದ್ದಾರೆ ಎಂಬುದು ಈ ಸುದ್ದಿ.

ಇದರ ಮಧ್ಯೆ ಎಬಿವಿಪಿ ಸೇರಿದಂತೆ ಹಿಂದೂ ಪರ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಲು ಶುರು ಮಾಡಿದ್ದನ್ನು ಕರ್ನಾಟಕ ಮಾತ್ರವಲ್ಲ,ಇಡೀ ದೇಶವೇ ನಿಬ್ಬೆರಗಾಗಿ ನೋಡಿತು.
ಹಿಂದೂ ಪರ ಕಾರ್ಯಕರ್ತನ ಹತ್ಯೆಯ ಜವಾಬ್ದಾರಿಯನ್ನು ಬೊಮ್ಮಾಯಿ ಸರ್ಕಾರವೇ ಹೊರಬೇಕು ಎಂಬರ್ಥದಲ್ಲಿ ಅವುಗಳ ಪ್ರತಿಭಟನೆ ನಡೆಯುತ್ತಿರುವುದು ಬಿಜೆಪಿಯ ಮತ್ತೊಂದು ಗುಂಪಿಗೆ ಕಿರಿಕಿರಿಯುಂಟು ಮಾಡಿದೆ.
ಹೀಗಾಗಿ ಬೊಮ್ಮಾಯಿ ವಿರುದ್ಧ ಅಪಸ್ವರ ಎತ್ತುವ ಗುಂಪಿನ ವಿರುದ್ಧ ಈ ಗುಂಪು ಅಸಮಾಧಾನ ವ್ಯಕ್ತಪಡಿಸತೊಡಗಿದೆ.
ಅಂದ ಹಾಗೆ ನಮ್ಮ ಸರ್ಕಾರದ ವಿರುದ್ದ ನಾವೇ ಅಪಸ್ವರ ಎತ್ತುತ್ತಾ ಹೋದರೆ ಸಾಧಿಸುವುದೇನು?ಎಂಬುದು ಈ ಗುಂಪಿನ ಪ್ರಶ್ನೆ.
ನಿಜ,ಈ ಸರ್ಕಾರದಲ್ಲಿ ಬೇರೆ ಪಕ್ಷಗಳಿಂದ ಬಂದವರೇ ಹೆಚ್ಚಿದ್ದಾರೆ.ಮುಖ್ಯಮಂತ್ರಿ ಕೂಡಾ ಹೊರಗಿನಿಂದ ಬಂದವರೇ.
ಇವತ್ತು ಅವರನ್ನು ಅದಕ್ಷರು ಎಂಬ ಹೆಸರಿನಲ್ಲಿ ಕೆಳಗಿಳಿಸಿ ಯಾದ ನ್ನು ತಂದು ಕೂರಿಸುತ್ತೀರಿ?
ಒಂದು ಸಲ ಬೊಮ್ಮಾಯಿ ಅವರಿಗೆ ಅದಕ್ಷರು ಅಂತ ಹಣೆಪಟ್ಟಿ ಹಚ್ಚಿ ಇಳಿಸಿದರೆ ಪ್ರಬಲ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ನಿಲ್ಲುತ್ತದೆ.
ಯಡಿಯೂರಪ್ಪ ಅವರು ಕೆಳಗಿಳಿದ ರೀತಿಯಿಂದ ಅಸಮಾಧಾನದಲ್ಲಿರುವ ವರ್ಗ ಅದು.
ಈಗ ಬೊಮ್ಮಾಯಿ ಅವರಿಗೂ ದೋಷ ಕೂರಿಸಿ ಕೆಳಗಿಳಿಸಿದರೆ,ಸಂಘಪರಿವಾರದ ಮೂಲದವರೇ ಸಿಎಂ ಆಗಲಿ ಎಂದರೆ ನಿಮಗೆ ಮತ ಹಾಕುವವರು ಯಾರು?
ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ಇರುವುದು ನಮ್ಮ ಸರ್ಕಾರ.ಈ ಸರ್ಕಾರವನ್ನು ಭದ್ರಗೊಳಿಸುವುದು ನಮ್ಮ ಅನಿವಾರ್ಯತೆ.
ಇವತ್ತು ಹಿಂದೂ ಕಾರ್ಯಕರ್ತನ ಹತ್ಯೆ ಅದರೆ ಅದನ್ನು ಕೇಳಲು ನಮ್ಮ ಸರ್ಕಾರವಿದೆ.
ಒಂದು ವೇಳೆ ಈ ಸರ್ಕಾರ ಇರಲಿಲ್ಲವೆಂದರೆ ಏನು ಮಾಡುತ್ತಿದ್ದಿರಿ?ಇವತ್ತು ಒಂದು ಘಟನೆಯ ಹಿನ್ನೆಲೆಯಲ್ಲಿ ಸಾಮೂಹಿಕ ರಾಜೀನಾಮೆ ಕೊಡುವ,ಗೃಹ ಸಚಿವರ ಮನೆಗೆ ನುಗ್ಗಿ ಧಾಂದಲೆ ನಡೆಸುವ ಕೆಲಸವಾಗುತ್ತಿದೆ.
ಒಂದು ವೇಳೆ ಬಿಜೆಪಿ ಸರ್ಕಾರದ ಜಾಗದಲ್ಲಿ ಕಾಂಗ್ರೆಸ್ ಸರ್ಕಾರವೋ?ಜೆಡಿಎಸ್ ಸರ್ಕಾರವೋ ಇದ್ದಿದ್ದರೆ ಏನಾಗುತ್ತಿತ್ತು ಊಹಿಸಿ.
ಹೀಗಾಗಿ ಇರುವ ಸರ್ಕಾರಕ್ಕೆ ಬಲ ನೀಡಿ.ಬೊಮ್ಮಾಯಿ ನಮ್ಮವರಲ್ಲದಿದ್ದರೆ ಅವರನ್ನು ನಮ್ಮವರನ್ನಾಗಿ ಮಾಡಿಕೊಳ್ಳಬೇಕು.ಇಲ್ಲದಿದ್ದರೆ ಕಷ್ಟ ಎಂದು ಈ ಗುಂಪು ವಾದಿಸುತ್ತಿದೆ.

ಎಂಟ್ರಿ ಆಗುತ್ತಿದ್ದಾರೆ ಸ್ವಾಮಿ ಭದ್ರಾನಂದ

ಕುತೂಹಲದ ಸಂಗತಿ ಎಂದರೆ ರಾಜ್ಯ ಬಿಜೆಪಿಯಲ್ಲಿನ ಇಂತಹ ಬೆಳವಣಿಗೆಗಳನ್ನು ಕಂಡು ಕಟ್ಟರ್ ಪಂಥೀಯ ಸ್ವಾಮೀಜಿಯೊಬ್ಬರು ಇಲ್ಲಿ ಎಂಟ್ರಿ ಕೊಡಲು ನಿರ್ಧರಿಸಿದ್ದಾರಂತೆ.
ನೆರೆಯ ಕೇರಳದಲ್ಲಿ ವಿವಾದದ ಧೂಳೆಬ್ಬಿಸಿರುವ ಈ ಸ್ವಾಮೀಜಿ ಹೆಸರು ಭದ್ರಾನಂದ.
ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸಿಕೊಳ್ಳುವ ಸ್ವಾಮಿ ಭದ್ರಾನಂದ ಈಗ ಬೊಮ್ಮಾಯಿ ಸರ್ಕಾರದ ವಿರುದ್ದ ಹಿಂದೂಸ್ಥಾನಿ ಪರ ಸಂಘಟನೆಗಳು ಮಾಡುತ್ತಿರುವ ಪ್ರತಿಭಟನೆಯಿಂದ ಅಸಮಾಧಾನಗೊಂಡಿದ್ದಾರಂತೆ.
ಕೇರಳದಲ್ಲಿ ಒಂದಲ್ಲ,ಎರಡಲ್ಲ, ನೂರಾ ಮೂವತ್ತೆಂಟು ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈ ಹತ್ಯೆಗಳ ವಿರುದ್ಧ ನಾವೆಷ್ಟು ಹೋರಾಟ ನಡೆಸಬೇಕಿದೆ ಎಂದರೆ ಅದನ್ನು ಕೇಳಬೇಕಾದ ಕೇರಳ ಸರ್ಕಾರಕ್ಕೆ ಕಿವಿಯೇ ಇಲ್ಲ.
ಆದರೆ ಕರ್ನಾಟಕದಲ್ಲಿನ ಪರಿಸ್ಥಿತಿ ಹಾಗಿಲ್ಲ.ಕೇಳಲು ಮುಖ್ಯಮಂತ್ರಿ ಬೊಮ್ಮಾಯಿ ಇದ್ದಾರೆ.ಇವತ್ತು ಅವರ ವಿರುದ್ಧ ಹೋರಾಡುವುದು ಎಂದರೆ ಬಿಜೆಪಿಯನ್ನು ದುರ್ಬಲ ಮಾಡುವುದು ಅಂತಲೇ ಅರ್ಥ.
ಹೀಗಾಗಿ ನಾವು ಮೊದಲು ಸರ್ಕಾರ ಭದ್ರವಾಗಿರಲು ಏನು ಬೇಕೋ ಅದನ್ನು ಮಾಡಬೇಕು.ಅದನ್ನು ಬಿಟ್ಟು ಸರ್ಕಾರವನ್ನೇ‌ ದುರ್ಬಲ ಮಾಡುತ್ತೇವೆ ಎಂದರೆ ಅಪಾಯದ ಹುತ್ತಕ್ಕೆ ನೀವೇ‌ ಕೈ ಹಾಕುತ್ತಿದ್ದೀರಿ ಎಂದರ್ಥ.
ನೆನಪಿಡಿ,ಇನ್ನು ಎಂಟು ವರ್ಷ ಕಳೆಯುವಷ್ಟರಲ್ಲಿ ಕರ್ನಾಟಕವನ್ನು ಮತ್ತೊಂದು ಕೇರಳವನ್ನಾಗಿ ಮಾಡುವ ಸಂಚು ನಡೆಯುತ್ತಿದೆ.
ಈ ಸಂಚಿಗೆ ನಿಮ್ಮ ಕೈಯ್ಯಾರೆ ನೀವೇ ಬೆಂಬಲ ಕೊಡಬೇಡಿ ಅಂತ ಸ್ವಾಮಿ ಭದ್ರಾನಂದ ರಾಜ್ಯದ ಕೆಲ ಬಿಜೆಪಿ ನಾಯಕರಿಗೆ ಹೇಳಿದ್ದಾರೆ.
ಅಷ್ಟೇ ಅಲ್ಲ,ಕರ್ನಾಟಕಕ್ಕೆ ಬಂದು ಬೊಮ್ಮಾಯಿ ಸರ್ಕಾರದ ಪರ,ಮುಸ್ಲಿಂ ಕೋಮುವಾದದ ವಿರುದ್ಧ ಧ್ವನಿ ಎತ್ತಲು ನಿರ್ಧರಿಸಿದ್ದಾರಂತೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆಮ್ಮದಿ ಕಳೆದುಕೊಳ್ಳುತ್ತಿರುವುದರ ಹಿಂದೆ ಏನೇನು ನಡೆಯುತ್ತಿದೆ ಅಂತ ನೋಡಿದರೆ ವಿಸ್ಮಯವಾಗುತ್ತದೆ.

ಜನೋತ್ಸವ ರದ್ದಾಗಿದ್ದೇಕೆ?

ಅಂದ ಹಾಗೆ ತಮ್ಮ ಸರ್ಕಾರಕ್ಕೆ ಒಂದು ವರ್ಷ ಭರ್ತಿಯಾದ ಹಿನ್ನೆಲೆಯಲ್ಲಿ ಜನೋತ್ಸವ ಕಾರ್ಯಕ್ರಮ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದರು.
ಇದೇ ಕಾರಣಕ್ಕಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಾಸಕರು,ಅಧಿಕಾರಿಗಳ ಸಮ್ಮುಖದಲ್ಲಿ ಒಂದು ಕಾರ್ಯಕ್ರಮ,ದೊಡ್ಡ ಬಳ್ಳಾಪುರದಲ್ಲಿ ಒಂದು ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದರು.
ಆದರೆ ಈ ಕಾರ್ಯಕ್ರಮಗಳನ್ನು ರಾತ್ರೋರಾತ್ರಿ ರದ್ದುಗೊಳಿಸಿದ ಬೊಮ್ಮಾಯಿ,ಹಿಂದೂ‌ ಕಾರ್ಯಕರ್ತನ ಹತ್ಯೆಯ ಬೆಳವಣಿಗೆಯಿಂದ ನನ್ನ ನೆಮ್ಮದಿ ಹೋಗಿದೆ ಎಂದು ಹೇಳಿಕೊಂಡಿದ್ದರು.
ಆದರೆ ಈ ಕಾರ್ಯಕ್ರಮ ರದ್ದಾಗಿದ್ದಕ್ಕೂ,ಹಿಂದೂ‌ ಕಾರ್ಯಕರ್ತನ ಕೊಲೆಗೂ ಸಂಬಂಧವಿಲ್ಲ ಎಂಬ ಮಾತು ಬಿಜೆಪಿಯ ಒಳವಲಯಗಳಲ್ಲಿ ಕೇಳುತ್ತಿದೆ.
ಅದರ ಪ್ರಕಾರ ಜನೋತ್ಸವ ಕಾರ್ಯಕ್ರಮದ ಸಿದ್ಧತೆಗಳು ನಡೆಯುತ್ತಿದ್ದಾಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಒಂದು ಪತ್ರ ಬರೆದರಂತೆ.
ಇದು ಬೊಮ್ಮಾಯಿ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಬಿಂಬಿಸುತ್ತಿರುವ ಸಮಾವೇಶ.ಆದರೆ ನಾನು ಈ ಸರ್ಕಾರವನ್ನು ಅಸ್ತಿತ್ವಕ್ಕೆ ತಂದು ಎರಡು ವರ್ಷ ಆಡಳಿತ ನೀಡಿದ್ದೇನೆ.ಅದನ್ನು ಮರೆಮಾಚುವ ಯತ್ನಗಳು ನಡೆದಿವೆ.ಹೀಗಾಗಿ ಇದರಲ್ಲಿ ನಾನು ಭಾಗವಹಿಸುವುದಿಲ್ಲ ಅಂತ ಈ ಪತ್ರದಲ್ಲಿ ಅವರು ಅಸಮಾಧಾನ ತೋಡಿಕೊಂಡಿದ್ದರಂತೆ.
ಪರಿಣಾಮ?ಮುಂದೇನಾಗಬಹುದು ಅಂತ ಯೋಚಿಸಿದ ನಡ್ಡಾ ಬೆಂಗಳೂರಿಗೆ ಬರುವ ಕಾರ್ಯಕ್ರಮವನ್ನು ರದ್ದುಪಡಿಸಿದರಂತೆ.
ಇದರ ಸುಳಿವು ಪಡೆದ ಬೊಮ್ಮಾಯಿ ಹಿಂದೂ‌ ಕಾರ್ಯಕರ್ತನ ಹತ್ಯೆಯ ಕಾರಣ ನೀಡಿ‌ ಜನೋತ್ಸವ ಕಾರ್ಯಕ್ರಮವನ್ನು ರದ್ದುಪಡಿಸಿದರಂತೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here