ಹೊಸಪೇಟೆ(ವಿಜಯನಗರ),ಆ.18: ಹೊಸಪೇಟೆಯ ತಾಲೂಕು ಪಂಚಾಯತಿ ಆಡಳಿತಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಉಪ ಅರಣ್ಯಸಂರಕ್ಷಣಾಧಿಕಾರಿ ಸಿದ್ದರಾಮಪ್ಪ ಅವರು ಅಂತರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ ನಿಮಿತ್ತ ಅಂತರಾಷ್ಟ್ರೀಯ ಜೀವವೈವಿಧ್ಯ ಅಭಿಯಾನ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯತಿಯ ವಿದ್ಯಾರಣ್ಯ ಸಭಾಂಗಣದಲ್ಲಿ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿ ತಾಲೂಕಿನ ಎಲ್ಲೆಡೆ ಜನತಾ ಜೀವವೈವಿಧ್ಯ ಅಭಿಯಾನ ಕಾರ್ಯಕ್ರಮವನ್ನು ಆರಂಭ ಮಾಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕರೆ ನೀಡಿದರು.
ಹೊಸಪೇಟೆ ತಾಲೂಕು ವ್ಯಾಪ್ತಿಯಲ್ಲಿನ ಕಮಲಾಪುರದ ಕಂದುಬಾಳೆ, ಚಿಲಕನಹಟ್ಟಿ ಬಳಿಯ ತಾಳೆವನ, ಹಂಪಿ ಬಳಿಯ ಮಾವಿನ ತೋಪು ಮತ್ತು ಸುಗಂಧಬಾಳೆಗಳನ್ನು ಪಾರಂಪಾರಿಕ ಮತ್ತು ಜೀವ ವೈವಿಧ್ಯಗಳೆಂದು ಘೊಷಿಸಿ ಇವುಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಅಂತರಾಷ್ಟ್ರೀಯ ಜೀವ ವೈವಿದ್ಯ ಸಮಿತಿಯ ಸದಸ್ಯ ಜಿ.ವಿಶ್ವಮೂರ್ತಿ ಅವರು ಜೀವ ವೈವಿಧ್ಯದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು, ಮತ್ತು ತಾಲೂಕು ಪಂಚಾಯತಿಯ ಸಿಬ್ಬಂದಿ ಮತ್ತು ಇತರರು ಇದ್ದರು.