ಮಂಡ್ಯ,ಸೆ 17 :- ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ ನಡೆಯುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಜಿಲ್ಲೆಯ ವಿವಿಧ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಮಂಡ್ಯ ತಾಲೂಕು ಗುತ್ತಲು ಮತ್ತು ಅರ್ಕೇಶ್ವರ ನಗರ ಸರ್ಕಾರಿ ಶಾಲೆಗಳು, ಮದ್ದೂರು ತಾಲೂಕಿನ ಭಾರತಿನಗರ ಮತ್ತು ಮಣಿಗೆರೆ ಸರ್ಕಾರಿ ಶಾಲೆಗಳು, ಮಳವಳ್ಳಿ ತಾಲೂಕು ನೆಲಮಾಕನಹಳ್ಳಿ ಮತ್ತು ಕಾಗೆಪುರ ಸರ್ಕಾರಿ ಶಾಲೆಗಳು, ಮತ್ತು ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಮೇಳಾಪುರ ಮತ್ತು ಚಂದಗಾಲು ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಶೇಕಡ ನೂರರಷ್ಟು ಲಸಿಕೆಯನ್ನು ನೀಡಲು ಸೂಚನೆ ನೀಡಿದರು.
ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು. ಸಾಮಾಜಿಕ ಅಂತರ , ಮಾಸ್ಕ್ ಧರಿಸುವುದು , ಸ್ಯಾನಿಟೈಜರ್ ಬಳಕೆ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು .
ಈ ಸಂದರ್ಭದಲ್ಲಿ ಆಯಾ ತಾಲ್ಲೂಕಿನ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.